ಉಡುಪಿ ಧರ್ಮಕ್ಷೇತ್ರದ ನೂತನ ಶ್ರೇಷ್ಠ ಗುರುಗಳಾಗಿ ವಂದನೀಯ ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ಲೂವಿಸ್ ನೇಮಕ
ಬಿಷಪ್ ಪರಮ ಪೂಜ್ಯ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರಿಂದ ಅಧಿಕಾರ ಸ್ವೀಕಾರ

ಉಡುಪಿ ಧರ್ಮಕ್ಷೇತ್ರದ ನೂತನ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರು ಉಡುಪಿ ಧರ್ಮಕ್ಷೇತ್ರಕ್ಕೆ ನೂತನ ಶ್ರೇಷ್ಠ ಗುರುಗಳಾಗಿ (ವಿಕಾರ್ ಜನರಲ್) ವಂದನೀಯ ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ಲೂವಿಸ್ ಅವರನ್ನು ನೇಮಕ ಮಾಡಿದ್ದಾರೆ. ಪ್ರಸ್ತುತ ಇವರು ಕಳತ್ತೂರು ನಿತ್ಯಾದರ್ ಮಾತೆ ಚರ್ಚ್ ಇದರ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು.


ಇಂದು ಮೇ 02ರಂದು ಶನಿವಾರ ಉಡುಪಿ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಧಾರ್ಮಿಕ ವಿಧಿಯೊಂದಿಗೆ ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ಲೂವಿಸ್ ಅವರು ಅಧಿಕಾರ ಸ್ವೀಕರಿಸಿದರು. ಬಿಷಪ್ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರು ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿ, ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಧರ್ಮಕ್ಷೇತ್ರದ ಚಾನ್ಸ್ ಲರ್ ಅತೀ ವಂದನೀಯ ಫಾದರ್ ಸ್ಟೀಫನ್ ಡಿಸೋಜ, ಕನ್ಸಲ್ಟರ್ ಮಂಡಳಿಯ ಸದಸ್ಯರು, ವಂದನೀಯ ಫಾದರ್ ಜಿತೇಶ್ ಕ್ಯಾಸ್ಟೆಲಿನೊ ಹಾಗೂ ಪ್ರೊಕ್ಯೂರೇಟರ್ ಅತೀ ವಂದನೀಯ ಫಾದರ್ ಮಾರ್ಸೆಲ್ ಡಿಸೋಜ ಉಪಸ್ಥಿತರಿದ್ದರು.



ಪರಿಚಯ ಮತ್ತು ಸೇವೆ:
ಮೂಲತಃ ಪೆರ್ನಾಲ್ ಫಾತಿಮಾ ಮಾತೆ ಚರ್ಚ್ ನ ಫಾದರ್ ಫ್ರಾನ್ಸಿಸ್ ಅವರು 1960 ಅಕ್ಟೋಬರ್ 20ರಂದು ಜೋನ್ ಮತ್ತು ತೆರೇಸಾ ಲೂವಿಸ್ ದಂಪತಿಗಳ ಪುತ್ರನಾಗಿ ಜನಿಸಿದರು. 1976 ಜೂನ್ 30ರಂದು ಮಂಗಳೂರು ಧರ್ಮಕ್ಷೇತ್ರದ ಸೆಮಿನರಿ ಸೇರಿದ ಇವರು, 1987 ಏಪ್ರಿಲ್ 28ರಂದು ಗುರುದೀಕ್ಷೆ ಪಡೆದರು.


ಸುದೀರ್ಘ 39 ವರ್ಷಗಳ ಸೇವಾವಧಿ:
* ಮಿಷನರಿ ಸೇವೆ: 1987 ರಿಂದ 1997 ರವರೆಗೆ ಬೀದರ್ ಮಿಷನ್ನ ವಿವಿಧ ಭಾಗಗಳಲ್ಲಿ ಸೇವೆ.
* ಪಾಲನಾ ಸೇವೆ: ಬಜಾಲ್, ಮಣಿಪಾಲ (2008-2016), ಮುದರಂಗಡಿ (2016-2022) ಮತ್ತು ಕಳತ್ತೂರು ಚರ್ಚ್ಗಳಲ್ಲಿ ಧರ್ಮಗುರುಗಳಾಗಿ ಸೇವೆ.
* ಸಂವಹನ ಕ್ಷೇತ್ರ: ಕೆನರಾ ಕಮ್ಯುನಿಕೇಶನ್ ಸೆಂಟರ್, ಸಂದೇಶ (ಪ್ರಾದೇಶಿಕ ಸಂವಹನ ಕೇಂದ್ರ) ನಿರ್ದೇಶಕರಾಗಿ ಹಾಗೂ ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ (PRO) ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ.




ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ಲೂವಿಸ್ ಅವರು 2026 ಮೇ 18ರಿಂದ ಜಾರಿಗೆ ಬರುವಂತೆ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ನ ರೆಕ್ಟರ್ ಮತ್ತು ಧರ್ಮಗುರುಗಳಾಗಿ ಹಾಗೂ ಕಲ್ಯಾಣಪುರ ವಲಯದ ಪ್ರಧಾನ ಧರ್ಮಗುರುಗಳಾಗಿಯೂ (Vicar Forane) ಕಾರ್ಯನಿರ್ವಹಿಸಲಿದ್ದಾರೆ.



