ಧರ್ಮಸ್ಥಳದಲ್ಲಿ ಪತ್ತನಾಜೆ ಸಡಗರ – ವಾರ್ಷಿಕ ಉತ್ಸವಗಳು ಹಾಗೂ ಯಕ್ಷಗಾನ ಮೇಳದ ತಿರುಗಾಟಕ್ಕೆ ತೆರೆ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಡಗರದ ‘ಪತ್ತನಾಜೆ’ ಪ್ರಯುಕ್ತ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ, ವಸಂತ ಪೂಜೆ ಹಾಗೂ ಧ್ವಜಮರ ಅವರೋಹಣ ವಿಧಿವಿಧಾನಗಳೊಂದಿಗೆ ಈ ಸಾಲಿನ ವಾರ್ಷಿಕ ವಿಶೇಷ ಸೇವೆಗಳು ಮತ್ತು ಉತ್ಸವಗಳು ಸಂಪನ್ನಗೊಂಡವು. ಇನ್ನು ಕಾರ್ತಿಕ ಮಾಸದ ದೀಪೋತ್ಸವದ ಬಳಿಕವಷ್ಟೇ ಕ್ಷೇತ್ರದಲ್ಲಿ ಎಂದಿನಂತೆ ವಿಶೇಷ ಸೇವೆಗಳು ಪುನರಾರಂಭಗೊಳ್ಳಲಿವೆ. ಸೋಮವಾರ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.


ವೈಭವದ ಶೋಭಾಯಾತ್ರೆ:
ಇದೇ ಸಂದರ್ಭದಲ್ಲಿ ಖ್ಯಾತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವಾರ್ಷಿಕ ತಿರುಗಾಟಕ್ಕೂ ಮಂಗಳ ಹಾಡಲಾಯಿತು. ಮಧ್ಯಾಹ್ನ ಗಣಯಾಗ ನೆರವೇರಿದ ಬಳಿಕ, ಸಂಜೆ ಕ್ಷೇತ್ರದ ಆನೆಗಳು, ಕೇರಳದ ಚೆಂಡೆ ವಾದ್ಯಸಂಗೀತದ ವೈಭವದ ಮೆರವಣಿಗೆಯ ಮೂಲಕ ಯಕ್ಷಗಾನ ಮೇಳದ ಶ್ರೀ ಮಹಾಗಣಪತಿ ದೇವರನ್ನು ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಸೇರಿದಂತೆ ಪ್ರಮುಖರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಗಳವಾರದಿಂದ ಮೂರು ದಿನಗಳ ಕಾಲ ಅಮೃತವರ್ಷಿಣಿ ಸಭಾಭವನದಲ್ಲಿ ಸೇವೆಯಾಟಗಳು ನಡೆಯಲಿದ್ದು, ಕಲಾವಿದರು ಸಂಪ್ರದಾಯಬದ್ಧವಾಗಿ ಗೆಜ್ಜೆ ಬಿಚ್ಚಲಿದ್ದಾರೆ.



