ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ – ₹5 ಕೋಟಿ ನಿವ್ವಳ ಲಾಭ, ₹1848 ಕೋಟಿ ವಾರ್ಷಿಕ ವ್ಯವಹಾರದ ಅಭೂತಪೂರ್ವ ಸಾಧನೆ
ಅಧ್ಯಕ್ಷ ಅಜಿತ್ ಜಿ. ಶೆಟ್ಟಿ, ಕೊರ್ಯಾರು ಪತ್ರಿಕಾ ಗೋಷ್ಠಿ

ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ, ಗುರುವಾಯನಕೆರೆಯನ್ನು ಕೇಂದ್ರ ಕಚೇರಿಯನ್ನಾಗಿ ಹೊಂದಿರುವ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಆರ್ಥಿಕ ವರ್ಷದಲ್ಲಿ ದಾಖಲೆಯ ಪ್ರಗತಿ ಸಾಧಿಸಿದೆ. ಸಂಘವು ಈ ವರ್ಷ 5.00 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು, ಒಟ್ಟು 1,848 ಕೋಟಿ ರೂಪಾಯಿಗಳ ವಾರ್ಷಿಕ ವ್ಯವಹಾರ ನಡೆಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಂಘದ ಅಧ್ಯಕ್ಷರಾದ ಅಜಿತ್ ಜಿ. ಶೆಟ್ಟಿ, ಕೊರ್ಯಾರು ತಿಳಿಸಿದ್ದಾರೆ.

ಗುರುವಾಯನಕೆರೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಘದ ಆರ್ಥಿಕ ಸದೃಢತೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಆರ್ಥಿಕ ಸಾಧನೆಯ ಮುಖ್ಯಾಂಶಗಳು:
* ಸದಸ್ಯತ್ವ ಮತ್ತು ಬಂಡವಾಳ: ಸಂಘವು ಪ್ರಸ್ತುತ 36,804 ಸದಸ್ಯರನ್ನು ಹೊಂದಿದ್ದು, 4.23 ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿದೆ.
* ಠೇವಣಿ ಸಂಗ್ರಹ: ಕಳೆದ ವರ್ಷಕ್ಕೆ ಹೋಲಿಸಿದರೆ ಠೇವಣಿಯಲ್ಲಿ ಶೇ. 48.11 ರಷ್ಟು (120 ಕೋಟಿ ರೂ.) ಏರಿಕೆಯಾಗಿದ್ದು, ಒಟ್ಟು ಠೇವಣಿ 367.04 ಕೋಟಿ ರೂಪಾಯಿ ತಲುಪಿದೆ.
* ಸಾಲ ವಿತರಣೆ: 287.94 ಕೋಟಿ ರೂಪಾಯಿ ಹೊರಬಾಕಿ ಸಾಲವಿದ್ದು, ಶೇ. 98 ರಷ್ಟು ಸಾಲ ವಸೂಲಾತಿ ಮಾಡುವ ಮೂಲಕ ಶಿಸ್ತುಬದ್ಧ ಆಡಳಿತ ಪ್ರದರ್ಶಿಸಿದೆ.
* ದುಡಿಯುವ ಬಂಡವಾಳ: ಸಂಘವು 387 ಕೋಟಿ ರೂಪಾಯಿಗಳ ದುಡಿಯುವ ಬಂಡವಾಳ ಹಾಗೂ 15.59 ಕೋಟಿ ರೂಪಾಯಿಗಳ ವಿವಿಧ ನಿಧಿಗಳನ್ನು ಹೊಂದಿದೆ.
* ಡಿವಿಡೆಂಡ್: ಸ್ಥಾಪನೆಯಾದಾಗಿನಿಂದಲೂ ತನ್ನ ಸದಸ್ಯರಿಗೆ ಸತತವಾಗಿ ಶೇ. 18 ಡಿವಿಡೆಂಡ್ ನೀಡುತ್ತಾ ಬಂದಿರುವುದು ಸಂಘದ ವಿಶೇಷತೆ.

