ಕುಂಡದಬೆಟ್ಟು ಮಖಾಂ ಶರೀಫ್ ಉರೂಸ್ ಸಂಭ್ರಮ: ಎಪ್ರಿಲ್ 26ರಂದು ಸೌಹಾರ್ದ ಸ್ನೇಹ ಸಂಗಮ
ಬೆಳ್ತಂಗಡಿ ತಾಲೂಕಿನ ಕುಂಡದಬೆಟ್ಟು ಮುಹಿಯುದ್ದೀನ್ ಜುಮ್ಮಾ ಮಸೀದಿ ಮತ್ತು ದರ್ಗಾ ವಠಾರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಮರ್ಹೂಮ್ ಇಬ್ರಾಹಿಂ ಉಸ್ತಾದ್ ನೆನಪಿನಾರ್ಥವಾಗಿ ನಡೆಯುವ ‘ಕುಂಡದಬೆಟ್ಟು ಮಖಾಂ ಶರೀಫ್ ಉರೂಸ್’ ಕಾರ್ಯಕ್ರಮವು ಇಂದು ಏಪ್ರಿಲ್ 24 ರಿಂದ 26 ರವರೆಗೆ ಬಹಳ ವಿಜೃಂಭಣೆಯಿಂದ ಜರುಗಲಿದೆ.
ಎಪ್ರಿಲ್ 22 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಖತೀಬ್ ಮುಹಮ್ಮದ್ ಹನೀಫ್ ಸಖಾಫಿ, ಮೂರು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಸಮಾರಂಭದಲ್ಲಿ ನಾಡಿನ ಗಣ್ಯರು ಮತ್ತು ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯಾಂಶಗಳು:
* ಎಪ್ರಿಲ್ 24 (ಆರಂಭ): ಉರೂಸ್ ಸಮಿತಿ ಅಧ್ಯಕ್ಷ ಅಬುಸಾಲಿ ಜಿ. ಅವರಿಂದ ಧ್ವಜಾರೋಹಣ. ಡಾ. ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಅವರಿಂದ ದುಆ ಆಶೀರ್ವಚನ. ರಾತ್ರಿ ಕೇರಳದ ಖಾಸಿಂ ಕಾಮಿಲ್ ಸಖಾಫಿ ತಂಡದಿಂದ ‘ಗ್ರ್ಯಾಂಡ್ ಇಶಲ್ ನೈಟ್’ ಗಾಯನ ನಡೆಯಲಿದೆ.
* ಎಪ್ರಿಲ್ 25: ಎನ್. ಕೆ. ಎಂ. ಶಾಫಿ ಸಅದಿ ಅವರಿಂದ ಉದ್ಘಾಟನೆ. ಪ್ರಖ್ಯಾತ ವಿದ್ವಾಂಸ ಪಿ. ಎಸ್. ಮುಹಮ್ಮದ್ ಹಾಶಿರ್ ಸಖಾಫಿ ಅವರಿಂದ ಪ್ರಧಾನ ಭಾಷಣ.
* ಎಪ್ರಿಲ್ 26 (ಸೌಹಾರ್ದ ಸಂಗಮ): ಅಂತಿಮ ದಿನದ ಸಂಜೆ ಸರ್ವಧರ್ಮೀಯರನ್ನೊಳಗೊಂಡ ‘ಸೌಹಾರ್ದ ಸ್ನೇಹ ಸಂಗಮ’ ನಡೆಯಲಿದ್ದು, ವಿಧಾನಸಭಾಧ್ಯಕ್ಷ ಯು. ಟಿ. ಖಾದರ್, ಶಾಸಕ ಹರೀಶ್ ಪೂಂಜ ಸೇರಿದಂತೆ ಹಲವು ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.

ಸಮಾರೋಪ: ಅಂದು ರಾತ್ರಿ ಸಯ್ಯಿದ್ ಸಾದಾತ್ ತಂಙಳ್ ಅವರ ದುಆ ಹಾಗೂ ಮುಹಮ್ಮದಲಿ ಸಖಾಫಿ ಅವರ ಪ್ರಭಾಷಣದೊಂದಿಗೆ ಉರೂಸ್ ಸಂಪನ್ನಗೊಳ್ಳಲಿದೆ. ಪ್ರತಿದಿನ ಸಂಜೆ 3 ರಿಂದ ರಾತ್ರಿ 10 ರವರೆಗೆ ಕಾರ್ಯಕ್ರಮಗಳು ನಡೆಯಲಿದ್ದು, ಕೊನೆಯ ದಿನ ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉರುಸ್ ಸಮಿತಿ ಅಧ್ಯಕ್ಷ ಅಬುಸಾಲಿ ಜಿ., ಕುಂಡದಬೆಟ್ಟು ಎಂ.ಜೆ.ಎಂ. ಅಧ್ಯಕ್ಷ ಮುತ್ತಲಿಬ್, ಕುಂಡದಬೆಟ್ಟು ಮದರಸದ ಸಹ ಅಧ್ಯಾಪಕ ಬಿ.ಹೆಚ್. ಹಾರಿಸ್ ಸಖಾಫಿ ಉಪಸ್ಥಿತರಿದ್ದರು.



