June 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಜನಮನ ಗೆದ್ದ ಧರ್ಮಗುರುವಿಗೆ ಭಾವಪೂರ್ಣ ವಿದಾಯ” – ಬೈಂದೂರು ಚರ್ಚ್‌ನಿಂದ ಫಾದರ್ ವಿನ್ಸೆಂಟ್ ಕುವೆಲ್ಲೊ ಅವರಿಗೆ ಕೃತಜ್ಞತೆಯ ನಮನ

ಏಳು ವರ್ಷದ ಸೇವೆಯ ಸುವರ್ಣ ಅಧ್ಯಾಯಕ್ಕೆ ತೆರೆ

ನಾಳೆ ಮೇ 13ರಂದು ಮುದರಂಗಡಿ ಚರ್ಚ್ ಗೆ ಪಯಣ ಬೆಳೆಸುತ್ತಿರುವ ಜನಪ್ರಿಯ ಧರ್ಮಗುರು

ಪ್ರೀತಿ, ಸೇವೆ ಮತ್ತು ಅಧ್ಯಾತ್ಮದ ಮೂಲಕ ಸಾವಿರಾರು ಹೃದಯಗಳನ್ನು ಸ್ಪರ್ಶಿಸಿದ ಬೈಂದೂರು ಪವಿತ್ರ ಶಿಲುಬೆಯ ಧರ್ಮಕೇಂದ್ರದ ಧರ್ಮಗುರು ವಂದನೀಯ ಫಾದರ್ ವಿನ್ಸೆಂಟ್ ಕುವೆಲ್ಲೊ ಅವರಿಗೆ ಮೇ 10ರಂದು ಭಾನುವಾರ ಧರ್ಮಕೇಂದ್ರದ ಸಮುದಾಯ ಭವನದಲ್ಲಿ ಅತ್ಯಂತ ಭಾವನಾತ್ಮಕ ಹಾಗೂ ಸ್ಮರಣೀಯ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಕಳೆದ ಏಳು ವರ್ಷಗಳಿಂದ ಧರ್ಮಗುರು, ಮಾರ್ಗದರ್ಶಕ ಮತ್ತು ಸಮಾಜಮುಖಿ ನಾಯಕನಾಗಿ ಸೇವೆ ಸಲ್ಲಿಸಿದ್ದ ಅವರು, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರ ಆದೇಶದಂತೆ ನಾಳೆ ಮೇ 13ರಂದು ಬುಧವಾರ ಮುದರಂಗಡಿ ಧರ್ಮಕೇಂದ್ರಕ್ಕೆ ವರ್ಗಾವಣೆಗೊಳ್ಳಲಿದ್ದಾರೆ.

ಸೇವೆಗೆ ಗೌರವ – ಹೃದಯಗಳಿಂದ ಹರಿದ ಕೃತಜ್ಞತೆ:

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಹಾಗೂ ಸಮಸ್ತ ಭಕ್ತಾಧಿಗಳ ಪರವಾಗಿ ಡಾ. ರೋಷನ್ ಪಾಯ್ಸ್ ಅವರು ಸನ್ಮಾನ ಪತ್ರ ವಾಚಿಸಿ, ಫಾದರ್ ವಿನ್ಸೆಂಟ್ ಕುವೆಲ್ಲೊ ಅವರ ಸೇವಾ ಜೀವನದ ಅಮೂಲ್ಯ ಕ್ಷಣಗಳನ್ನು ಸ್ಮರಿಸಿದರು. ಧಾರ್ಮಿಕ ಚಟುವಟಿಕೆಗಳ ಸಂಘಟನೆ, ಯುವಜನರ ಪ್ರೇರಣೆ, ಬಡವರ ಪರ ಕಾಳಜಿ ಹಾಗೂ ಧರ್ಮಕೇಂದ್ರದ ಸರ್ವತೋಮುಖ ಅಭಿವೃದ್ಧಿಗೆ ನೀಡಿದ ಅವರ ಕೊಡುಗೆಗಳನ್ನು ಮನಮುಟ್ಟುವಂತೆ ಕೊಂಡಾಡಿದರು.

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀಫನ್ ಡಾಯಸ್ ಅವರು ಶಾಲು ಹೊದಿಸಿ ಫಲಪುಷ್ಪಗಳೊಂದಿಗೆ ಸನ್ಮಾನಿಸಿದರು. ಪಾಲನಾ ಸಮಿತಿಯ ಸದಸ್ಯರು ಹಾಗೂ ವಿವಿಧ ವಾರ್ಡುಗಳ ಗುರಿಕಾರರು ಒಗ್ಗೂಡಿ ಪ್ರೀತಿಯ ಕಾಣಿಕೆ ನೀಡಿ ಮುಂದಿನ ಸೇವಾ ಪಯಣಕ್ಕೆ ಹಾರೈಸಿದರು.

