July 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೈಂಟ್ ಆ್ಯಂಟನಿ ಆಶ್ರಮ ಇಂದು ನಿರಾಶ್ರಿತರ ಆಶಾಕಿರಣ – ಫಾದರ್ ಜೆ.ಬಿ. ಕ್ರಾಸ್ತಾ

18ನೇ ಶತಮಾನದಲ್ಲಿ ಆನೆಕಾಲು (ಫೈಲೇರಿಯಾ) ಮತ್ತು ಕ್ಷಯರೋಗ (ಟಿಬಿ) ಪೀಡಿತರ ಸೇವೆಯ ಉದ್ದೇಶದಿಂದ ಆರಂಭಗೊಂಡಿದ್ದ ಸೈಂಟ್ ಆ್ಯಂಟನಿ ಆಶ್ರಮ, ಕಾಲ ಬದಲಾದಂತೆ ಇಂದು ನಿರಾಶ್ರಿತರು, ಆಶ್ರಯವಿಲ್ಲದ ಹಿರಿಯರು ಹಾಗೂ ಆರೈಕೆಯ ಅಗತ್ಯವಿರುವವರಿಗೆ ಆಶ್ರಯ ನೀಡುವ ಮಾನವೀಯ ಸೇವಾ ಕೇಂದ್ರವಾಗಿ ರೂಪುಗೊಂಡಿದೆ ಎಂದು ಆಶ್ರಮದ ನಿರ್ದೇಶಕರಾದ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ ಅವರು ಹೇಳಿದರು. ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ (KBMK) ಕಾರ್ಯಕಾರಿ ಸಮಿತಿ ಸದಸ್ಯರಿಗೆ ಆಶ್ರಮದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಬಳಿಕ ಮಾತನಾಡಿದರು. ಮಿಲಾಗ್ರಿಸ್ ಚರ್ಚ್ ವಠಾರದಲ್ಲಿ ಭಕ್ತರ ಸಹಕಾರದಿಂದ ಆರಂಭಗೊಂಡ ಈ ಸಂಸ್ಥೆ, ಆರಂಭದಲ್ಲಿ ಫೈಲೇರಿಯಾ ಹಾಗೂ ಟ್ಯೂಬರ್‌ಕುಲೋಸಿಸ್ ರೋಗಿಗಳ ಆರೈಕೆಗೆ ಮೀಸಲಾಗಿದ್ದರೂ, ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಸಮಾಜದ ನಿರ್ಗತಿಕರಿಗೆ ಆಶ್ರಯ ನೀಡುವ ಸೇವಾ ಸಂಸ್ಥೆಯಾಗಿ ಬೆಳೆದಿರುವುದನ್ನು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಆಶ್ರಮದಲ್ಲಿರುವ ಕ್ರೈಸ್ತ ಧರ್ಮದ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವ ವಿಶೇಷ ಮ್ಯೂಸಿಯಂ ಕುರಿತು ಸದಸ್ಯರಿಗೆ ಮಾಹಿತಿ ನೀಡಿದ ಫಾದರ್ ಕ್ರಾಸ್ತಾ ಅವರು, ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಮ್ಯೂಸಿಯಂಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕದ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಅವರು ಮಾತನಾಡಿ, ಕೊಂಕಣಿ ಭಾಷೆ ಕೇವಲ ಒಂದು ಭಾಷೆಯಲ್ಲ, ಅದು ವಿವಿಧ ಧರ್ಮ ಮತ್ತು ಸಮುದಾಯಗಳನ್ನು ಬೆಸೆಯುವ ಸಾಂಸ್ಕೃತಿಕ ಕೊಂಡಿಯಾಗಿದೆ ಎಂದರು. ಹಿಂದು, ಕ್ರೈಸ್ತ, ಮುಸ್ಲಿಂ, ಕುಡುಬಿ, ಖಾರ್ವಿ, ಗೌಡ ಸಾರಸ್ವತ ಬ್ರಾಹ್ಮಣ (GSB), ಸಿದ್ದಿ ಸೇರಿದಂತೆ ವಿವಿಧ ಸಮುದಾಯಗಳ ಜನರು ಕೊಂಕಣಿ ಭಾಷೆಯ ಮೂಲಕ ಒಂದಾಗಿರುವುದು ಸೌಹಾರ್ದ ಸಮಾಜದ ಪ್ರತೀಕವಾಗಿದೆ ಎಂದು ಹೇಳಿದರು. ಸರ್ವಧರ್ಮ ಸೌಹಾರ್ದ ಮತ್ತು ಪರಸ್ಪರ ತಿಳುವಳಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಪರಸ್ಪರ ಭೇಟಿ ಹಾಗೂ ಸಂವಾದ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದ್ದು, ಸಮಾಜದಲ್ಲಿ ಐಕ್ಯತೆಯ ಸಂದೇಶವನ್ನು ಬಲಪಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ನಿರ್ವಹಣೆಯನ್ನು ಖಜಾಂಚಿ ವಸಂತ ಕೆ. ರಾವ್ ವಹಿಸಿದರು. ಕಾರ್ಯದರ್ಶಿ ಲಿಸ್ಟನ್ ಡಿಸೋಜ ವಂದಿಸಿದರು. ಉಪಾಧ್ಯಕ್ಷೆ ಮೀನಾಕ್ಷಿ ಪೈ, ಕಾರ್ಯಕಾರಿ ಸಲಹೆದಾರೆ ಗೀತಾ ಕಿಣಿ, ಸದಸ್ಯರಾದ ಝೀನಾ ಫೆರ್ನಾಂಡಿಸ್, ಎಡೋಲ್ಫ್ ಡಿಸೋಜ, ಜೊಸ್ಸಿ ಪಿಂಟೊ, ಲಾರೆನ್ಸ್ ಪಿಂಟೊ, ಶಾಂತಿ ವೆರೊನಿಕಾ ಹಾಗೂ ಆಹ್ವಾನಿತರಾದ ಸ್ಟೇನಿ ತಾವ್ರೊ, ಜೋನ್ ತಾವ್ರೊ, ಹೆರಾಲ್ಡ್ ಅಲ್ಬುಕರ್ಕ್ ಮತ್ತು ಜಿಲ್ಲೂಸ್ ಸಂಸ್ಥೆಯ ಜೂಲಿಯಾನ ಉಪಸ್ಥಿತರಿದ್ದರು.

