August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದ ‘ಶುಭ ಶುಕ್ರವಾರ’

ಶಿಲುಬೆಯ ಹಾದಿಯಲ್ಲಿ ಗಮನ ಸೆಳೆದ ಪುಟಾಣಿಗಳು

ಪಂಜ ಚರ್ಚ್ ನಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಉಪಸ್ಥಿತಿ

ಕ್ರೈಸ್ತ ವಿಶ್ವಾಸಿಗಳ ಪಾಲಿನ ಅತ್ಯಂತ ಪವಿತ್ರ ಹಾಗೂ ಶೋಕದ ದಿನವಾದ ‘ಶುಭ ಶುಕ್ರವಾರವನ್ನು (ಗುಡ್ ಫ್ರೈಡೇ) ಮಂಗಳೂರು ಧರ್ಮಕ್ಷೇತ್ರದಾದ್ಯಂತ ಎಪ್ರಿಲ್ 3ರಂದು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ಈ ವರ್ಷವನ್ನು “ಮಕ್ಕಳ ವರ್ಷ” ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಧರ್ಮಕ್ಷೇತ್ರದ ಪ್ರತಿಯೊಂದು ಚರ್ಚ್‌ಗಳಲ್ಲಿ ಮಕ್ಕಳಿಗೇ ಹೆಚ್ಚಿನ ಆದ್ಯತೆ ನೀಡಲಾಗಿತ್ತು.

ನಮ್ರತೆಯ ಸಾಕಾರ – ಮಕ್ಕಳಿಗೆ ಪಾದಕ್ಷಾಲನೆ:

ಯೇಸು ಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು ತೊಳೆದು ಸೇವಾ ಮನೋಭಾವವನ್ನು ಸಾರಿದ ನೆನಪಿಗಾಗಿ ಆಚರಿಸಲಾಗುವ ‘ಪಾದಕ್ಷಾಲನೆ’ ವಿಧಿಯಲ್ಲಿ ಈ ಬಾರಿ ವಿಶೇಷ ಬದಲಾವಣೆ ಕಂಡುಬಂತು. ಧರ್ಮಕ್ಷೇತ್ರದ ಹಲವು ಚರ್ಚ್‌ಗಳಲ್ಲಿ ಹಿರಿಯರ ಬದಲಾಗಿ ಮಕ್ಕಳಿಗೆ ಪಾದಕ್ಷಾಲನೆ ಮಾಡುವ ಮೂಲಕ, ಮುಂದಿನ ಪೀಳಿಗೆಯಲ್ಲಿ ನಮ್ರತೆ ಮತ್ತು ಸೇವೆಯ ಗುಣಗಳನ್ನು ಬಿತ್ತಲಾಯಿತು. ಗುರುವಾರ ರಾತ್ರಿ ನಡೆದ ಪ್ರಭುವಿನ ಭೋಜನದ ಬಲಿಪೂಜೆಯಲ್ಲಿ ಪುಟಾಣಿಗಳು ಸಕ್ರಿಯವಾಗಿ ಪಾಲ್ಗೊಂಡು ಗಮನ ಸೆಳೆದರು.

ಮಕ್ಕಳಿಂದಲೇ ನೆರವೇರಿದ ಶಿಲುಬೆಯ ಹಾದಿ:

ಶುಕ್ರವಾರ ಬೆಳಿಗ್ಗೆ ನಡೆದ ಶಿಲುಬೆಯ ಹಾದಿಯ ಭಕ್ತಿ ಸೇವೆಯಲ್ಲಿ ಮಕ್ಕಳು ಮುಂಚೂಣಿಯಲ್ಲಿದ್ದರು.

* ಶಿಲುಬೆ ಹೊತ್ತ ಪುಟಾಣಿಗಳು: ಯೇಸುವಿನ ಕಷ್ಟಾನುಭವದ 14 ಸ್ಥಳಗಳನ್ನು ಸ್ಮರಿಸುವಾಗ ಮಕ್ಕಳೇ ಶಿಲುಬೆಯನ್ನು ಹೊತ್ತು ಸಾಗಿದ್ದು ನೆರೆದಿದ್ದ ಭಕ್ತರ ಕಣ್ಣಾಲಿಗಳನ್ನು ತೇವಗೊಳಿಸಿತು.

