July 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

‘ಡ್ರಗ್ಸ್ ಫ್ರೀ ಮಂಗಳೂರು’ ಕಾರ್ಯಾಚರಣೆಗೆ ಮಹಾ ಯಶಸ್ಸು

₹5.20 ಕೋಟಿ ಮೌಲ್ಯದ 5.196 ಕೆಜಿ MDMA ಜಪ್ತಿ – ಬೆಳ್ತಂಗಡಿ ಮೂಲದ ಇಬ್ಬರ ಬಂಧನ

‘ಡ್ರಗ್ಸ್ ಫ್ರೀ ಮಂಗಳೂರು’ ಅಭಿಯಾನದ ಭಾಗವಾಗಿ ಮಂಗಳೂರು ನಗರ ಸಿಸಿಬಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ, ದೆಹಲಿಯಿಂದ MDMA ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದ ಬೆಳ್ತಂಗಡಿ ಮೂಲದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ, ಅವರಿಂದ ಸುಮಾರು ₹5.20 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ MDMA ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಮೀಪ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ಜೂನ್ 25ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ತಂಡ ದಾಳಿ ನಡೆಸಿ, ಅಣ್ಣಪ್ಪ ಸ್ವಾಮಿ @ ಮನು ಎಂಬಾತನನ್ನು ಬಂಧಿಸಿತ್ತು. ಆತನಿಂದ 15.17 ಗ್ರಾಂ ಎಂಡಿಎಂಎ (ಅಂದಾಜು ₹1.50 ಲಕ್ಷ ಮೌಲ್ಯ) ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ಮಹತ್ವದ ಸುಳಿವು ಲಭಿಸಿತ್ತು. ತನಿಖೆಯನ್ನು ಮುಂದುವರಿಸಿದ ಸಿಸಿಬಿ ಅಧಿಕಾರಿಗಳು, ದೆಹಲಿಯಿಂದ ದೊಡ್ಡ ಪ್ರಮಾಣದ ಎಂಡಿಎಂಎ ಖರೀದಿಸಿಕೊಂಡು ಬೆಂಗಳೂರಿನತ್ತ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ, ಜುಲೈ 15ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿದರು.

ಈ ವೇಳೆ ಬೆಳ್ತಂಗಡಿ ಇಂಡಬೆಟ್ಟುವಿನ 28 ವರ್ಷ ಪ್ರಾಯದ ಮೊಹಮ್ಮದ್ ಅಲ್ಫಾಜ್ ಹಾಗೂ ಉಜಿರೆ ಲಾಯಿಲಾದ 28 ವರ್ಷ ಪ್ರಾಯದ ಮೊಹಮ್ಮದ್ ಮುಸ್ತಾಫಾ ಅವರನ್ನು ಬಂಧಿಸಲಾಯಿತು. ಆರೋಪಿಗಳಿಂದ 5 ಕೆಜಿ 196 ಗ್ರಾಂ MDMA, ಬ್ಯಾಗ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ತನಿಖೆಯಲ್ಲಿ, ಆರೋಪಿಗಳು ದೆಹಲಿಯಿಂದ ಮಾದಕ ವಸ್ತು ಖರೀದಿಸಿ, ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಹಾಗೂ ಕೇರಳದ ವಿವಿಧ ಭಾಗಗಳಿಗೆ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿದಿದೆ.

ಬಂಧಿತ ಆರೋಪಿ ಮೊಹಮ್ಮದ್ ಅಲ್ಫಾಜ್ ವಿರುದ್ಧ ಈ ಹಿಂದೆಯೇ 2024ರಲ್ಲಿ ಕೊಣಾಜೆ ಪೊಲೀಸ್ ಠಾಣೆ ಹಾಗೂ 2026ರಲ್ಲಿ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ MDMA ಮಾರಾಟ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಭಾರೀ ಕಾರ್ಯಾಚರಣೆಯನ್ನು ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿ ನಡೆಸಿದ್ದು, ಡ್ರಗ್ಸ್ ಫ್ರೀ ಮಂಗಳೂರು ಅಭಿಯಾನಕ್ಕೆ ಇದು ಮತ್ತೊಂದು ಮಹತ್ವದ ಯಶಸ್ಸೆಂದು ಪೊಲೀಸ್ ಇಲಾಖೆ ತಿಳಿಸಿದೆ.

You may also like

News

ಬಂಟ್ವಾಳ KSRTC ಬಸ್ ನಿಲ್ದಾಣದಲ್ಲಿ ಭೀಕರ ಹತ್ಯೆ – ಯುವತಿಯನ್ನು ಬೆನ್ನಟ್ಟಿ ಕೊಂದ ದುಷ್ಕರ್ಮಿ, ಆರೋಪಿ ಚೇತನ್ ಪರಾರಿ

ಇಲ್ಲಿನ KSRTC ಬಸ್ ನಿಲ್ದಾಣದಲ್ಲಿ ಇಂದು ಜುಲಾಯಿ 16ರಂದು ಗುರುವಾರ ಯುವತಿಯೊಬ್ಬಳ ಮೇಲೆ ಮಾರಕ ಆಯುಧದಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಂತಕ
News

Father Muller Charitable Institutions Signs MoU with Avishkar Yoga & Holistic Health Center to Advance Holistic Healthcare, Research and Academic Excellence

In a significant step towards promoting holistic healthcare, wellness, research, and academic collaboration, Father Muller Charitable Institutions (FMCI) signed a

You cannot copy content of this page