ಕ್ರೈಸ್ತ ಸಮುದಾಯದ ಐಕ್ಯತೆಗೆ ದಾವಣಗೆರೆ ಸಾಕ್ಷಿ – ಕರ್ನಾಟಕ ಕ್ರೈಸ್ತ ಸಂಘಟನೆಯಿಂದ ಐಕ್ಯತಾ ಕೂಟ
ಅನ್ಯಾಯದ ವಿರುದ್ಧ ಯುವಕರು ಧ್ವನಿಯೆತ್ತಲು ಸಹೋದರ ಸ್ಟ್ಯಾನಿ ಪಿಂಟೋ ಬೆಂಗಳೂರು ಕರೆ

ಜಿಲ್ಲಾ ನೂತನ ಸಮಿತಿ ರಚನೆ!
ದಾವಣಗೆರೆ ಇಲ್ಲಿನ ನಗರದಲ್ಲಿ ಜುಲೈ 22ರಂದು ಬುಧವಾರ ಕರ್ನಾಟಕ ಕ್ರೈಸ್ತ ಸಂಘಟನೆಯ ವತಿಯಿಂದ ಮತ್ತು ದಾವಣಗೆರೆ ಡಿಸ್ಟ್ರಿಕ್ಟ್ ಕ್ರಿಶ್ಚಿಯನ್ ಪರಿಷತ್ ಸಹಯೋಗದಲ್ಲಿ ಬೃಹತ್ “ಕ್ರೈಸ್ತರ ಐಕ್ಯತಾ ಕೂಟ” ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಕ್ರೈಸ್ತ ಸಮುದಾಯದ ಏಳಿಗೆ, ಸಂವಿಧಾನ ಬದ್ಧ ಹಕ್ಕುಗಳ ರಕ್ಷಣೆ ಮತ್ತು ಯುವಜನರ ಸಂಘಟನೆಯ ಕುರಿತು ಮಹತ್ವದ ಚರ್ಚೆಗಳು ಜರುಗಿದವು.









* ಸತ್ಯದ ಪರವಾಗಿ ಕ್ರೈಸ್ತ ಯುವಕರು ಒಂದಾಗಲಿ — ಸಹೋದರ ಸ್ಟ್ಯಾನಿ ಪಿಂಟೋ:
ಕರ್ನಾಟಕ ಕ್ರೈಸ್ತ ಸಂಘಟನೆಯ ರಾಜ್ಯಾಧ್ಯಕ್ಷರಾದ ಸಹೋದರ ಸ್ಟ್ಯಾನಿ ಪಿಂಟೋ ಬೆಂಗಳೂರು ಅವರು ಎಲ್ಲರನ್ನು ಸ್ವಾಗತಿಸಿ ಮಾತನಾಡುತ್ತಾ, “ಇತ್ತೀಚೆಗೆ ಚರ್ಚ್ಗಳ ಮೇಲೆ ನಡೆಯುತ್ತಿರುವ ದಾಳಿಗಳು ಹಾಗೂ ಸಭಾಪಾಲಕರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೇರುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಪ್ರತಿಯೊಂದು ಜಿಲ್ಲೆಯ ಕ್ರೈಸ್ತ ಯುವಕರು ಸಂಘಟಿತರಾಗಿ ಸತ್ಯದ ಪರವಾಗಿ ನಿಲ್ಲಬೇಕಿದೆ,” ಎಂದು ಕರೆ ನೀಡಿದರು. ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ರಾಜ್ಯದ ಮೂಲೆ ಮೂಲೆಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.








ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯ — ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್:
ಬಡಾವಣೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಉಮೇಶ್ ಅವರು ಮಾತನಾಡಿ, “ದಲಿತರನ್ನು ಸಮಾನವಾಗಿ ಪ್ರೀತಿಸಿ, ಅಪ್ಪಿಕೊಳ್ಳುವಲ್ಲಿ ಕ್ರೈಸ್ತ ಸಮಾಜ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಇಂದು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಪುರಾತನ ಕೆಟ್ಟ ಪದ್ಧತಿಗಳನ್ನು ಮತ್ತೆ ತರಲು ಕೆಲವು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ನಾವೆಲ್ಲರೂ ಒಟ್ಟಾಗಿ ಕಾಪಾಡಬೇಕಿದೆ. ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ,” ಎಂದು ಹೇಳಿದರು.







