ಕ್ರಿಕೆಟ್ ಮೈದಾನದ ಜಗಳ ಕೊಲೆಯಲ್ಲಿ ಅಂತ್ಯ – ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ಗೆ ಚಾಕು ಇರಿತ
ಆಟದ ಮೈದಾನದಲ್ಲಿ ಶುರುವಾದ ಸಣ್ಣದೊಂದು ಜಗಳ, ರಾತ್ರಿಯಾಗುವಷ್ಟರಲ್ಲಿ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಕಾಸರಗೋಡು ಜಿಲ್ಲೆಯ ಮಾರ್ಪನಡ್ಕದಲ್ಲಿ ನಡೆದಿದೆ. ಕ್ರಿಕೆಟ್ ಆಡುವಾಗ ಉಂಟಾದ ದ್ವೇಷಕ್ಕೆ ಬ್ಯಾಂಕ್ ಸೆಕ್ಯೂರಿಟಿ ನೌಕರರೊಬ್ಬರು ಬಲಿಯಾಗಿದ್ದಾರೆ.

ಮೈದಾನದಲ್ಲಿ ಶುರುವಾದ ಕಿಡಿ:
ಮೇ 17ರಂದು ಭಾನುವಾರ ಸಂಜೆ ಕುಂಬ್ಡಾಜೆ ಪಂಚಾಯತ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿತ್ತು. ಈ ವೇಳೆ ಆಟಗಾರರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಅಲ್ಲಿಗೆ ಮುಗಿಯಬೇಕಿದ್ದ ಜಗಳ, ರಾತ್ರಿಯ ವೇಳೆಗೆ ತಾರಕಕ್ಕೇರಿದೆ.
ಬ್ಯಾಂಕ್ ಮುಂಭಾಗದಲ್ಲೇ ಚಾಕು ಇರಿತ:
ಮಾರ್ಪನಡ್ಕದ ಬೆದ್ರಕೂಡ್ಲು ನಿವಾಸಿಯಾದ 42 ವರ್ಷ ಪ್ರಾಯದ ಸುರೇಶ್ ಅವರು ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಅವರು ಬ್ಯಾಂಕ್ ಪರಿಸರದಲ್ಲಿದ್ದಾಗ, ಸಂಜೆಯ ಜಗಳದ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ದುಷ್ಕರ್ಮಿಗಳು ಅವರ ಮೇಲೆ ಚಾಕುವಿನಿಂದ ಮನಸೋಇಚ್ಛೆ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ.

ಇಬ್ಬರ ವಿರುದ್ಧ ಕೇಸ್ ದಾಖಲು:
ಈ ಘಟನೆಗೆ ಸಂಬಂಧಿಸಿದಂತೆ ಮಾರ್ಪನಡ್ಕ ಮೂಲದ ಕಿರಣ್ ಮತ್ತು ಅಖಿಲೇಷ್ ಎಂಬ ಇಬ್ಬರು ಯುವಕರ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.



