3 ವರ್ಷ ತಲೆಮರೆಸಿಕೊಂಡಿದ್ದ ಕಳ್ಳತನ ಆರೋಪಿಯನ್ನು ಬಂಧಿಸಿದ ವಿಟ್ಲ ಪೊಲೀಸರು
ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿ ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 204/2018ರ, ಭಾರತೀಯ ದಂಡ ಸಂಹಿತೆಯ 379ನೇ ಕಲಂನಡಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಳ್ತಂಗಡಿ ನಿವಾಸಿ 41 ವರ್ಷ ಪ್ರಾಯದ ರಾಜೇಶ್ ಎಂಬಾತ ಮೂರು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದ.


ವಿಟ್ಲ ಪೊಲೀಸ್ ಠಾಣೆಯ ASI ಜಯರಾಮ್ ನೇತೃತ್ವದಲ್ಲಿ ಸಿಪಿಸಿ 2355 ವೆಂಕಪ್ಪ ಹಾಗೂ ಸಿಪಿಸಿ 2462 ಶಿವಾನಂದ ಅವರ ತಂಡವು ಜುಲೈ 6ರಂದು ಮಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿ, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.