ಕ್ರೈಸ್ತ ಸಮುದಾಯ ಭವನ ಹಾಗೂ ರುದ್ರಭೂಮಿಗೆ ಶಾಸಕರ ಭರವಸೆ:
ದಕ್ಷಿಣ ವಲಯದ ಶಾಸಕರಾದ ಎಸ್.ಎಂ. ಸಮರ್ಥ್ ಮಲ್ಲಿಕಾರ್ಜುನ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕ್ರೈಸ್ತ ಸಮುದಾಯದ ಮನವಿಗಳನ್ನು ಸ್ವೀಕರಿಸಿದರು. ದಾವಣಗೆರೆಗೆ ಅಗತ್ಯವಿರುವ ಕ್ರೈಸ್ತ ಸಮುದಾಯ ಭವನ ಹಾಗೂ ಸಮಾಧಿ ಭೂಮಿ (ರುದ್ರಭೂಮಿ) ಒದಗಿಸುವ ಬೇಡಿಕೆಯನ್ನು ಶೀಘ್ರದಲ್ಲೇ ಈಡೇರಿಸುವುದಾಗಿ ಭರವಸೆ ನೀಡಿದರು.
ಸರ್ಕಾರಿ ಸೌಲಭ್ಯಗಳ ಮಾಹಿತಿ ಮತ್ತು ಆಶೀರ್ವಚನ:
* ಬಿಷಪ್ ಉತ್ತಮ ಕುಮಾರ್: ಸತ್ಯವೇದದ ದೈವಿಕ ವಾಕ್ಯಗಳ ಸಂದೇಶವನ್ನು ನೀಡಿ ಸಭಿಕರನ್ನು ಆಶೀರ್ವದಿಸಿದರು.
* ಪ್ರಶಾಂತ್ ಜತ್ತನ್ನ (ನಿರ್ದೇಶಕರು, ಕರ್ನಾಟಕ ಕ್ರೈಸ್ತ ನಿಗಮ ಮಂಡಳಿ): ಸರ್ಕಾರದಿಂದ ಕ್ರೈಸ್ತ ಸಮುದಾಯಕ್ಕೆ ಸಿಗುವ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.
* ರೆವರೆಂಡ್ ಪ್ರೇಮ್ ಕುಮಾರ್ (ಅಧ್ಯಕ್ಷರು, ಜಿಲ್ಲಾ ಕ್ರಿಶ್ಚಿಯನ್ ಪರಿಷತ್): ಸಂಘಟನೆಯ ಕಾರ್ಯವೈಖರಿ ಮತ್ತು ಭವಿಷ್ಯದ ದೃಷ್ಟಿಕೋನದ ಕುರಿತು ಹಿತನುಡಿಗಳನ್ನಾಡಿದರು.
* ಸಹೋದರಿ ಎಡ್ವೊಕೇಟ್ ಸಲೋಮಿ ಶ್ರೀನ್ : ಸಮುದಾಯಕ್ಕೆ ಅಗತ್ಯವಿರುವ ಕಾನೂನು ಅರಿವು ಮತ್ತು ಉಚಿತ ಸಲಹೆಗಳನ್ನು ನೀಡಿದರು.







