ಚಾರ್ಮಾಡಿ ಬಳಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಡಿ.ಸಿ.ಆರ್.ಇ. SP ಸೈಮನ್ ಪ್ರಯಾಣಿಸುತ್ತಿದ್ದ ಕಾರು – ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು!
ಪಶ್ಚಿಮ ವಲಯ ಡಿ.ಸಿ.ಆರ್.ಇ. (DCRE) ಪೊಲೀಸ್ ಅಧೀಕ್ಷಕರಾದ SP ಸೈಮನ್ ಸಿ.ಎ. ಅವರು ಪ್ರಯಾಣಿಸುತ್ತಿದ್ದ ಸರ್ಕಾರಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅಂಬಿಕಾನಗರ ಎಂಬಲ್ಲಿ ಜೂನ್ 16 ರಂದು ಮಧ್ಯಾಹ್ನ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದ್ದರೂ, ಅದೃಷ್ಟವಶಾತ್ ಕಾರಿನಲ್ಲಿದ್ದ ಎಸ್ಪಿ ಸೇರಿದಂತೆ ನಾಲ್ವರೂ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


SP ಸೈಮನ್ ಸಿ.ಎ. ಅವರು ತಮ್ಮ ಸರ್ಕಾರಿ ಇನೋವಾ ಕಾರಿನಲ್ಲಿ (KA 01 G 6463) ಪೊಲೀಸ್ ಇನ್ಸ್ಪೆಕ್ಟರ್ (ಪಿ.ಐ.) ಕುಸುಮಾಧರ ಮತ್ತು ಸಿಬ್ಬಂದಿ ಮಂಜುನಾಥ್ ಅವರೊಂದಿಗೆ ಚಿಕ್ಕಮಗಳೂರಿಗೆ ತೆರಳುತ್ತಿದ್ದರು. ಚಾಲಕ ಬೈರೆ ಗೌಡ ಎಂಬವರು ವಾಹನ ಚಲಾಯಿಸುತ್ತಿದ್ದರು. ಕಾರು ಚಾರ್ಮಾಡಿ ಅಂಬಿಕಾನಗರ ತಲುಪುತ್ತಿದ್ದಂತೆ ಹಠಾತ್ತನೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.



ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 55/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




