ಕೊಳ್ನಾಡು ಆರೋಗ್ಯ ಕೇಂದ್ರಕ್ಕೆ ಸಿಕ್ಕಿತು ‘ಭಾಗ್ಯ’ – ₹30 ಲಕ್ಷ ಅನುದಾನದೊಂದಿಗೆ ಕುಡ್ತಮುಗೇರು PHCಗೆ ಸ್ವಂತ ಕಟ್ಟಡದ ಭಾಗ್ಯ!
MLC ಮಂಜುನಾಥ ಭಂಡಾರಿಯವರ ವಿಶೇಷ ಕಾಳಜಿ

ದೀರ್ಘಕಾಲದ ಕಟ್ಟಡದ ಸಮಸ್ಯೆಯಿಂದ ಕಂಗೆಟ್ಟಿದ್ದ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಕುಡ್ತಮುಗೇರು ಪ್ರಾಥಮಿಕ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಕೊನೆಗೂ ಹೊಸ ಚೈತನ್ಯ ಲಭಿಸಿದೆ. ಎಂ.ಆರ್.ಪಿ.ಎಲ್ (MRPL) ಸಂಸ್ಥೆಯ ಸಿ.ಎಸ್.ಆರ್. (CSR) ನಿಧಿಯಿಂದ ನೂತನ ಕಟ್ಟಡ ನಿರ್ಮಾಣಕ್ಕಾಗಿ ₹30 ಲಕ್ಷ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಸುಸಜ್ಜಿತ ಕಟ್ಟಡ ತಲೆಎತ್ತಲಿದೆ.

ಹೋರಾಟಕ್ಕೆ ಸಂದ ಜಯ:
ಕಳೆದ ಹಲವು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಮಂಕುಡೆ ಶಾಲೆಯ ತಾತ್ಕಾಲಿಕ ಕೊಠಡಿಯಲ್ಲಿ ಈ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡದ ಕೊರತೆಯಿಂದಾಗಿ ಕೇಂದ್ರವು ಬೇರೆಡೆಗೆ ಸ್ಥಳಾಂತರಗೊಳ್ಳುವ ಭೀತಿ ಎದುರಾಗಿತ್ತು. ಇದನ್ನು ಮನಗಂಡ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಕೇಂದ್ರವನ್ನು ಉಳಿಸಿಕೊಳ್ಳಲು ನಿರಂತರ ಹೋರಾಟ ನಡೆಸಿದ್ದರು.


MLC ಮಂಜುನಾಥ ಭಂಡಾರಿಯವರ ವಿಶೇಷ ಕಾಳಜಿ:
ಸರಕಾರದಿಂದ ತಕ್ಷಣಕ್ಕೆ ಅನುದಾನ ಲಭ್ಯವಿಲ್ಲದಿದ್ದರೂ, ಸುಭಾಶ್ಚಂದ್ರ ಶೆಟ್ಟಿಯವರ ಮನವಿಗೆ ತಕ್ಷಣ ಸ್ಪಂದಿಸಿದ ವಿಧಾನಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿ ಅವರು ತಮ್ಮ ವಿಶೇಷ ಪ್ರಯತ್ನದ ಮೂಲಕ MRPL ಸಂಸ್ಥೆಯಿಂದ ಅನುದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ದೃಢ ಬದ್ಧತೆಯಿಂದಾಗಿ ಇಂದು ಕೊಳ್ನಾಡು ಜನರ ಆರೋಗ್ಯ ರಕ್ಷಣೆಗೆ ಶಾಶ್ವತ ವ್ಯವಸ್ಥೆ ಸಿಕ್ಕಂತಾಗಿದೆ.




ಕೃತಜ್ಞತೆ ಸಲ್ಲಿಕೆ:
ಮಾಜಿ ಸಚಿವ ಬಿ. ರಮನಾಥ ರೈ ಅವರ ಅವಧಿಯಲ್ಲಿ ಈ ಕೇಂದ್ರದ ಸ್ಥಾಪನೆಗೆ ಅಡಿಪಾಯ ಹಾಕಿದ್ದ ಎಂ.ಎಸ್. ಮಹಮ್ಮದ್ ಹಾಗೂ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ಪ್ರಯತ್ನಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಮಹತ್ವದ ಅನುದಾನ ಬಿಡುಗಡೆ ಮಾಡಿದ MRPL ವ್ಯವಸ್ಥಾಪಕ ನಿರ್ದೇಶಕ ಕೃಷ್ಣರಾಜ ಹೆಗ್ಡೆ ಹಾಗೂ ಆಡಳಿತ ಮಂಡಳಿ ಮತ್ತು ಶಾಸಕ ಡಾ. ಮಂಜುನಾಥ ಭಂಡಾರಿ ಅವರಿಗೆ ಸುಭಾಶ್ಚಂದ್ರ ಶೆಟ್ಟಿಯವರು ಸಮಸ್ತ ಗ್ರಾಮಸ್ಥರ ಪರವಾಗಿ ಧನ್ಯವಾದ ಅರ್ಪಿಸಿದ್ದಾರೆ.
ಈ ಬೆಳವಣಿಗೆಯಿಂದ ಕೊಳ್ನಾಡು ಗ್ರಾಮದ ಸಾರ್ವಜನಿಕರಲ್ಲಿ ಹರ್ಷ ವ್ಯಕ್ತವಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆಯಿದೆ.




