June 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ICYM BORIMAR ಘಟಕದಲ್ಲಿ ‘ಕುಟುಂಬ ರಾಜಕಾರಣ’ಕ್ಕೆ ಬಿತ್ತು ಬ್ರೇಕ್ – ಒಂದು ಕುಟುಂಬಕ್ಕೆ ಒಂದೇ ಹುದ್ದೆ

ಬಿಷಪ್ ಮತ್ತು ICYM ಕೇಂದ್ರೀಯ ಸಮಿತಿಗೆ ಕೃತಜ್ಞತೆ ಸಲ್ಲಿಸಿದ ಸೂರಿಕುಮೇರು ಚರ್ಚ್ ಭಕ್ತಾಧಿಗಳು

ಮಂಗಳೂರು ಧರ್ಮಕ್ಷೇತ್ರದ ಕ್ರೈಸ್ತ ಯುವಜನರ ಪ್ರತಿಷ್ಠಿತ ಸಂಘಟನೆಯಾದ ICYM ಇದರ BORIMAR ಘಟಕದಲ್ಲಿ ನಡೆದ “ರಹಸ್ಯ ಚುನಾವಣೆ” ವಿವಾದದ ಬಳಿಕ, ಒಂದೇ ಕುಟುಂಬದ ಸದಸ್ಯರಿಗೆ ನೀಡಲಾಗಿದ್ದ ಎರಡು ಹುದ್ದೆಗಳಲ್ಲಿ ಒಂದನ್ನು ಹಿಂಪಡೆಯಲಾಗಿದ್ದು, ಇದೀಗ ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಿದ ಹುದ್ದೆಯನ್ನು ಘೋಷಿಸಲಾಗಿದೆ.

ಸಂಘಟನೆಯ ಸಚೇತಕ ಅಶ್ವಿನ್ ಮಿಲ್ಟನ್ ಸಿಕ್ವೇರಾ ಧರ್ಮಕ್ಷೇತ್ರದ ನಿಯಮಗಳನ್ನು ಕಡೆಗಣಿಸಿ, ಸಾರ್ವಜನಿಕ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಚುನಾವಣೆಯನ್ನು ನಡೆಸಿದ್ದಾನೆ ಎಂಬ ಆರೋಪಗಳು ಸೂರಿಕುಮೇರು ಚರ್ಚ್ ಭಕ್ತಾಧಿಗಳಿಂದ ಕೇಳಿಬಂದಿದ್ದವು.

ಮೇ 10ರಂದು ಭಾನುವಾರ ನಡೆದ ಚುನಾವಣೆಯಲ್ಲಿ ಬಹುತೇಕ ಸಕ್ರಿಯ ಸದಸ್ಯರಿಗೆ ಯಾವುದೇ ಅಧಿಕೃತ ಮಾಹಿತಿ ನೀಡದೆ, ಆಯ್ದ ಕೆಲವರ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ವಿಶೇಷವಾಗಿ ಎರಡು ಕುಟುಂಬದ ನಾಲ್ಕು ಸದಸ್ಯರಿಗೆ ನಾಲ್ಕು ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ ಎಂಬ ವಿಚಾರಕ್ಕೆ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಧರ್ಮಾಧ್ಯಕ್ಷರಿಗೆ ಮತ್ತು ICYM ಕೇಂದ್ರೀಯ ಸಮಿತಿಗೆ ಲಿಖಿತ ದೂರು:

ಈ ಹಿನ್ನೆಲೆಯಲ್ಲಿ ಸೂರಿಕುಮೇರು ಚರ್ಚ್‌ನ ಹಿಂದಿನ ಪಾಲನಾ ಸಮಿತಿಯ ಹಿರಿಯ ಪದಾಧಿಕಾರಿಗಳು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮತ್ತು ICYM ಕೇಂದ್ರೀಯ ಸಮಿತಿಗೆ ಲಿಖಿತ ದೂರು ಸಲ್ಲಿಸಿದ್ದರು.

ದೂರಿನಲ್ಲಿ:

  • ಚುನಾವಣಾ ಪ್ರಕ್ರಿಯೆಯ ಬಗ್ಗೆ ತನಿಖೆ ನಡೆಸಬೇಕು,
  • ಅಗತ್ಯವಿದ್ದರೆ ಮರು-ಚುನಾವಣೆ ನಡೆಸಬೇಕು,
  • ಧರ್ಮಕ್ಷೇತ್ರದ ನಿಯಮದಂತೆ ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಹುದ್ದೆ ನೀಡಬೇಕು ಎಂದು ಆಗ್ರಹಿಸಲಾಗಿತ್ತು.

ICYM ಕೇಂದ್ರೀಯ ಸಮಿತಿಯ ಮಧ್ಯಪ್ರವೇಶ:

ದೂರು ಸ್ವೀಕರಿಸಿದ ಬಳಿಕ ICYM ಕೇಂದ್ರೀಯ ಸಮಿತಿಯವರು ಸೂರಿಕುಮೇರು ಚರ್ಚ್ ಧರ್ಮಗುರುಗಳನ್ನು ಸಂಪರ್ಕಿಸಿ ವಿಷಯದ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದಾದ ಬಳಿಕ, ಮೇ 17ರಂದು ಭಾನುವಾರ ಬಲಿಪೂಜೆಯ ಅಂತ್ಯದಲ್ಲಿ ಸೂರಿಕುಮೇರು ಚರ್ಚ್ ಧರ್ಮಗುರು ಸಾರ್ವಜನಿಕವಾಗಿ ಘೋಷಣೆ ಮಾಡಿ, ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಿದ ಹುದ್ದೆಯ ವಿವರ ಮತ್ತು ಹೆಸರುಗಳನ್ನು ಬಹಿರಂಗವಾಗಿ ಪ್ರಕಟಿಸಿದ್ದಾರೆ.

ಈ ಕ್ರಮವನ್ನು ಸ್ವಾಗತಿಸಿರುವ ಸೂರಿಕುಮೇರು ಚರ್ಚ್ ಭಕ್ತಾಧಿಗಳು, ಧರ್ಮಕ್ಷೇತ್ರದ ನಿಯಮಗಳನ್ನು ಕಾಪಾಡಲು  ICYM ಕೇಂದ್ರೀಯ ಸಮಿತಿಯು ತ್ವರಿತವಾಗಿ ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬೆಳವಣಿಗೆಯಿಂದ ICYM BORIMAR ಘಟಕದ ಒಳಗಿನ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ ಮತ್ತು ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಿದ್ದೇ ಆದರೆ ಇಂತಹ ಮುಜುಗರದ ಪರಿಸ್ಥಿತಿ ಸಚೇತಕ ಅಶ್ವಿನ್ ಮಿಲ್ಟನ್ ಸಿಕ್ವೇರಾನಿಗೆ ಎದುರಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

You may also like

News

Thousands Gather in Faith and Devotion as Saint Anthony’s Minor Basilica, Dornahalli Celebrates Grand Annual Feast 2026

Amid an atmosphere of deep faith, prayer, and jubilation, thousands of devotees from across Karnataka and neighbouring states converged at
News

ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರಿಗೆ ಭಾವಪೂರ್ಣ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಿ ಸಂಘಟನೆಯಾದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.)ಇದರ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕಗೊಂಡಿರುವ ವಂದನೀಯ ಫಾದರ್

You cannot copy content of this page