ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಿಂಜ ಹಾಗೂ ವೀರಕಂಭ ಒಕ್ಕೂಟದ ವಾರ್ಷಿಕೋತ್ಸವ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಕೆಲಿಂಜ ಹಾಗೂ ವೀರಕಂಭ ಒಕ್ಕೂಟದ 20ನೇ ವಾರ್ಷಿಕೋತ್ಸವವು ಅಕ್ಟೋಬರ್ 5ರಂದು ಭಾನುವಾರ ಕೆಲಿಂಜ ಶ್ರೀಕೇತನ ಸಭಾಭವನದಲ್ಲಿ ಕೆಲಿಂಜ ಒಕ್ಕೂಟ ಅಧ್ಯಕ್ಷ ದಯಾನಂದ ಗೌಡರವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಯಶಸ್ವಿ ಕಾರ್ಯಕ್ರಮಗಳು ನಡೆಯುತಿದ್ದು ಶ್ರೀನಿಕೇತನ ಸಭಾಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನೀಡಲ್ಪಟ್ಟ ಅನುದಾನವನ್ನು ಸ್ಮರಿಸಿದರು.

ವಿಟ್ಲ ನಗರ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನೈತೊಟ್ಟು ಮಾತನಾಡಿ ಪ್ರತಿ ಕ್ಷೇತ್ರದಲ್ಲೂ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಸುಭಿಕ್ಷ ಸಮಾಜ ನಿರ್ಮಾಣದಲ್ಲಿ ವೀರೇಂದ್ರ ಹೆಗ್ಡೆಯವರ ದೂರದೃಷ್ಟಿಯ ಯೋಚನೆಗಳು ಬಹಳ ಪ್ರಾಮುಖ್ಯತೆ ಪಡೆದಿದೆ ಎಂದರು. ವಿಟ್ಲ ಗ್ರಾಮೀಣ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ. ಸಂಘದ ಸದಸ್ಯರಿಗೆ ಅವರ ಅಗತ್ಯತೆಗೆ ತಕ್ಕಂತೆ ಯಾವುದೇ ವಿಶೇಷ ದಾಖಲೆಗಳನ್ನು ಪಡೆಯದೆ ಶೀಘ್ರದಲ್ಲಿ ಸಾಲ ಒದಗಿಸುತ್ತಿದ್ದು ಅದನ್ನು ಸದಸ್ಯರು ಸರಿಯಾದ ಕಾರ್ಯಗಳಿಗೆ ವಿನಿಯೋಗಿಸಿ, ಯಾವುದೇ ಅಪಪ್ರಚಾರಕ್ಕೆ ಬಲಿಯಾಗದೆ ಸಮಯಕ್ಕೆ ಸರಿಯಾದ ಪಾವತಿಸಿ ಎಂದರು. ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಯೋಜನೆಯ ನಡೆದು ಬಂದ ದಾರಿ, ಶ್ರೀ ಕ್ಷೇತ್ರದಿಂದ ಸಮಾಜಕ್ಕೆ ಕೊಟ್ಟ ಕೊಡುಗೆಗಳು, ಕ್ಷೇತ್ರದ ವತಿಯಿಂದ ನಡೆಯುವ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಳೆದ 20 ವರ್ಷಗಳಿಂದ ಒಕ್ಕೂಟದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದವರನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತ, ಕಲ್ಲಡ್ಕ ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ, ಶ್ರೀ ಶಾರದಾ ಭಜನ ಮಂದಿರ ವೀರಕಂಬ ಸಂಚಾಲಕ ನಾರಾಯಣ ಭಟ್, ವೀರಕಂಬ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವೀರಪ್ಪ ಮೂಲ್ಯ, ದೈವ ಪರಿಚಾರಕ ಶೇಖರ ಪೂಜಾರಿ, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ದೇವಾಡಿಗರ ಭವನ ಮಂಗಳಪಧವ್ ಅಧ್ಯಕ್ಷ ಯತೀಶ್, ವಿರಕಂಬ ಒಕ್ಕೂಟ ಅಧ್ಯಕ್ಷ ಶಾಂಭವಿ ಆಚಾರ್ಯ, ಬೋಳಂತೂರು ಒಕ್ಕೂಟ ಅಧ್ಯಕ್ಷ ಸೀತಾ, ಗೊಳ್ತಮಜಲು ಎ. ಒಕ್ಕೂಟ ಅಧ್ಯಕ್ಷೆ ಪ್ರೇಮ, ಮಾಮೇಶ್ವರ ಒಕ್ಕೂಟ ಅಧ್ಯಕ್ಷ ಹರೀಶ್ ವಿ., ವೀರಕಂಬ ಒಕ್ಕೂಟ ಅಧ್ಯಕ್ಷ ಶಾಂಭವಿ ಆಚಾರ್ಯ, ನೆಟ್ಲಾ ಒಕ್ಕೂಟ ಅಧ್ಯಕ್ಷ ಸೀತಾರಾಮ್ ಮೊದಲಾದವರು ಉಪಸ್ಥಿತರಿದ್ದರು.



ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್ ಸ್ವಾಗತಿಸಿ, ಸೇವಾಪ್ರತಿನಿಧಿ ವಿಜಯ ವರದಿ ವಾಚಿಸಿ, ರಂಜಿನಿ ವಂದಿಸಿದರು. ರವೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ, ಹಾಗೂ ಸಭಾ ಕಾರ್ಯಕ್ರಮದ ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮ ಜರಗಿತು.




