April 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ನನ್ನ ಪ್ಲಾಸ್ಟಿಕ್ – ನನ್ನ ಜವಾಬ್ದಾರಿ” ಕಥೊಲಿಕ್ ಸಭಾ ದೇಲಂತಬೆಟ್ಟು ಘಟಕದ ಮಹಾ ಆಂದೋಲನ

ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪಯೋಗಿಸಿ ಪರಿಸರ ಪ್ರೇಮಿ ಆಸನಗಳ ನಿರ್ಮಾಣ ಮಾಡುವ ವಿಶಿಷ್ಟ ಯೋಜನೆ

ಚರ್ಚ್ ಧರ್ಮಗುರು ರಿಚರ್ಡ್ ಡಿಸೋಜರವರ  ಮಾರ್ಗದರ್ಶನ ಹಾಗೂ ಪ್ರೋತ್ಸಾಹದಲ್ಲಿ ಪ್ಲಾಸ್ಟಿಕ್ ಮುಕ್ತ ಧರ್ಮ ಕೇಂದ್ರ

ದೇಲಂತಬೆಟ್ಟು ಸಂತ ಪೌಲರ ದೇವಾಲಯದ ಧರ್ಮಗುರು ವಂದನೀಯ ಫಾದರ್ ರಿಚರ್ಡ್ ಡಿಸೋಜರವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ದೇಲಂತಬೆಟ್ಟು ಘಟಕದ ವತಿಯಿಂದ ನನ್ನ ಪ್ಲಾಸ್ಟಿಕ್ನನ್ನ ಜವಾಬ್ದಾರಿಎಂಬ ಆಂದೋಲನವು 2025 ಅಕ್ಟೋಬರ್ 2 ರಿಂದ ಡಿಸೆಂಬರ್ 31ರ ತನಕ ನಡೆಯಲಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪಯೋಗಿಸಿ ಪರಿಸರ ಪ್ರೇಮಿ ಆಸನಗಳ ನಿರ್ಮಾಣ ಮಾಡುವ ವಿಶಿಷ್ಟ ಯೋಜನೆ ಈ ಆಂದೋಲನದ ಪ್ರಮುಖ ಭಾಗವಾಗಿದೆ.

ಪ್ಲಾಸ್ಟಿಕ್ ಮುಕ್ತ ಧರ್ಮ ಕೇಂದ್ರ

ಸಂತ ಪೌಲರ ದೇವಾಲಯದ ಧರ್ಮಗುರು ವಂದನೀಯ ಫಾದರ್ ರಿಚರ್ಡ್ ಡಿಸೋಜರವರು ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ಉತ್ತೇಜಿಸಲು ವಿಶಿಷ್ಟ ಪ್ರಯತ್ನ ಕೈಗೊಂಡಿದ್ದಾರೆ. ಕೇವಲ 54 ಕುಟುಂಬಗಳಿರುವ ಈ ಚರ್ಚ್‌ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಬಟ್ಟೆಯ ಚೀಲಗಳು ಹಾಗೂ ಪುನರ್ವಿನಿಯೋಗ ಸಾಧ್ಯ ಪಾತ್ರೆಗಳನ್ನು ಬಳಸುವಂತೆ ಸೂಚಿಸಲಾಗಿದೆ. ಮನೆಮನೆಗೂ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಧರ್ಮಗುರು, ಮಕ್ಕಳಿಗೆ ಶಾಲಾ ಮಟ್ಟದಲ್ಲೇ ಪ್ಲಾಸ್ಟಿಕ್‌ನ ಹಾನಿ ಕುರಿತು ತಿಳಿಸಿ ಪರಿಸರ ಸ್ನೇಹಿ ಬದುಕಿನತ್ತ ಪ್ರೇರೇಪಿಸುತ್ತಿದ್ದಾರೆ. ಈ ಪ್ರಯತ್ನದಿಂದ ಸಂತ ಪೌಲರ ದೇವಾಲಯದ ಪ್ರದೇಶವು ಪ್ಲಾಸ್ಟಿಕ್ ಮುಕ್ತ ಧರ್ಮ ಕೇಂದ್ರ ಎಂಬ ಮಾದರಿಯತ್ತ ಬೆಳೆಯುತ್ತಿದೆ.

ಆಂದೋಲನವು ನಿವೃತ್ತ ಧರ್ಮಗುರು ಪೀಟರ್ ಸೆರಾವೋ ಇವರ ದಿವ್ಯ ಹಸ್ತದಲ್ಲಿ ಉದ್ಘಾಟನೆಗೊಂಡಿದೆ. ವೇದಿಕೆಯಲ್ಲಿ ಧರ್ಮಕೇಂದ್ರದ ಧರ್ಮಗುರು ವಂದನೀಯ ಫಾದರ್ ರಿಚರ್ಡ್ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಸೆಲಿನಾ ಡಿಸೋಜ, ಕಾರ್ಯದರ್ಶಿ ರೋಬರ್ಟ್ ಡಿಸೋಜ, ಆಯೋಗಗಳ ಸಂಚಾಲಕ ಆಲ್ಬರ್ಟ್ ಫೆಲಿಕ್ಸ್ ಡಿಸೋಜ, ಕಥೊಲಿಕ್ ಸಭಾ ವಿಟ್ಲ ವಲಯದ ಉಪಾಧ್ಯಕ್ಷ ರಾಜೇಶ್ ಡಿಸೋಜ, ಘಟಕದ ಅಧ್ಯಕ್ಷ ರಾಜೇಶ್ ಡಿಸೋಜ ಕೊಪ್ಪಳ, ಕಾರ್ಯದರ್ಶಿ ಬೊನಾ ಡಿಸೋಜ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಪ್ಲಾಸ್ಟಿಕ್ ಮುಕ್ತ ದೇಲಂತಬೆಟ್ಟಿನ ಕನಸು ಹೊತ್ತ ಆಂದೋಲನ