ಸೇವೆ, ಮಾನವೀಯತೆ ಮತ್ತು ಸರ್ವಧರ್ಮ ಸೌಹಾರ್ದದ ಸಂದೇಶವನ್ನು ಸಾರಿದ ಈ ಭೇಟಿ ಕಾರ್ಯಕ್ರಮವು ಆಶ್ರಮದ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಹತ್ತಿರದಿಂದ ಪರಿಚಯಿಸುವ ಅರ್ಥಪೂರ್ಣ ವೇದಿಕೆಯಾಗಿತು.

You may also like

News

ಬಂಟ್ವಾಳ KSRTC ಬಸ್ ನಿಲ್ದಾಣದಲ್ಲಿ ಭೀಕರ ಹತ್ಯೆ – ಯುವತಿಯನ್ನು ಬೆನ್ನಟ್ಟಿ ಕೊಂದ ದುಷ್ಕರ್ಮಿ, ಆರೋಪಿ ಚೇತನ್ ಪರಾರಿ

ಇಲ್ಲಿನ KSRTC ಬಸ್ ನಿಲ್ದಾಣದಲ್ಲಿ ಇಂದು ಜುಲಾಯಿ 16ರಂದು ಗುರುವಾರ ಯುವತಿಯೊಬ್ಬಳ ಮೇಲೆ ಮಾರಕ ಆಯುಧದಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಂತಕ
News

Father Muller Charitable Institutions Signs MoU with Avishkar Yoga & Holistic Health Center to Advance Holistic Healthcare, Research and Academic Excellence

In a significant step towards promoting holistic healthcare, wellness, research, and academic collaboration, Father Muller Charitable Institutions (FMCI) signed a

You cannot copy content of this page