ರಾಜು ಸ್ಟೀಫನ್ ಡಿಸೋಜ ಅವರಿಗೆ ಗೆಲುವು – ಕಾಸರಗೋಡಿನಲ್ಲಿ ಬ್ಯಾಂಕ್ಗೆ ದಂಡ ವಿಧಿಸಿದ ಗ್ರಾಹಕ ಆಯೋಗ!
ಕಾಸರಗೋಡು ಸೌತ್ ಇಂಡಿಯನ್ ಬ್ಯಾಂಕ್ನ ಸೀತಾಂಗೋಳಿ ಶಾಖೆಯ ವಿರುದ್ಧ ದೂರು ನೀಡಿದ್ದ ಗ್ರಾಹಕರಾದ ರಾಜು ಸ್ಟೀಫನ್ ಡಿಸೋಜ ಅವರಿಗೆ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ಗ್ರಾಹಕರ ಖಾತೆಯಿಂದ ಅನಗತ್ಯವಾಗಿ ಕಡಿತಗೊಳಿಸಲಾಗಿದ್ದ ಹಣವನ್ನು ಮರುಪಾವತಿಸುವಂತೆ ಹಾಗೂ ಅವರಿಗೆ ಉಂಟಾದ ಮಾನಸಿಕ ವೇದನೆಗೆ ಸೂಕ್ತ ಪರಿಹಾರ ನೀಡುವಂತೆ ಬ್ಯಾಂಕ್ಗೆ ಆಯೋಗ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:
ರಾಜು ಸ್ಟೀಫನ್ ಡಿಸೋಜ ಅವರು 2022ರಲ್ಲಿ ಸೌತ್ ಇಂಡಿಯನ್ ಬ್ಯಾಂಕ್ನ ಸೀತಾಂಗೋಳಿ ಶಾಖೆಯಲ್ಲಿ ಚಾಲ್ತಿ (Current) ಖಾತೆ ತೆರೆದು, ಕನಿಷ್ಠ ಬಾಕಿ ಮೊತ್ತವನ್ನು ಠೇವಣಿ ಮಾಡಿದ್ದರು. ಆದರೆ, ಬ್ಯಾಂಕ್ ಎಸ್ಎಂಎಸ್ (SMS) ಸೇವಾ ಶುಲ್ಕದ ಹೆಸರಿನಲ್ಲಿ ಅವರ ಖಾತೆಯಿಂದ ಹಣ ಕಡಿತಗೊಳಿಸಿತ್ತು. ಇದರಿಂದಾಗಿ ಖಾತೆಯಲ್ಲಿದ್ದ ಹಣ ಕನಿಷ್ಠ ಬಾಕಿ ಮೊತ್ತಕ್ಕಿಂತ ಕಡಿಮೆಯಾಗಿ, ಬ್ಯಾಂಕ್ ಮತ್ತೆ ಕನಿಷ್ಠ ಬಾಕಿ ಕಾಯ್ದುಕೊಳ್ಳದಿದ್ದಕ್ಕೆ ದಂಡ ವಿಧಿಸಲು ಪ್ರಾರಂಭಿಸಿತ್ತು. ಇದು ಮುಂದುವರಿದಾಗ ಆರ್ಥಿಕ ನಷ್ಟ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ ರಾಜು ಡಿಸೋಜ ಅವರು ಆಯೋಗದ ಮೊರೆ ಹೋಗಿದ್ದರು.




ನ್ಯಾಯಾಲಯದ ತೀರ್ಪು:
ಖಾತೆಯಿಂದ ಹಣ ಕಡಿತಗೊಳಿಸುವ ಮುನ್ನ ಅಥವಾ ತಕ್ಷಣವೇ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡುವುದು ಬ್ಯಾಂಕಿನ ಕರ್ತವ್ಯ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಉಭಯ ಪಕ್ಷಗಳ ವಾದ ಆಲಿಸಿದ ಆಯೋಗವು, ರಾಜು ಸ್ಟೀಫನ್ ಡಿಸೋಜ ಅವರ ಪರವಾಗಿ ತೀರ್ಪು ನೀಡಿ, ಕಡಿತಗೊಳಿಸಿದ ಮೊತ್ತವನ್ನು ಮರುಪಾವತಿಸಲು, ಮಾನಸಿಕ ಅನಾನುಕೂಲತೆಗೆ ಪರಿಹಾರ ಹಾಗೂ ಪ್ರಕರಣದ ವೆಚ್ಚವನ್ನು ಪಾವತಿಸಲು ಬ್ಯಾಂಕ್ಗೆ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ದೂರುದಾರರಾದ ರಾಜು ಸ್ಟೀಫನ್ ಡಿಸೋಜ ಅವರ ಪರವಾಗಿ ಕಾಸರಗೋಡಿನ ಹಿರಿಯ ನ್ಯಾಯವಾದಿ ಥಾಮಸ್ ಡಿಸೋಜ ಎಂ.ಎಸ್. ವಾದ ಮಂಡಿಸಿದ್ದರು.