“ಬೈಂದೂರು ನನ್ನ ಹೃದಯದಲ್ಲಿ ಸದಾ ಉಳಿಯುತ್ತದೆ” – ಫಾದರ್ ವಿನ್ಸೆಂಟ್ ಕುವೆಲ್ಲೊ:

ಕಳೆದ ಏಳು ವರ್ಷಗಳಲ್ಲಿ ಪವಿತ್ರ ಶಿಲುಬೆಯ ಮುಖಾಂತರ ದೇವರು ನೀಡಿದ ಆಶೀರ್ವಾದಗಳಿಗೆ ಕೃತಜ್ಞತಾಪೂರ್ವಕವಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ಭಕ್ತಾಧಿಗಳಿಗೆ ಆಶೀರ್ವದಿಸಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಫಾದರ್ ವಿನ್ಸೆಂಟ್ ಕುವೆಲ್ಲೊ ಅವರು ಭಾವುಕರಾಗಿ, “ಬೈಂದೂರಿನ ಭಕ್ತಾಧಿಗಳು ತೋರಿದ ಪ್ರೀತಿ, ವಿಶ್ವಾಸ ಮತ್ತು ಸಹಕಾರ ನನ್ನ ಜೀವನದ ಅಮೂಲ್ಯ ಸಂಪತ್ತು. ಇಲ್ಲಿ ನಡೆದ ಪ್ರತಿಯೊಂದು ಸಾಧನೆಯ ಹಿಂದೆಯೂ ಜನರ ತ್ಯಾಗ ಮತ್ತು ಒಗ್ಗಟ್ಟು ಇದೆ. ನನ್ನ ಸೇವಾ ಪಯಣದಲ್ಲಿ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಸದಾ ಋಣಿಯಾಗಿದ್ದೇನೆ,” ಎಂದು ಕೃತಜ್ಞತೆಯಿಂದ ನುಡಿದರು.

ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಬೈಂದೂರು ಚರ್ಚ್‌ನವರೇ ಆದ ವಂದನೀಯ ಫಾದರ್ ನೆಲ್ಸನ್ ರೆಬೆರೊ ಹಾಗೂ ವಂದನೀಯ ಫಾದರ್ ಮ್ಯಾಪ್ಲಿನ್ ಲೋಬೊ ಉಪಸ್ಥಿತರಿದ್ದರು. ಸಿಸ್ಟರ್ ಆನ್ಸಿ ಪಾವ್ಲ್ ಮತ್ತು ಆಯೋಗಗಳ ಸಂಚಾಲಕಿ ಜೋಸ್ಪಿನ್ ರೊಡ್ರಿಗಸ್ ಅವರು ಫಾದರ್ ವಿನ್ಸೆಂಟ್ ಅವರ ಸರಳತೆ, ಸೇವಾ ಮನೋಭಾವ ಮತ್ತು ಜನಪರ ಕಾಳಜಿಯನ್ನು ಶ್ಲಾಘಿಸಿದರು.

ಭಕ್ತಾಧಿಗಳ ಮನದಾಳದ ಮಾತು:

“ಫಾದರ್ ವಿನ್ಸೆಂಟ್ ಕುವೆಲ್ಲೊ ಅವರು ಕೇವಲ ಧರ್ಮಗುರುಗಳಲ್ಲ; ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬಿದ ಹಿರಿಯಣ್ಣನಂತಿದ್ದರು. ಅವರ ನಗು, ಪ್ರೋತ್ಸಾಹದ ಮಾತುಗಳು ಮತ್ತು ಸರಳ ಬದುಕು ಸದಾ ನಮ್ಮ ಹೃದಯದಲ್ಲಿ ಉಳಿಯಲಿದೆ,” ಎಂದು ಭಕ್ತಾಧಿಗಳು ಭಾವುಕರಾಗಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀಫನ್ ಡಾಯಸ್ ಸ್ವಾಗತಿಸಿದರು. ಆಯೋಗಗಳ ಸಂಯೋಜಕಿ ಜೋಸ್ಪಿನ್ ರೊಡ್ರಿಗಸ್ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ವೀಣಾ ಜೋಸೆಫ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಧರ್ಮಕೇಂದ್ರದ ಸಮಸ್ತ ಭಕ್ತಾಧಿಗಳು ತಮ್ಮ ಪ್ರೀತಿಯ ಧರ್ಮಗುರುಗಳಿಗೆ ಶುಭ ಹಾರೈಸಿ ಕಣ್ಣೀರಿನ ವಿದಾಯ ಹೇಳಿದರು.

You may also like

News

Thousands Gather in Faith and Devotion as Saint Anthony’s Minor Basilica, Dornahalli Celebrates Grand Annual Feast 2026

Amid an atmosphere of deep faith, prayer, and jubilation, thousands of devotees from across Karnataka and neighbouring states converged at
News

ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರಿಗೆ ಭಾವಪೂರ್ಣ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಿ ಸಂಘಟನೆಯಾದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.)ಇದರ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕಗೊಂಡಿರುವ ವಂದನೀಯ ಫಾದರ್

You cannot copy content of this page