ವಿಸ್ತರಣೆ ಮತ್ತು ಭವಿಷ್ಯದ ಯೋಜನೆಗಳು:
ಸಹಕಾರಿ ಕ್ಷೇತ್ರದಲ್ಲಿ ‘ಎ’ ಶ್ರೇಣಿಯ ಆಡಿಟ್ ಮಾನ್ಯತೆ ಉಳಿಸಿಕೊಂಡಿರುವ ಸಂಘವು, ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 21 ಶಾಖೆಗಳನ್ನು ಹೊಂದಿದೆ.
- ಹೊಸ ಶಾಖೆಗಳು: ಶೀಘ್ರದಲ್ಲೇ ಕಾಪು ಮತ್ತು ಅತ್ತಾವರದಲ್ಲಿ ಹೊಸ ಶಾಖೆಗಳು ಆರಂಭವಾಗಲಿವೆ.
- ನವೀಕರಣ: ಪುತ್ತೂರು, ಉರ್ವ ಮಾರ್ಕೆಟ್ ಮತ್ತು ಉಪ್ಪಿನಂಗಡಿ ಶಾಖೆಗಳನ್ನು ಈ ವರ್ಷ ನವೀಕರಿಸಲಾಗುವುದು.
- ಬೆಳ್ಳಿಹಬ್ಬದ ಉಡುಗೊರೆ: 2030ರ ಬೆಳ್ಳಿಹಬ್ಬದ ಸಂಭ್ರಮದ ವೇಳೆಗೆ ಬೆಳ್ತಂಗಡಿಯಲ್ಲಿ ಸ್ವಂತ ಸುಸಜ್ಜಿತ ಕೇಂದ್ರ ಕಚೇರಿ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ.

ಸಾಮಾಜಿಕ ಹೊಣೆಗಾರಿಕೆ ಮತ್ತು ತಂತ್ರಜ್ಞಾನ:
ಕೇವಲ ಲಾಭವಷ್ಟೇ ಅಲ್ಲದೆ, ಈ ವರ್ಷ ಸಾಮಾಜಿಕ ಕಾರ್ಯಗಳಿಗಾಗಿ 5 ಲಕ್ಷ ರೂಪಾಯಿಗಳಿಗೂ ಮಿಕ್ಕಿ ದೇಣಿಗೆ ನೀಡಲಾಗಿದೆ. ಗ್ರಾಹಕರಿಗೆ ನೆಫ್ಟ್ (NEFT), ಆರ್.ಟಿ.ಜಿ.ಎಸ್ (RTGS), ಇ-ಸ್ಟಾಂಪ್ ಮತ್ತು ಎಸ್.ಎಂ.ಎಸ್ ಸೌಲಭ್ಯಗಳಂತಹ ಆಧುನಿಕ ತಂತ್ರಜ್ಞಾನ ಸೇವೆಗಳನ್ನು ಒದಗಿಸಲಾಗುತ್ತಿದೆ.
ಸಂಘದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ 5 ಬಾರಿ ‘ಸಾಧನ’ ಪ್ರಶಸ್ತಿ ಹಾಗೂ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಗಳು ಲಭಿಸಿವೆ.
ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷ ಜಯಂತ್ ಶೆಟ್ಟಿ ಕುಂಟಿನಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ, ನಿರ್ದೇಶಕರುಗಳಾದ ಪುಷ್ಪರಾಜ್ ಶೆಟ್ಟಿ, ರಘುರಾಮ ಶೆಟ್ಟಿ, ಬಾಲಕೃಷ್ಣ ಪೂಂಜ, ಜಯರಾಮ್ ಶೆಟ್ಟಿ ಮುಂಡಾಡಿ ಗುತ್ತು, ಜಯರಾಮ್ ಭಂಡಾರಿ ಧರ್ಮಸ್ಥಳ, ಸೀತಾರಾಮ್ ಶೆಟ್ಟಿ, ಕೃಷ್ಣ ರೈ, ಪುರಂದರ ಶೆಟ್ಟಿ, ಮಂಜುನಾಥ ರೈ, ವಿಜಯ ಬಿ. ಶೆಟ್ಟಿ ಮತ್ತು ಸಾರಿಕಾ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷರು ತಮ್ಮ ಈ ಯಶಸ್ಸಿಗೆ ಕಾರಣರಾದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಾಹಕರು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.




