ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ವ್ಯಾಟಿಕನ್ ಗೆ

ಭಾರತ ಸರಕಾರದ ಪರವಾಗಿ ಸಂತಾಪ ಸೂಚಿಸಲು ಹಾಗೂ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು, ಭಾರತದ ಅಧಿಕೃತ ಪ್ರತಿನಿಧಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 25 ಹಾಗೂ 26ರಂದು ವ್ಯಾಟಿಕನ್ ಸಿಟಿಯಲ್ಲಿ ಇರುತ್ತಾರೆ. ಏಪ್ರಿಲ್ 26 ರಂದು, ವ್ಯಾಟಿಕನ್ ಸಿಟಿಯ ಸೈಂಟ್ ಪೀಟರ್ಸ್ ಸ್ಕ್ವೇರ್ನಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯ ಬಲಿಪೂಜೆಯಲ್ಲಿ ವಿಶ್ವದಾದ್ಯಂತದ ಗಣ್ಯರ ಜೊತೆಗೆ ರಾಷ್ಟ್ರಪತಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಜನರ ಮೇಲಿನ ಅವರ ಪ್ರೀತಿಯನ್ನು ಸದಾ ನೆನಪಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಏಪ್ರಿಲ್ 22 ರಂದು ನವದೆಹಲಿಯಲ್ಲಿರುವ ಅಪೋಸ್ಟೋಲಿಕ್ ನನ್ಸಿಯೇಚರ್ (ಭಾರತದಲ್ಲಿನ ವ್ಯಾಟಿಕನ್ ರಾಯಭಾರ ಕಚೇರಿ)ಗೆ ಭೇಟಿ ನೀಡಿ ಸಂತಾಪ ಸೂಚಕ ಪುಸ್ತಕಕ್ಕೆ ಸಹಿ ಹಾಕಿದ್ದರು.
ಪೋಪ್ ಫ್ರಾನ್ಸಿಸ್ ಅವರ ನಿಧನದ ಹಿನ್ನೆಲೆಯಲ್ಲಿ ಭಾರತವು ಮೂರು ದಿನಗಳ ಶೋಕಾಚರಣೆಯನ್ನೂ ಘೋಷಿಸಿತ್ತು.