ಸೂರಿಕುಮೇರು ಚರ್ಚ್ ಧರ್ಮಗುರುಗಳ ಸ್ಪಷ್ಟೀಕರಣ ಸಂಪೂರ್ಣ ಸುಳ್ಳು
‘ಕರಾವಳಿ ಸುದ್ದಿ’ ವರದಿಗೆ ಹೆದರಿ ತೇಪೆ ಹಚ್ಚುವ ಕೆಲಸಕ್ಕೆ ಇಳಿದರಾ ಫಾದರ್ ಪ್ಯಾಟ್ರಿಕ್ ಸಿಕ್ವೇರಾ?

ಬಿಷಪ್ ಅವರಿಗೆ ಲಿಖಿತ ದೂರು ನೀಡುತ್ತಿದ್ದಂತೆ ಫಾ. ಸಿಕ್ವೇರಾ ಒಂದೇ ಕುಟುಂಬದ ಇಬ್ಬರನ್ನು ಹುದ್ದೆಯಿಂದ ವಜಾ ಮಾಡಿದ್ದು ಯಾಕೆ?

ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ನ ICYM BORIMAR ಘಟಕದ ಚುನಾವಣಾ ಅಕ್ರಮದ ಕುರಿತು ‘ಕರಾವಳಿ ಸುದ್ದಿ’ ವೆಬ್ಸೈಟ್ನಲ್ಲಿ ಪ್ರಕಟವಾದ ಸತ್ಯ ವರದಿಯನ್ನು ಸಹಿಸಲಾಗದೆ, ತನ್ನ ತಪ್ಪುಗಳನ್ನು ಮರೆಮಾಚಲು ಚರ್ಚ್ ಧರ್ಮಗುರು ಫಾದರ್ ಪ್ಯಾಟ್ರಿಕ್ ಸಿಕ್ವೇರಾ ಅವರು ಸುಳ್ಳಿನ ಸರಮಾಲೆಯನ್ನೇ ಪೋಣಿಸಿದ್ದಾರೆ ಎಂದು ಚರ್ಚ್ನ ಹಿರಿಯರು ಹಾಗೂ ಮಾಜಿ ಪಾಲನಾ ಸಮಿತಿಯ ಪದಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಮೇ 19ರ ಮಂಗಳವಾರದಂದು ಧರ್ಮಗುರುಗಳು ಬಿಡುಗಡೆಗೊಳಿಸಿರುವ ವೀಡಿಯೋ ಸ್ಪಷ್ಟೀಕರಣವು ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಯಾರೋ ಬರೆದುಕೊಟ್ಟ ಚಿತ್ರಕಥೆಯನ್ನು ವಾರ್ತಾ ವಾಚಕನಂತೆ ಓದಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಹಿರಿಯರು ನೇರ ಆರೋಪ ಮಾಡಿದ್ದಾರೆ.


ಸುದ್ದಿ ಪ್ರಸಾರವಾಗುತ್ತಿದ್ದಂತೆ ಇಬ್ಬರ ವಜಾ – ಸತ್ಯಕ್ಕೆ ಸಿಕ್ಕ ಜಯ!
ತಾವೇ ನಿಯಮಾನುಸಾರ ಚುನಾವಣೆ ನಡೆಸಿದ್ದಾಗಿ ಧರ್ಮಗುರುಗಳು ವೀಡಿಯೋದಲ್ಲಿ ಹೇಳಿಕೊಂಡಿರುವುದು ಹಸಿ ಹಸಿ ಸುಳ್ಳಾಗಿದೆ. ಮಂಗಳೂರು ಧರ್ಮಕ್ಷೇತ್ರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ಎರಡು ಕುಟುಂಬಗಳ ನಾಲ್ಕು ಸದಸ್ಯರನ್ನು ತರಾತುರಿಯಲ್ಲಿ ಹುದ್ದೆಗೆ ನೇಮಿಸಿದ್ದು ಏಕೆ? ಎಂಬ ಪ್ರಶ್ನೆಗೆ ಧರ್ಮಗುರುಗಳ ಬಳಿ ಉತ್ತರವಿಲ್ಲ.
ಚರ್ಚ್ನ ಹಿರಿಯರು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಗೆ ಲಿಖಿತ ದೂರು ನೀಡುತ್ತಿದ್ದಂತೆ ಮತ್ತು ‘ಕರಾವಳಿ ಸುದ್ದಿ’ ವೆಬ್ಸೈಟ್ನಲ್ಲಿ ಈ ಚುನಾವಣಾ ಅಕ್ರಮದ ವರದಿ ಬಿತ್ತರವಾಗುತ್ತಿದ್ದಂತೆ ಧರ್ಮಗುರುಗಳು ಆಂತರಿಕ ದುಗುಡದಿಂದ ನಡುಗಿ ಹೋಗಿದ್ದಾರೆ. ಪ್ರಾಮಾಣಿಕ ಹಾಗೂ ನಿಷ್ಟಾವಂತ ಬಿಷಪ್ ಅವರ ಎದುರು ತಾನು ಸಿಕ್ಕಿಬಿದ್ದು ಮುಖಭಂಗ ಅನುಭವಿಸುವ ಭೀತಿಯಿಂದ ತರಾತುರಿಯಲ್ಲಿ ಎರಡು ಕುಟುಂಬದ ಇಬ್ಬರು ಸದಸ್ಯರನ್ನು ಹುದ್ದೆಯಿಂದ ಕೈಬಿಟ್ಟಿರುವುದೇ ‘ಕರಾವಳಿ ಸುದ್ದಿ’ಯ ವರದಿ ನೂರಕ್ಕೆ ನೂರು ಸತ್ಯ ಎಂಬುದಕ್ಕೆ ಬಹಿರಂಗ ಸಾಕ್ಷಿಯಾಗಿದೆ.


