May 22, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಟ್ಲ ಪೊಲೀಸರ ಮೇಲೆ ಕಾರು ಚಲಾಯಿಸಿ ಪರಾರಿಯಾಗಲು ಯತ್ನ – ಇಬ್ಬರು ಜಾನುವಾರು ಕಳ್ಳಸಾಗಣೆದಾರರ ವಿರುದ್ಧ ಪ್ರಕರಣ ದಾಖಲು, ಓರ್ವ ವಶಕ್ಕೆ

ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ತಡೆಯಲು ಯತ್ನಿಸಿದ ಪೊಲೀಸರ ಮೇಲೆಯೇ ಕಾರು ಚಲಾಯಿಸಿ, ಪ್ರಾಣಾಪಾಯ ಉಂಟುಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಪಂಜರಕೋಡಿ ಎಂಬಲ್ಲಿ ಮೇ 21ರಂದು ಗುರುವಾರ ಬೆಳಿಗ್ಗೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಬಲೆ ಬೀಸಿದ್ದಾರೆ.

ಘಟನೆಯ ವಿವರ:

ಅಕ್ರಮ ಗೋ ಸಾಗಾಟದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ ಅವರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪಿಎಸ್‌ಐ ಮತ್ತು ಅವರ ಸಿಬ್ಬಂದಿ ತಂಡ ಕೊಳ್ನಾಡು ಪಂಜರಕೋಡಿ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆ ಮಾರ್ಗವಾಗಿ ಬಂದ KA-19-D-1496 ನೋಂದಣಿ ಸಂಖ್ಯೆಯ ಪಿಕ್‌ಅಪ್ ವಾಹನವನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ.

ಇದೇ ವೇಳೆ ಪಿಕ್‌ಅಪ್ ವಾಹನಕ್ಕೆ ಬೆಂಗಾವಲಾಗಿ (Escort) ಬರುತ್ತಿದ್ದ KA-21-MA-0801 ಸಂಖ್ಯೆಯ ಸ್ವಿಫ್ಟ್ ಕಾರಿನಲ್ಲಿದ್ದ ಬಶೀರ್ ಎಂಬ ಆರೋಪಿಯು, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗಳ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಅತಿವೇಗವಾಗಿ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಹಿಂಸಾತ್ಮಕವಾಗಿ ಕೂಡಿ ಹಾಕಿದ್ದ ಜಾನುವಾರುಗಳು:

ಬಳಿಕ ಪೊಲೀಸರು ಸ್ಥಳದಲ್ಲಿದ್ದ ಪಿಕ್‌ಅಪ್ ವಾಹನವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅದರಲ್ಲಿ ಎರಡು ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಪಿಕ್‌ಅಪ್ ಚಾಲಕ, ಬಂಟ್ವಾಳದ ಬಾಳೆಪುಣಿ ನಿವಾಸಿ 44 ವರ್ಷ ಪ್ರಾಯದ ಮೊಹಮ್ಮದ್ ಹನೀಪ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಯಾವುದೇ ಪರವಾನಗಿ ಇಲ್ಲದೆ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದಲೇ ಸಾಗಿಸುತ್ತಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಪ್ರಕರಣ ದಾಖಲು:

ಕಾರ್ಯಾಚರಣೆ ವೇಳೆ ಪೊಲೀಸರು ಕೃತ್ಯಕ್ಕೆ ಬಳಸಿದ ಪಿಕ್‌ಅಪ್ ವಾಹನ ಮತ್ತು ಎರಡು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಚಾಲಕ ಮೊಹಮ್ಮದ್ ಹನೀಪ್ ಹಾಗೂ ಪರಾರಿಯಾಗಿರುವ ಬಶೀರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 114/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS-2023), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಮತ್ತು ಸಂರಕ್ಷಣಾ ಅಧಿನಿಯಮ 2020 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಗಳ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

You may also like

News

ಮಂಗಳೂರಿನಲ್ಲಿ ಕರಾವಳಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ; ಸಂಘ-ಸಂಸ್ಥೆಗಳೊಂದಿಗೆ MLC ಐವನ್ ಡಿಸೋಜ ಸಮಾಲೋಚನೆ

ಕರಾವಳಿ ಕರ್ನಾಟಕದ ಹಲವು ವರ್ಷಗಳ ದೀರ್ಘಕಾಲದ ಬೇಡಿಕೆಯಾದ ‘ಹೈಕೋರ್ಟ್ ಸಂಚಾರಿ ಪೀಠ’ ಸ್ಥಾಪನೆಗೆ ಸಂಬಂಧಿಸಿದಂತೆ, ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ
News

INTERNATIONAL NURSES DAY 2026 celebrated at Father Muller

International Nurses Day 2026 was celebrated with great zeal at Father Muller Medical College Hospital on May 12. The celebration

You cannot copy content of this page