ಕೋಮು ಸೌಹಾರ್ದತೆಗೆ ಧಕ್ಕೆ – ‘ಸನಾತನಿ ಸಿಂಹ’ ಪೇಜ್ ನಿರ್ವಾಹಕ ಆನಂದ್, ವಿಟ್ಲ ಪೊಲೀಸರ ವಶಕ್ಕೆ
ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಕಮೆಂಟ್ ಮಾಡಿದ್ದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬೆಂಗಳೂರಿನ ವಿದ್ಯಮಾನ್ಯ ನಗರದ ನಿವಾಸಿಯಾದ ಆನಂದ ಎ. (ಸನಾತನಿ ಸಿಂಹ ಫೇಸ್ಬುಕ್ ಪೇಜ್ ನಿರ್ವಾಹಕ) ಬಂಧಿತ ಆರೋಪಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆ:
ಕಳೆದ ವರ್ಷ ದಿನಾಂಕ: 18-09-2025 ಫೇಸ್ಬುಕ್ ಪೋಸ್ಟ್ ಒಂದಕ್ಕೆ ‘ಸನಾತನಿ ಸಿಂಹ’ ಎಂಬ ಹೆಸರಿನ ಪೇಜ್ನಿಂದ ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಆಕ್ಷೇಪಾರ್ಹ ಕಮೆಂಟ್ ಮಾಡಲಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 131/2025, ಕಲಂ: 353(2) BNS 2023 ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧನ ಮತ್ತು ನ್ಯಾಯಾಂಗ ಬಂಧನ:
ಪ್ರಕರಣದ ತೀವ್ರತೆ ಅರಿತು ತನಿಖೆ ಕೈಗೆತ್ತಿಕೊಂಡಿದ್ದ ವಿಟ್ಲ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಜೂನ್ 27ರಂದು ಶನಿವಾರ ಆರೋಪಿ ಆನಂದ್ನನ್ನು ದಸ್ತಗಿರಿ ಮಾಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹಳೇ ಚಾಲಿ, 7 ಪ್ರಕರಣಗಳು ದಾಖಲು!
ಪೊಲೀಸ್ ತನಿಖೆಯ ವೇಳೆ ಬಂಧಿತ ಆರೋಪಿ ಆನಂದ್ ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ಇದೇ ರೀತಿಯ ಆಕ್ಷೇಪಾರ್ಹ ಹಾಗೂ ಪ್ರಚೋದನಾಕಾರಿ ಸುದ್ದಿಗಳನ್ನು ಹರಡುತ್ತಿರುವುದು ಬೆಳಕಿಗೆ ಬಂದಿದೆ. ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಒಟ್ಟು 7 ಪ್ರಕರಣಗಳು ದಾಖಲಾಗಿವೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.




