May 15, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಕೀಲರು, ನೋಟರಿ ವಿರುದ್ಧ ವಿಚಾರಣೆಗೆ ಸರಕಾರದ ಅನುಮತಿ ಅಗತ್ಯ – ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಯಾವುದೇ ಲೋಪದೋಷಕ್ಕಾಗಿ ವಕೀಲರು ಅಥವಾ ನೋಟರಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೆ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರದ ಅನುಮತಿ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮಂಗಳೂರಿನ ಪ್ರವೀಣ್ ಕುಮಾರ್ ಅದ್ಯಪಾಡಿ ಮತ್ತು ಈಶ್ವರ ಪೂಜಾರಿ ಎಂಬ ಇಬ್ಬರು ನೋಟರಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಪೋಕ್ಸೊ ಪ್ರಕರಣವೊಂದರ ಆರೋಪಿಗೆ ಸಹಾಯ ಮಾಡುವ ಉದ್ದೇಶದಿಂದ ಸಂತ್ರಸ್ತೆಯ ವಯಸ್ಸನ್ನು ಕುಶಲತೆಯಿಂದ ತಿದ್ದಿದ ಮತ್ತು ಅದರ ಆಧಾರದಲ್ಲಿ ಪ್ರಮಾಣ ಪತ್ರದ ಮೂಲಕ ವಯಸ್ಸು ಘೋಷಿಸಿಕೊಂಡ ಮಹತ್ವದ ದಾಖಲೆಯನ್ನು ನೋಟರಿ ವಕೀಲರು ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಪೋಕ್ಸೋ ಪ್ರಕರಣದ ಪ್ರಮುಖ ಆರೋಪಿಯು ಎರಡರಿಂದ ಏಳನೇ ಆರೋಪಿಗಳ ಜೊತೆ ಸೇರಿ ಸಂತ್ರಸ್ತೆಯ ವಯಸ್ಸನ್ನು 25-9-1999ರ ಬದಲಿಗೆ 25-9-2000 ಎಂದು ಬದಲಿಸಿದ್ದರು. ಈ ದಾಖಲೆಯನ್ನು ಪ್ರಕರಣದ ಎಂಟನೇ ಆರೋಪಿಯಾದ ನೋಟರಿ ವಕೀಲರು ತಯಾರಿಸಿದ್ದರು ಮತ್ತು ಅದರ ಆಧಾರದಲ್ಲಿ ಹತ್ತನೇ ಆರೋಪಿಯು ಘೋಷಣಾ ಅಫಿದಾವಿತ್ ತಯಾರಿಸಿದ್ದರು. ಆ ಬಳಿಕ ಮೊದಲನೇ ಆರೋಪಿಯು ಸಂತ್ರಸ್ತೆಯನ್ನು ಮಂಗಳೂರಿನ ಅರ್ಯ ಸಮಾಜದಲ್ಲಿ ಮದುವೆಯಾಗಿದ್ದರು. ಆರೋಪ ಪಟ್ಟಿ ಸಲ್ಲಿಕೆಯ ಮೊದಲೇ ಆರೋಪಿಗಳಾದ ನೋಟರಿ ವಕೀಲರು ತಮ್ಮ ಅಧಿಕಾರವನ್ನು ಬಳಸಿ ವಯಸ್ಸಿನ ವ್ಯತ್ಯಾಸವನ್ನು ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಆದರೆ, ಆರೋಪಿ ಪರ ವಾದ ಮಂಡಿಸಿದ ವಕೀಲರು, ನೋಟರಿ ಕಾಯ್ದೆ- 1952 ಸೆಕ್ಷನ್ 13ರ ಪ್ರಕಾರ ಆರೋಪಿಗಳ ವಿರುದ್ಧ FIR ದಾಖಲಿಸಿದ್ದು ತಪ್ಪು ಎಂದು ಅಭಿಪ್ರಾಯಪಟ್ಟರು. ಅಫಿದಾವಿತ್ ದಾಖಲೆಗೆ ಸಹಿ ಹಾಕಿದ್ದಕ್ಕಾಗಿ ನೋಟರಿಗಳ ವಿರುದ್ಧ ಐಪಿಸಿ, ಪೋಕ್ಸೊ ಕಾಯಿದೆ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆಯಿಂದ ಆರೋಪ ಹೊರಿಸಲಾಗಿತ್ತು.

ನೋಟರಿ ಕಾಯ್ದೆಯ ಸೆಕ್ಷನ್ 13 ರ ಪ್ರಕಾರ, ವಕೀಲರು ಮತ್ತು ನೋಟರಿ ಮಾಡಿದ ಅಪರಾಧಗಳಿಗೆ ಕಾಗ್ನಿಸೆನ್ಸ್ ತೆಗೆದುಕೊಳ್ಳುವುದಕ್ಕೆ ನಿರ್ಬಂಧವಿದೆ. ನೋಟರಿ ಕಾಯ್ದೆಯಡಿ ತನಿಖಾಧಿಕಾರಿ ಕೇಂದ್ರ ಯಾ ರಾಜ್ಯ ಸರ್ಕಾರದ ಅನುಮತಿ ಪಡೆದ ನಂತರವೇ ವಕೀಲರ ವಿರುದ್ಧ ಕ್ರಮ ಜರುಗಿಸಬೇಕು. ಈ ಪ್ರಕರಣದಲ್ಲಿ ಪೊಲೀಸರು ಈ ಕ್ರಮವನ್ನು ಅನುಸರಿಸಿಲ್ಲ. ಹಾಗಾಗಿ, ನೋಟರಿ ವಕೀಲರ ವಿರುದ್ಧದ FIR ರದ್ದುಪಡಿಸವುಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತು.

You may also like

News

ಶ್ರೀರಾಮ್ ಫೈನಾನ್ಸ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ಮಾನ

ಶ್ರೀರಾಮ್ ಫೈನಾನ್ಸ್ ವತಿಯಿಂದ ಶ್ರೀರಾಮ್ ಗ್ರಾಹಕರ ಮಕ್ಕಳಿಗೆ ಸ್ಕಾಲರ್ಷಿಪ್ ವಿತರಣೆ ಮಾಡುತ್ತಿದ್ದಾರೆ. ಪ್ರಸ್ತುತ ವರ್ಷದಲ್ಲಿ 8ನೇ ತರಗತಿಯಿಂದ 11ನೇ ತರಗತಿಯ ವರೆಗೆ ಕಲಿಯುತ್ತಿರುವ ಗ್ರಾಹಕರ 60% ಮೇಲ್ಪಟ್ಟು
News

ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಲು ತಂಡ ರಚನೆ

ಮಂಗಳೂರು:  ಜಿಲ್ಲೆಯ ರಾಜ್ಯ ಮತ್ತು ಗ್ರಾಮೀಣ ಭಾಗದ ರಸ್ತೆ ಬದಿಯ ತ್ಯಾಜ್ಯ ಬೀಳುವುದನ್ನು ತಡೆಯುವ ಸಲುವಾಗಿ “ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು ನಮ್ಮೊಂದಿಗೆ ನೀವು” ಅಭಿಯಾನ ಯಶ್ವಸ್ವಿಯಾಗಿ ಕೈಗೊಳ್ಳುವಂತೆ

You cannot copy content of this page