ಪ್ರಾರ್ಥನಾ ವೀರರಿಗೆ ಸನ್ಮಾನ ಹಾಗೂ ನೂತನ ಸಮಿತಿ ಆಯ್ಕೆ:
ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ KCS ಪ್ರಾರ್ಥನಾ ವೀರರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಇದೇ ವೇಳೆ ದಾವಣಗೆರೆ ಜಿಲ್ಲಾ ಕ್ರೈಸ್ತ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು:
* ಜಿಲ್ಲಾ ಅಧ್ಯಕ್ಷರು: ಸಹೋದರ ಶಿವಮೂರ್ತಿ
* ಜಿಲ್ಲಾ ಕಾರ್ಯದರ್ಶಿ: ಸಹೋದರ ಪ್ರಭಾಕರ ತೆಲಗಾವಿ
* ಜಿಲ್ಲಾ ಖಜಾಂಚಿ: ಸಹೋದರ ಸೋಬರ್ಸ್ ಪ್ರಕಾಶ್
ಕಾರ್ಯಕ್ರಮ ನಿರೂಪಣೆ: ಜಗಳೂರಿನ ಪಾಸ್ಟರ್ ಮೋಸಸ್ ಪೀಟರ್ ಹಾಗೂ ಕೋಲಾರದ ಪಾಸ್ಟರ್ ಶಿವಶಂಕರ್ ಅವರು ಇಡೀ ಕಾರ್ಯಕ್ರಮವನ್ನು ಅತ್ಯಂತ ಸುಸೂತ್ರವಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಿಕೊಟ್ಟರು.


ಈ ಭವ್ಯ ಕಾರ್ಯಕ್ರಮದಲ್ಲಿ DAPC ಆರ್ಚ್ ಬಿಷಪ್ ಡಾ. ವಿನೋದ್ ಚಾಕೋ, ರಾಯಚೂರು ಡಿಸ್ಟ್ರಿಕ್ಟ್ ಬಿಷಪ್ ಉತ್ತಮ್ ಕುಮಾರ್, SDPI ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸೊ ಫ್ರ್ಯಾಂಕೊ, AICU ರಾಜಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಕರಾವಳಿ ಸುದ್ದಿ ವಾರ್ತಾ ಪತ್ರಿಕೆ ಸಂಪಾದಕ ರೋಷನ್ ಬೊನಿಫಾಸ್ ಮಾರ್ಟಿಸ್, ಮೈನೊರಿಟಿ ಮೋರ್ಚಾ ರಾಜಾಧ್ಯಕ್ಷರು BJP ಅನಿಲ್ ತೊಮಸ್, DCP ಸೆಕ್ರೆಟರಿ ಜೋನ್ ಬಾನು ದಾವಣಗೆರೆ, KCS ಲೀಗಲ್ ಅಡ್ವೈಜರ್ ರತ್ನಾ ಲೋಕೆಶ್ ಕೋಲಾರ, ರೆವರೆಂಡ್ ಜಾನ್ಸನ್ ರಾಜ್ಯ KCS ಸಂಯೋಜಕ, ಕರ್ನಾಟಕ ದಲಿತ್ ಕ್ರಿಶ್ಚಿಯನ್ ಫೆಡರೆಶನ್ ಕನ್ವಿನರ್ ಸಹೋದರ ಕೆಂಡಿ, ರಾಜಾಧ್ಯಕ್ಷರು ರೆವರೆಂಡ್ ಪಿ.ಎಸ್. ಅಲೆಕ್ಸಾಂಡರ್, KCS ಬೀದರ್ ಜಿಲ್ಲಾಧ್ಯಕ್ಷ ಸಹೋದರ ಮೋಸೆಸ್ ನಿರಂಕರ್, KCS ಪಾಸ್ಟರ್ ವಿಂಗ್ಸ್ ರಾಜ್ಯ ಸಂಯೋಜಕಿ ಡಾ. ಪಿ.ಎಸ್. ಶರಣ್ ತಬೀತಾ, ಡಾ. ರೆವರೆಂಡ್ ಪಿ.ಎಸ್. ಪ್ರಭು, ರೋಬರ್ಟ್ ಕ್ಲೈವ್ ಹಾಗೂ ಸಿಂತಿಯಾ ಸ್ಟೇಫನ್ ಉಪಸ್ಥಿತರಿದ್ದರು.