ಸ್ಪಷ್ಟೀಕರಣ ಓದಲು ಫಾ. ಪ್ಯಾಟ್ರಿಕ್ ಸಿಕ್ವೇರಾರಿಗೆ ಬರೆದು ನೀಡಿದವರು ಯಾರು? ಚರ್ಚ್ ಹಿರಿಯರ ಪ್ರಶ್ನೆ
ಒಬ್ಬ ಧರ್ಮಗುರುವಾಗಿ 11 ವರ್ಷಗಳ ಕಾಲ ಧಾರ್ಮಿಕ ಶಿಕ್ಷಣ ಪಡೆದು, ಸತ್ಯ ಮತ್ತು ಧರ್ಮವನ್ನು ಬೋಧಿಸಬೇಕಾದ ಸ್ಥಾನದಲ್ಲಿರುವ ಫಾ. ಪ್ಯಾಟ್ರಿಕ್ ಸಿಕ್ವೇರಾ ಅವರು ಆತ್ಮಸಾಕ್ಷಿಯಿಲ್ಲದೆ ವರ್ತಿಸುತ್ತಿದ್ದಾರೆ. ‘ಕರಾವಳಿ ಸುದ್ದಿ’ ಮಾಧ್ಯಮದ ಏಳಿಗೆ ಮತ್ತು ಅದರ ನಿಷ್ಪಕ್ಷಪಾತ ವರದಿಯನ್ನು ಅರಗಿಸಿಕೊಳ್ಳಲಾಗದೆ, ಸಾರ್ವಜನಿಕ ವಲಯದಲ್ಲಿ ತಮಗಾದ ಮುಖಭಂಗದಿಂದ ತಪ್ಪಿಸಿಕೊಳ್ಳಲು ಈ ತೇಪೆ ಹಚ್ಚುವ ವೀಡಿಯೋ ತಂತ್ರ ಹೂಡಿದ್ದಾರೆ. ತಾವು ಪ್ರಾಮಾಣಿಕರಾಗಿದ್ದರೆ ಮಾಧ್ಯಮದ ವರದಿಗೆ ಹೆದರಿ ತರಾತುರಿಯಲ್ಲಿ ಸ್ಪಷ್ಟೀಕರಣ ನೀಡುವ ಮತ್ತು ಪದಾಧಿಕಾರಿಗಳನ್ನು ಬದಲಾಯಿಸುವ ಅಗತ್ಯವೇನಿತ್ತು? ಎಂದು ಭಕ್ತಾದಿಗಳು ಪ್ರಶ್ನಿಸುತ್ತಿದ್ದಾರೆ.


ಪವಾಡ ಪುರುಷ ಸಂತ ಜೋಸೆಫರು ಬುದ್ಧಿ ನೀಡಲಿ!
“ಜನರ ದಾರಿ ತಪ್ಪಿಸುವ ಸುಳ್ಳು ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ತಾವು ಕುಳಿತಿರುವ ಧರ್ಮಬೋಧನೆಯ ಪೀಠದ ಪವಿತ್ರತೆಯನ್ನು ಅರಿತು, ಸತ್ಯಾಸತ್ಯತೆಯನ್ನು ವಿಮರ್ಶಿಸಿ ಆತ್ಮಸಾಕ್ಷಿಯಂತೆ ನಡೆಯುವಂತಾಗಲಿ. ಇದಕ್ಕಾಗಿ ಸೂರಿಕುಮೇರು ಚರ್ಚ್ನ ಪವಾಡ ಪುರುಷ ಸಂತ ಜೋಸೆಫರು ಫಾ. ಪ್ಯಾಟ್ರಿಕ್ ಸಿಕ್ವೇರಾರಿಗೆ ಒಳ್ಳೆಯ ಬುದ್ಧಿಯನ್ನು ಕರುಣಿಸಲಿ” ಎಂದು ಸೂರಿಕುಮೇರು ಚರ್ಚ್ನ ಹಿರಿಯರು ಹಾಗೂ ಭಕ್ತಾದಿಗಳು ಪ್ರಾರ್ಥಿಸುತ್ತಿದ್ದಾರೆ.



