ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಸಂದೇಶ – ಶಾಸಕ ಅಶೋಕ್ ರೈ ಅವರಲ್ಲಿ ಕ್ಷಮೆ ಕೇಳಿದ ಸರ್ಕಾರಿ ನೌಕರ
“ಇನ್ನು ಮುಂದೆ ಯಾರ ಬಗ್ಗೆಯೂ ಅಸಭ್ಯ ಸಂದೇಶ ಕಳುಹಿಸಬೇಡ” — ಕ್ಷಮಿಸಿ ಹೃದಯ ವೈಶಾಲ್ಯತೆ ಮೆರೆದ ಶಾಸಕರು

ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಬಗ್ಗೆ ಅಸಭ್ಯ ಸಂದೇಶ ಹಂಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಳ್ಯ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಕಾರ್ತಿಕ್ ಶಾಸಕರ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಬುದ್ಧಿವಾದ ಹೇಳಿದ ಶಾಸಕ ಅಶೋಕ್ ರೈಯವರು, “ಯಾರ ಬಗ್ಗೆಯೂ ಅಸಭ್ಯ ಕಾಮೆಂಟ್ಗಳು ಹಾಕುವುದು ಸಭ್ಯರ ಲಕ್ಷಣವಲ್ಲ. ಇನ್ನು ಮುಂದೆ ಇಂತಹ ತಪ್ಪು ಮಾಡಬೇಡಿ” ಎಂದು ಸಲಹೆ ನೀಡಿದರು ಮತ್ತು ಕಾರ್ತಿಕ್ಗೆ ಕ್ಷಮೆ ನೀಡಿದರು.

ಅಶೋಕ್ ರೈ ಶಾಸಕರಾಗಿ ಆಯ್ಕೆಯಾದ ಕೆಲ ತಿಂಗಳ ನಂತರ, ಕಾರ್ತಿಕ್ ಅವರು ಫೇಸ್ಬುಕ್ನಲ್ಲಿ ಶಾಸಕರ ವಿರುದ್ಧ ಅಸಭ್ಯ ಪದಗಳನ್ನು ಬಳಸಿ ಪೋಸ್ಟ್ ಹಾಕಿದ್ದರು. ಇದರ ವಿರುದ್ಧ ಅಶೋಕ್ ರೈ ಅವರ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ತನಿಖೆ ಆರಂಭವಾದ ನಂತರ ಭಯಗೊಂಡ ಕಾರ್ತಿಕ್ ಶಾಸಕರ ಬಳಿಗೆ ಬಂದು, “ನಾನು ತಪ್ಪು ಮಾಡಿದ್ದೇನೆ, ಕ್ಷಮಿಸಿ ಸರ್. ಇಲ್ಲದಿದ್ದರೆ ನನ್ನ ಉದ್ಯೋಗಕ್ಕೂ ತೊಂದರೆ ಆಗಬಹುದು,” ಎಂದು ಕಣ್ಣೀರು ಹಾಕಿ ಬೇಡಿಕೊಂಡರು.

ಮಾನವೀಯತೆ ಮತ್ತು ಕ್ಷಮೆಯ ಸಂದೇಶ ನೀಡಿ ಪಾಠ ಬೋಧಿಸಿದ ಶಾಸಕ ಅಶೋಕ್ ರೈ
ಶಾಸಕರು ಶಾಂತವಾಗಿ ಪ್ರತಿಕ್ರಿಯಿಸಿ, “ನಾನು ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ಯಾವುದೇ ತೊಂದರೆ ನೀಡಿಲ್ಲ. ನೀವು ಪಶ್ಚಾತ್ತಾಪಗೊಂಡಿದ್ದೀರಿ ಎಂದು ಕಂಡು ನಿಮ್ಮನ್ನು ಕ್ಷಮಿಸುತ್ತೇನೆ. ಆದರೆ ಇನ್ನು ಮುಂದೆ ಯಾರ ಮೇಲೂ ಕೆಟ್ಟ ಕಾಮೆಂಟ್ ಹಾಕಬೇಡಿ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರ ಹೃದಯ ವೈಶಾಲ್ಯತೆಗೆ ಅಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.




