ಜಾನುವಾರು ಅಕ್ರಮ ಸಾಗಣೆ ವೇಳೆ ಪೊಲೀಸರ ಮೇಲೆ ಕೊಲೆಯತ್ನ – ಆರೋಪಿಯ ಕಾಲಿಗೆ ಗುಂಡು
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಅಕ್ಟೋಬರ್ 22ರಂದು ಬುಧವಾರ ಬೆಳಗ್ಗೆ ನಡೆದಿದೆ.

ಕೇರಳದ ಕಾಸರಗೋಡು ಮೂಲದವನಾದ ಆರೋಪಿ 40 ವರ್ಷ ಪ್ರಾಯದ ಅಬ್ದುಲ್ಲಾ, ಐಚರ್ ವಾಹನದಲ್ಲಿ ಸುಮಾರು 10 ಜಾನುವಾರುಗಳನ್ನು ಸಾಗಿಸುತ್ತಿದ್ದನು. ಆತನೇ ವಾಹನದ ಚಾಲಕನಾಗಿದ್ದನು ಹಾಗೂ ಇನ್ನೊಬ್ಬ ಸಹಚರನೂ ವಾಹನದಲ್ಲಿದ್ದನು.

ಪೊಲೀಸರು ವಾಹನವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ ಆರೋಪಿಯು ನಿಲ್ಲಿಸದೆ ವೇಗವಾಗಿ ಚಲಿಸಿಕೊಂಡು ಹೋಗಿದ್ದಾನೆ. ಸುಮಾರು 10 ಕಿಲೋ ಮೀಟರ್ಗಳಷ್ಟು ದೂರ ಪೊಲೀಸರ ವಾಹನವನ್ನು ಹಿಂಬಾಲಿಸಿದ ನಂತರ, ಆರೋಪಿಯು ಪೊಲೀಸ್ ಜೀಪಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ.



ಜಾನುವಾರು ಕಳ್ಳ ಸಾಗಾಣಿಕೆ – ಪೊಲೀಸರ ಎಚ್ಚರಿಕಾ ಗುಂಡಿಗೆ ಆರೋಪಿಯ ಕಾಲು ಬಲಿ!
ಆ ಸಂದರ್ಭದಲ್ಲಿ ಪಿಎಸ್ಐ ರವರು ಎಚ್ಚರಿಕೆಗಾಗಿ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ಐಚರ್ ವಾಹನಕ್ಕೆ ತಾಗಿದ್ದು, ಮತ್ತೊಂದು ಗುಂಡು ಆರೋಪಿಯ ಕಾಲಿಗೆ ಬಿದ್ದಿದೆ. ಘಟನೆ ವೇಳೆ ಮತ್ತೊಬ್ಬ ಸಹಚರ ಸ್ಥಳದಿಂದ ಪರಾರಿಯಾಗಿದ್ದಾನೆ.



ಗಾಯಗೊಂಡ ಅಬ್ದುಲ್ಲನನ್ನು ತಕ್ಷಣ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಈತನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ಕಾಯ್ದೆಯಡಿ (ಕೇಸ್ ನಂ. 33/2025) ಪ್ರಕರಣ ದಾಖಲಾಗಿದ್ದು, ಈಗ ಹೊಸ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