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಂದನೀಯ ಫಾದರ್ ರಿಚರ್ಡ್ ಡಿಸೋಜರವರು, “ದೇಲಂತಬೆಟ್ಟಿನ ಈ ಆಂದೋಲನವು ಪ್ಲಾಸ್ಟಿಕ್ ಮುಕ್ತ ಕನಸಿಗೆ ಮೊದಲ ಹೆಜ್ಜೆ. ಸಂಗ್ರಹಿಸಿದ ಪ್ಲಾಸ್ಟಿಕ್‌ನಿಂದ ಚರ್ಚ್ ವಠಾರದಲ್ಲಿ ಪರಿಸರ ಪ್ರೇಮಿ ಆಸನಗಳನ್ನು ನಿರ್ಮಾಣ ಮಾಡಲಾಗುತ್ತದೆ. ಒಂದು ಆಸನ ನಿರ್ಮಿಸಲು ಸುಮಾರು 200 ಪ್ಲಾಸ್ಟಿಕ್ ಬಾಟಲಿಗಳು ಹಾಗೂ 150 ಕಿಲೋ ಪ್ಲಾಸ್ಟಿಕ್ ತ್ಯಾಜ್ಯ ಅಗತ್ಯವಿದೆ,” ಎಂದು ತಿಳಿಸಿದರು.

ಯೋಜನೆ ಮೂರು ಹಂತಗಳಲ್ಲಿ ನಡೆಯಲಿದೆ

1️⃣ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಸಂಗ್ರಹ

2️⃣ ಪ್ಲಾಸ್ಟಿಕ್ ತುಂಬಿಸಿ ಬಾಟಲಿಗಳ ಸಿದ್ಧತೆ

3️⃣ ಪರಿಸರ ಪ್ರೇಮಿ ಆಸನಗಳ ನಿರ್ಮಾಣ

ಅಗತ್ಯ ಪ್ಲಾಸ್ಟಿಕ್ ತ್ಯಾಜ್ಯದ ಕೊರತೆ ಇದ್ದಲ್ಲಿ ಯೋಜನೆಯನ್ನು ಪಂಚಾಯತ್ ಹಾಗೂ ಕಥೊಲಿಕ್ ಸಭಾ ವಲಯ ಮಟ್ಟಕ್ಕೂ ವಿಸ್ತರಿಸುವ ಉದ್ದೇಶ ಇದೆ. ಅತ್ಯಧಿಕ ಪ್ಲಾಸ್ಟಿಕ್ ಸಂಗ್ರಹಿಸಿದವರಿಗೆ ವಿಶೇಷ ಬಹುಮಾನವನ್ನು ಘೋಷಿಸಲಾಗಿದೆ.

ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮನೆಯಲ್ಲಿ ಇರುವ ಸ್ಟೆಟ್, ಕೊಕೊ ಕೋಲಾ, ನೀರಿನ ಬಾಟಲಿ (ಸಣ್ಣ-ದೊಡ್ಡ) ಹಾಗೂ ಎಲ್ಲಾ ರೀತಿಯ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಿ ಆಯೋಜಕರಿಗೆ ತಲುಪಿಸಲು ಕೋರಲಾಗಿದೆ.

ಸಂಪರ್ಕಕ್ಕಾಗಿ:

ರಾಜೇಶ್ ಡಿಸೋಜ, ಅಧ್ಯಕ್ಷರು –  9845405167

ಬೊನವೆಂಚರ್ ಡಿಸೋಜ, ಕಾರ್ಯದರ್ಶಿ – 9482251297

ಧರ್ಮಗುರು, ವಂದನೀಯ ಫಾದರ್ ರಿಚರ್ಡ್ ಡಿಸೋಜ – ಸಂತ ಪೌಲ್ ದೇವಾಲಯ, ದೇಲಂತಬೆಟ್ಟು

🌿 ಪ್ಲಾಸ್ಟಿಕ್ ಮುಕ್ತ ಪರಿಸರದ ಕನಸಿಗೆ ಕೈಜೋಡಿಸೋಣದೇಲಂತಬೆಟ್ಟಿನ ಹಸಿರು ಭವಿಷ್ಯವನ್ನು ಕಟ್ಟೋಣ! 🌿

You may also like

News

2026-27 ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ – ಮೇ 29ರಿಂದ ತರಗತಿ ಆರಂಭ

2026-27ನೇ ಸಾಲಿನ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದೆ.
News

ಮಗಳನ್ನೇ ಕೊಂದ ತಾಯಿ ನೇಣಿಗೆ ಶರಣು – ವೈಟ್‌ಫೀಲ್ಡ್‌ನಲ್ಲಿ ಕೌಟುಂಬಿಕ ದುರಂತ

ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್‌ನ ಇಮ್ಮಡಿಹಳ್ಳಿಯಲ್ಲಿ ಮರುಕಳಿಸದಂತಹ ದಾರುಣ ಘಟನೆಯೊಂದು ನಡೆದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿಯೊಬ್ಬರು ತನ್ನ ಸ್ವಂತ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ತಾವೂ

You cannot copy content of this page