July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕ್ರೈಸ್ತ ಸಮುದಾಯದ ಏಕತೆಗೆ ಮಹತ್ವದ ಹೆಜ್ಜೆ – ಮೈಸೂರು ಧರ್ಮಕ್ಷೇತ್ರದ ಬಿಷಪ್ ಡಾ. ಫ್ರಾನ್ಸಿಸ್ ಸೆರಾವೊ ಅವರನ್ನು ಭೇಟಿ ಮಾಡಿದ DAPC ನಿಯೋಗ

DAPC ವತಿಯಿಂದ ಆರ್ಚ್ಬಿಷಪ್ ಡಾ. ವಿನೋದ್ ಎಂ. ಚಾಕೋ ಅವರಿಂದ ಸೌಹಾರ್ದಯುತ ಸಂವಾದ

ಕ್ರೈಸ್ತ ಸಮುದಾಯದಲ್ಲಿ ಏಕತೆ, ಪರಸ್ಪರ ಸಹಕಾರ ಮತ್ತು ಸಮಗ್ರ ಅಭಿವೃದ್ಧಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ ಇಡಲಾಗಿದೆ. ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚಸ್ (DAPC) ಕರ್ನಾಟಕದ ವತಿಯಿಂದ ಆರ್ಚ್‌ಬಿಷಪ್ ರೆವರೆಂಡ್ ಡಾ. ವಿನೋದ್ ಎಂ. ಚಾಕೋ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಮೈಸೂರು ಧರ್ಮಕ್ಷೇತ್ರದ ಬಿಷಪ್ ಪರಮಪೂಜ್ಯ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಅವರನ್ನು ಮೈಸೂರಿನ ಬಿಷಪ್ ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿತು.

DAPC ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸಿದ ಬಿಷಪ್ ಡಾ. ಫ್ರಾನ್ಸಿಸ್ ಸೆರಾವೊ ಅವರು, ವಿವಿಧ ಕ್ರೈಸ್ತ ಪಂಗಡಗಳನ್ನು ಒಗ್ಗೂಡಿಸಲು ಮತ್ತು ಸಹಕಾರ ವೃದ್ಧಿಸಲು DAPC ಕೈಗೊಂಡಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಸಮುದಾಯದ ಹಿತಾಸಕ್ತಿ, ಏಕತೆ ಹಾಗೂ ಸಾಮೂಹಿಕ ಕಲ್ಯಾಣಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಪ್ರಮುಖ ವಿಷಯಗಳ ಕುರಿತು ಚರ್ಚೆ:

ಈ ಉನ್ನತ ಮಟ್ಟದ ಸಭೆಯಲ್ಲಿ ಕ್ರೈಸ್ತರ ಏಕತೆ, ಸಮುದಾಯದ ಕಲ್ಯಾಣ, ನಾಯಕತ್ವದ ಸಹಯೋಗ ಹಾಗೂ ಪ್ರಸ್ತುತ ಸಮುದಾಯ ಎದುರಿಸುತ್ತಿರುವ ವಿವಿಧ ಸವಾಲುಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ (UCF) ಮೂಲಕ ನಡೆಯುವ ಒಕ್ಕೂಟದ ಕಾರ್ಯಗಳಿಗೆ ತಮ್ಮ ಬಲವಾದ ಬೆಂಬಲ ಪ್ರಕಟಿಸಿದ ಬಿಷಪ್ ಸೆರಾವೊ ಅವರು, ವಿಶ್ವಾಸ, ಸೇವೆ ಮತ್ತು ಸಹೋದರತ್ವದಲ್ಲಿ ಕ್ರೈಸ್ತರೆಲ್ಲರೂ ಒಂದಾಗಿ ನಿಲ್ಲುವುದು ಇಂದಿನ ಅಗತ್ಯವಾಗಿದೆ ಎಂದು ಒತ್ತಿಹೇಳಿದರು.

ಆರ್ಚ್‌ಬಿಷಪ್ ರೆವರೆಂಡ್ ಡಾ. ವಿನೋದ್ ಎಂ. ಚಾಕೋ ಅವರು ಡಿಎಪಿಸಿಯ ದೂರದೃಷ್ಟಿ (Vision) ಮತ್ತು ಧ್ಯೇಯೋದ್ದೇಶಗಳನ್ನು (Mission) ಹಂಚಿಕೊಳ್ಳುತ್ತಾ, ಪೆಂಟಕೊಸ್ಟಲ್ ಚರ್ಚುಗಳ ಏಕೀಕರಣ, ಕ್ರೈಸ್ತ ನಾಯಕತ್ವದ ಬಲವರ್ಧನೆ, ಮಾನವ ಹಕ್ಕುಗಳ ರಕ್ಷಣೆ ಹಾಗೂ ಸಮಾಜ ಸೇವೆಯ ಮೂಲಕ ದೇವರ ರಾಜ್ಯವನ್ನು ವಿಸ್ತರಿಸುವ ಉದ್ದೇಶಗಳನ್ನು ವಿವರಿಸಿದರು. ಎಲ್ಲಾ ಕ್ರೈಸ್ತ ಪಂಗಡಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಡಿಎಪಿಸಿ ಸದಾ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.

