ಅಸ್ಸಾಂ ಮೂಲದ ಖತರ್ನಾಕ್ ಮೊಬೈಲ್ ಕಳ್ಳನ ಬಂಧನ
6 ವರ್ಷಗಳ ಬಳಿಕ ಕೇರಳ ಗಡಿಯಲ್ಲಿ ಪಣಂಬೂರು ಪೊಲೀಸರ ಕಾರ್ಯಾಚರಣೆ!

ಮೊಬೈಲ್ ಅಂಗಡಿ ಮೇಲೆ ಕನ್ನ ಹಾಕಿ, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ದೋಚಿ ಕಳೆದ ಆರು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಅಸ್ಸಾಂ ಮೂಲದ ವಾರಂಟ್ ಆರೋಪಿಯನ್ನು ಪಣಂಬೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಕಳೆದ 2018ರಲ್ಲಿ ಮಂಗಳೂರು ತಾಲೂಕಿನ ಬೈಕಂಪಾಡಿ ಗ್ರಾಮದ ಕುಡುಂಬೂರಿನಲ್ಲಿರುವ ‘ಪೂಜಾ ಮೊಬೈಲ್ಸ್’ ಅಂಗಡಿಯ ಶಟರ್ ಮುರಿದಿದ್ದ ಕಳ್ಳರು, ಅಂದಾಜು 2,17,740/- ರೂಪಾಯಿ ಮೌಲ್ಯದ ಮೊಬೈಲ್ ಫೋನ್ಗಳು, ಬಿಡಿಭಾಗಗಳು ಮತ್ತು ಸಿಸಿಟಿವಿ ಡಿವಿಆರ್ ಅನ್ನು ದೋಚಿದ್ದರು. ಅಷ್ಟೇ ಅಲ್ಲದೆ, ಅಂಗಡಿಯಲ್ಲಿದ್ದ 2,100 ರೂಪಾಯಿ ನಗದು ಕಳವು ಮಾಡಿ, ಸುಮಾರು 10,000 ರೂಪಾಯಿ ಮೌಲ್ಯದ ಎರಡು ಕಂಪ್ಯೂಟರ್ ಮಾನಿಟರ್ಗಳನ್ನು ಪುಡಿಪುಡಿ ಮಾಡಿ ನಷ್ಟ ಉಂಟು ಮಾಡಿದ್ದರು.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 152/2018 ರಂತೆ ಐಪಿಸಿ ಕಲಂ 427, 457, 380 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯ ವಿವರ:
ಬಂಧಿತನನ್ನು ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆಯ ಲಕ್ಕಿಪುರ್ ನಿವಾಸಿ 34 ವರ್ಷ ಪ್ರಾಯದ ಪಾರೂಲ್ ಹುಸೈನ್ ಲಸ್ಕರ್ ಯಾನೆ ಪಾರೂಲ್ ಎಂದು ಗುರುತಿಸಲಾಗಿದೆ. ಈತ ಕಳೆದ 6 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ, ಮಾನ್ಯ ನ್ಯಾಯಾಲಯವು ಈತನ ವಿರುದ್ಧ ದಸ್ತಗಿರಿ ವಾರಂಟ್ ಹೊರಡಿಸಿತ್ತು.

ಸಿನಿಮೀಯ ಮಾದರಿಯಲ್ಲಿ ಬಂಧನ:
ಆರೋಪಿಯು ಕೇರಳ ರಾಜ್ಯದ ಮಂಜೇಶ್ವರದ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಮೇಲಾಧಿಕಾರಿಗಳ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿದರು. ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ಅವರ ಮಾರ್ಗದರ್ಶನದಲ್ಲಿ ಈ ಕೆಳಗಿನ ತಂಡವು ಆರೋಪಿಯನ್ನು ಸೆರೆಹಿಡಿದಿದೆ:
* ನವೀನ ಚಂದ್ರ (ಸಿ ಹೆಚ್ ಸಿ)
* ಸಯ್ಯದ್ ಇಂತಿಯಾಜ್ (ಸಿ ಹೆಚ್ ಸಿ)
* ರಾಕೇಶ್ (ಸಿಪಿಸಿ)
* ವಿನಯ್ (ಸಿಪಿಸಿ)
ದಿನಾಂಕ 11.05.2026 ರಂದು ಸೋಮವಾರ ಬಂಧಿತನಾದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



