ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ – ಮುಕ್ತಾಯಗೊಂಡ ಅಧಿಕಾರ ಬದಲಾವಣೆಯ ಹೈಡ್ರಾಮಾ!
ಕರ್ನಾಟಕ ರಾಜಕೀಯ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಇದೀಗ ಅಧಿಕೃತವಾಗಿ ಮುಕ್ತಾಯದ ಹಂತ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಘನತವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ.

ರಾಜೀನಾಮೆ ಹಾದಿ:
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನೀಡಿದ ಸ್ಪಷ್ಟ ಸೂಚನೆಯ ಹಿನ್ನೆಲೆಯಲ್ಲಿ, ಮೇ 28ರಂದು ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಉಪಹಾರ ಕೂಟ (ಬ್ರೇಕ್ ಫಾಸ್ಟ್ ಮೀಟಿಂಗ್) ಆಯೋಜಿಸಿದ್ದರು. ಈ ಸಭೆಯಲ್ಲೇ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ನಿರ್ಧಾರವನ್ನು ಪ್ರಕಟಿಸಿದ್ದರು.

ಅಧಿಕೃತ ಅಂಗೀಕಾರ:
ಉಪಹಾರ ಕೂಟದ ಬಳಿಕ ನೇರವಾಗಿ ರಾಜ್ಭವನಕ್ಕೆ (ಲೋಕಭವನ) ತೆರಳಿದ ಸಿದ್ದರಾಮಯ್ಯ ಅವರು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಾದ ಪ್ರಭುಶಂಕರ್ ಅವರಿಗೆ ತಮ್ಮ ಅಧಿಕೃತ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದರು. ಪ್ರಸ್ತುತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ವಿಶೇಷ ವಿವೇಚನಾಧಿಕಾರವನ್ನು ಬಳಸಿ ಈ ರಾಜೀನಾಮೆ ಪತ್ರವನ್ನು ಸ್ವೀಕರಿಸಿ, ಅಂಗೀಕಾರ ಮುದ್ರೆ ಒತ್ತಿದ್ದಾರೆ.

ಈ ಬೆಳವಣಿಗೆಯೊಂದಿಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ದ್ವಿತೀಯ ಅವಧಿಯ ಆಡಳಿತದ ಪರ್ವ ಮುಕ್ತಾಯಗೊಂಡಂತಾಗಿದ್ದು, ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿಯ ಪದಗ್ರಹಣಕ್ಕೆ ಹಾದಿ ಸುಗಮವಾಗಿದೆ. ಹೊಸ ಸರ್ಕಾರದ ರಚನೆ ಹಾಗೂ ಸಚಿವ ಸಂಪುಟ ಪುನರ್ರಚನೆಯ ಚಟುವಟಿಕೆಗಳು ರಾಜಧಾನಿಯಲ್ಲಿ ಬಿರುಸುಗೊಂಡಿವೆ.