ವಿಕಾರ್ ಜನರಲ್ ಭೇಟಿ ಮತ್ತು ಧನ್ಯವಾದ ಸಮರ್ಪಣೆ:

ಮೈಸೂರು ಝೊನಲ್ ಬಿಷಪ್ ರೆವರೆಂಡ್ ಸುನಿಲ್ ವಿ. ಜೇಕಬ್ ಅವರು ನಿಯೋಗವನ್ನು ಪರಿಚಯಿಸಿ, ಫಲಪ್ರದ ಸಂವಾದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮೈಸೂರು ಹೋಪ್ ಸೆಂಟರ್‌ನ ಸಂಸ್ಥಾಪಕರಾದ ರೆವರೆಂಡ್ ಡಾ. ತಿಮೋತಿ ಜಾನ್ ಅವರು ಮಾತನಾಡಿ, ಕ್ರೈಸ್ತ ನಾಯಕರ ನಡುವೆ ಇನ್ನಷ್ಟು ಸಹಕಾರ ಬೆಳೆಯಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.

ಇದೇ ಭೇಟಿಯ ವೇಳೆ ನಿಯೋಗವು ಮೈಸೂರು ಧರ್ಮಕ್ಷೇತ್ರದ ವಿಕಾರ್ ಜನರಲ್ ಅತೀ ವಂದನೀಯ ಅಂತಪ್ಪ ಅವರನ್ನು ಭೇಟಿ ಮಾಡಿತು. ನಿಯೋಗದ ಕಾರ್ಯಚಟುವಟಿಕೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಮುಂದಿನ ಯೋಜನೆಗಳಿಗೆ ತಮ್ಮ ಸಂಪೂರ್ಣ ಸಹಕಾರ, ಶುಭಾಶಯ ಮತ್ತು ಪ್ರಾರ್ಥನಾ ಬೆಂಬಲವನ್ನು ನೀಡಿದರು.

ನಿಯೋಗದಲ್ಲಿದ್ದ ಪ್ರಮುಖರು:

ಈ ಐತಿಹಾಸಿಕ ಸೌಹಾರ್ದ ಭೇಟಿಯಲ್ಲಿ ಮೈಸೂರು ಝೊನ್ ಬಿಷಪ್ ರೆವರೆಂಡ್ ಸುನಿಲ್ ವಿ. ಜೇಕಬ್, ಮಂಡ್ಯ ಧರ್ಮಪ್ರಾಂತ್ಯದ ಬಿಷಪ್ ರೆವರೆಂಡ್ ಲೋಕೇಶ್ ಪೀಟರ್, ಕೊಡಗು ಧರ್ಮಪ್ರಾಂತ್ಯದ ಬಿಷಪ್ ರೆವರೆಂಡ್ ಡಿ. ಟೈಟಸ್, ಚಾಮರಾಜನಗರ ಧರ್ಮಪ್ರಾಂತ್ಯದ ಬಿಷಪ್ ರೆವರೆಂಡ್ ಸುರೇಶ್, ಸಿನೋಡ್ ಕಾರ್ಯದರ್ಶಿ ಬಿಷಪ್ ಮೋಸೆಸ್, ಖಜಾಂಚಿ ಸಹೋದರ ವಿನಯ್ ಕರ್ಜಗಿ, ರೆವರೆಂಡ್ ಸಿಮ್ಸನ್ ಶ್ರೀನಿವಾಸ್, ರೆವರೆಂಡ್ ರವಿಕುಮಾರ್, ರೆವರೆಂಡ್ ಅಲೆಕ್ಸ್ ಮೈಕೆಲ್, ರೆವರೆಂಡ್ ಸ್ಟಾಲಿನ್ ಜೀಗ್ಲರ್ ಮತ್ತು ಸ್ತುತಿ ಎಕ್ಸ್‌ಪ್ರೆಸ್‌ನ ಸಹೋದರ ತಿಮೋತಿ ಎ.ವೈ. ಉಪಸ್ಥಿತರಿದ್ದರು.

ಸಭೆಯು ಜಂಟಿ ಪ್ರಾರ್ಥನೆ ಹಾಗೂ ಸಹಭಾಗಿತ್ವದ ಮನೋಭಾವದೊಂದಿಗೆ ಮುಕ್ತಾಯಗೊಂಡಿತು. ಈ ಭೇಟಿಯು ಕ್ರೈಸ್ತ ನಾಯಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಸಮುದಾಯದ ಆತ್ಮಿಕ ಮತ್ತು ಸಾಮಾಜಿಕ ಪ್ರಗತಿಗೆ ಹೊಸ ದಿಕ್ಸೂಚಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page