* ವಿಶೇಷ ಧ್ಯಾನ: ಮಕ್ಕಳಿಗಾಗಿಯೇ ಪ್ರತ್ಯೇಕ ಪ್ರಾರ್ಥನೆ ಮತ್ತು ಸರಳ ರೂಪದ ಧ್ಯಾನಗಳನ್ನು ಹಮ್ಮಿಕೊಳ್ಳಲಾಗಿತ್ತು.

* ಜೀವಂತ ಪ್ರದರ್ಶನ: ಕೆಲವು ಧರ್ಮಕೇಂದ್ರಗಳಲ್ಲಿ ಯೇಸುವಿನ ಮರಣದಂಡನೆಯ ದೃಶ್ಯಗಳನ್ನು ಕಲಾತ್ಮಕವಾಗಿ ‘ಜೀವಂತ ಪ್ರದರ್ಶನ’ ದ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು.

ಪಂಜದಲ್ಲಿ ಧರ್ಮಾಧ್ಯಕ್ಷರ ಉಪಸ್ಥಿತಿ:

ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪುತ್ತೂರು ವಲಯದ ಪಂಜದ ಸೈಂಟ್ ರೀಟಾ ಚರ್ಚ್‌ನಲ್ಲಿ ನಡೆದ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಿದರು.  ಮಧ್ಯಾಹ್ನ 3 ಗಂಟೆಯ ನಂತರ ಶಿಲುಬೆಯ ಆರಾಧನೆ, ಪವಿತ್ರ ಪ್ರಸಾದ ಸ್ವೀಕಾರ ಹಾಗೂ ಕಷ್ಟಾನುಭವದ ವಾಚನ ನಡೆಯಿತು.

ಇಂದಿನ ಕಾರ್ಯಕ್ರಮ: ಇಂದು ಎಪ್ರಿಲ್ 4ರಂದು ಶನಿವಾರ ಸಂಜೆಯವರೆಗೆ ಉಪವಾಸ ಮತ್ತು ಮೌನ ಪ್ರಾರ್ಥನೆಯಲ್ಲಿ ತೊಡಗಲಿರುವ ಭಕ್ತರು, ರಾತ್ರಿ ನಡೆಯುವ ‘ಪಾಸ್ಖಾ ಜಾಗರಣೆ’ (Easter Vigil) ಮೂಲಕ ಈಸ್ಟರ್ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಲಿದ್ದಾರೆ. ಎಪ್ರಿಲ್ 5ರಂದು ಭಾನುವಾರ ಕ್ರಿಸ್ತರ ಪುನರುತ್ಥಾನದ ಹಬ್ಬವಾದ ‘ಈಸ್ಟರ್’ ಅನ್ನು ಸಡಗರದಿಂದ ಆಚರಿಸಲಾಗುವುದು.

ವರದಿ ಹಾಗೂ ಫೋಟೊ

ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್

ನಿರ್ದೇಶಕರು, ಕೆನರಾ ಕಮ್ಯುನಿಕೇಷನ್ ಸೆಂಟರ್

ಮಂಗಳೂರು ಧರ್ಮಕ್ಷೇತ್ರ

You may also like

News

ಮಡಂತ್ಯಾರಿನ ಶಾನ್ವಿ ಮತ್ತು ಶ್ರೇಯಸ್‌ ಅವರಿಗೆ ‘ರಾಷ್ಟ್ರೀಯ ಪ್ರತಿಭಾ ರತ್ನ’ ಗೌರವ

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್‌ (ರಿ.), ಕರ್ನಾಟಕ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಸ್ವಾತಂತ್ರ್ಯೋತ್ಸವ–2026’ ಕಾರ್ಯಕ್ರಮದಲ್ಲಿ ಮಡಂತ್ಯಾರಿನ ಪ್ರತಿಭೆಗಳಾದ ಶಾನ್ವಿ ಪೂಜಾರಿ ಹಾಗೂ ಶ್ರೇಯಸ್ ಪೂಜಾರಿ ಅವರಿಗೆ
News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ

You cannot copy content of this page