May 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳದಲ್ಲಿ ಬರೋಬ್ಬರಿ 42 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಜಪ್ತಿ : ಅಣ್ಣ-ತಮ್ಮನ ಬಂಧನ

ಬಂಟ್ವಾಳ ಗ್ರಾಮಾಂತರ ಠಾಣೆಯ PSI ಮಂಜುನಾಥ ಟಿ. ತಂಡದ ಮಿಂಚಿನ ಕಾರ್ಯಾಚರಣೆ

ಬೆಂಗಳೂರಿನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬೃಹತ್ ಮೊತ್ತದ ನಿಷೇಧಿತ ಮಾದಕ ವಸ್ತುವನ್ನು ಪತ್ತೆಹಚ್ಚುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಮಾರು 42.30 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ:

ಮೇ 2ರಂದು ಶನಿವಾರ ಸಂಜೆ ಬೆಂಗಳೂರಿನಿಂದ ಬರುತ್ತಿದ್ದ ಬೊಲೆರೋ ವಾಹನವೊಂದರಲ್ಲಿ ಮಾದಕ ವಸ್ತು ಸಾಗಾಟವಾಗುತ್ತಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್ ಮಂಜುನಾಥ ಟಿ. ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ PSI ಮಂಜುನಾಥ ಟಿ. ತಂಡದ ಪೊಲೀಸರು, ಮಂಚಿ ಗ್ರಾಮದ ಪಂಜಾಲ ಕ್ರಾಸ್ ಬಳಿ ವಾಹನ ತಪಾಸಣೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ.

ಬಂಧಿತರು ಯಾರು?

ಬಂಧಿತರನ್ನು ಬಂಟ್ವಾಳದ ಬೊಳಂತೂರು ನಿವಾಸಿಗಳಾದ 30 ವರ್ಷ ಪ್ರಾಯದ ಮೊಹಮ್ಮದ್ ನಿಜಾಮುದ್ದೀನ್ ಹಾಗೂ 19 ವರ್ಷ ಪ್ರಾಯದ ಮೊಹಮದ್ ಶಾಹೀಂ ಎಂದು ಗುರುತಿಸಲಾಗಿದೆ. ಇವರು ಪರಸ್ಪರ ಸಹೋದರರಾಗಿದ್ದು, ಬೆಂಗಳೂರಿನಲ್ಲಿ ನೈಜೀರಿಯಾ ಮೂಲದ ವ್ಯಕ್ತಿಯೊಬ್ಬನಿಂದ ಈ ಮಾದಕ ವಸ್ತುವನ್ನು ಖರೀದಿಸಿ ತಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳು:

ಪೊಲೀಸರು ಆರೋಪಿಗಳಿಂದ ಈ ಕೆಳಗಿನ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ:

* 423 ಗ್ರಾಂ ಎಂಡಿಎಂಎ: ಇದರ ಮಾರುಕಟ್ಟೆ ಮೌಲ್ಯ ಅಂದಾಜು 42,30,000 ರೂಪಾಯಿ.

* ವಾಹನ: ಕೃತ್ಯಕ್ಕೆ ಬಳಸಿದ KA-20-Z-9585 ನಂಬರಿನ ಬೊಲೆರೋ ವಾಹನ.

* ಮೊಬೈಲ್: ಆರೋಪಿಗಳ ಬಳಿಯಿದ್ದ 3 ಮೊಬೈಲ್ ಫೋನ್‌ಗಳು.

ಒಟ್ಟು ಜಪ್ತಿ ಮಾಡಿದ ಸೊತ್ತಿನ ಮೌಲ್ಯ ಸುಮಾರು 46.25 ಲಕ್ಷ ರೂಪಾಯಿಗಳಾಗಿದೆ.

ಕಾನೂನು ಕ್ರಮ:

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ (ಅ.ಕ್ರ: 68/2026). ಮಾದಕ ಜಾಲದ ಮೂಲವನ್ನು ಪತ್ತೆಹಚ್ಚಲು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ASP ಯಶ್ ಕುಮಾರ್ ಶರ್ಮಾ, ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ, PSI ಮಂಜುನಾಥ್, ಕಾನ್ ಸ್ಟೇಬಲ್ ಗಳಾದ ಪ್ರಶಾಂತ್, ಲೋಕೆಶ್, ನಜೀರ್, ವಿವೇಕ್, ಕುಮಾರ್, ಮಹದೇವ್ ಹಾಗೂ ಜಗದೀಶ್ ಪಾಲ್ಗೊಂಡಿದ್ದರು. ಈ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

You may also like

News

ಜಮೀನು ಮತ್ತು ಮನೆಯ ಹಂಚಿಕೆ ತಕರಾರು – ಕಾರ್ಕಳದಲ್ಲಿ ಅಣ್ಣನ ಪ್ರಾಣ ತೆಗೆದ ತಮ್ಮ!

ಆರೋಪಿ ಹೆರಾಲ್ಡ್ ಡಿಸೋಜನ ಬಂಧನ ರಕ್ತ ಸಂಬಂಧಕ್ಕಿಂತ ಆಸ್ತಿಯೇ ದೊಡ್ಡದಾಯಿತೇ? ಹೌದು ಎನ್ನುತ್ತದೆ ಕಾರ್ಕಳದ ಹಿರಿಯಂಗಡಿಯಲ್ಲಿ ನಡೆದ ಈ ಘಟನೆ. ಜಮೀನು ಮತ್ತು ಮನೆಯ ಹಂಚಿಕೆ ವಿಚಾರವಾಗಿ
News

ಕಲ್ಲಾಪು–ತೊಕ್ಕೊಟ್ಟು ಪ್ರದೇಶದಲ್ಲಿ ಮ್ಯಾಂಗ್ರೋವ್ ನೆಡುವ ಅಭಿಯಾನ – ಯುವಕರಿಂದ 5000 ಗಿಡಗಳ ನೆಡುವಿಕೆ

ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಸಮಿತಿಯ ಮುಂದಾಳತ್ವ ಮಂಗಳೂರು ಧರ್ಮಕ್ಷೇತ್ರದ ಭಾರತೀಯ ಕಥೋಲಿಕ ಯುವ ಸಂಚಲನ, ಮಂಗಳೂರು ಅರಣ್ಯ ಇಲಾಖೆ ವಿಭಾಗ ಹಾಗೂ ಐಸಿವೈಎಮ್ ಇಸಿಡಿ, ಸಿಟಿ

You cannot copy content of this page