July 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾಸರಗೋಡಿನಲ್ಲಿ ಆರ್‌ವಿಆರ್ ನ್ಯೂರೋ-ಆಂಕೊಲಜಿ ಕೇಂದ್ರ ಆರಂಭ – ‘ಆರೋಗ್ಯ ಬೈ RVR’ ದೇಶಾದ್ಯಂತ ವಿಸ್ತರಣೆ ಘೋಷಣೆ

ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಗೆ RVR ಹೆಲ್ತ್‌ಕೇರ್ ಮತ್ತೊಂದು ಮಹತ್ವದ ಹೆಜ್ಜೆ

ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ RVR ಹೆಲ್ತ್‌ಕೇರ್ ತನ್ನ ಆರೋಗ್ಯ ಸೇವೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಮಹತ್ವದ ಹೆಜ್ಜೆ ಇಟ್ಟಿದೆ. ಕೇರಳದ ಕಾಸರಗೋಡಿನಲ್ಲಿ ಅತ್ಯಾಧುನಿಕ ನ್ಯೂರೋ-ಆಂಕೊಲಜಿ ಕೇಂದ್ರವನ್ನು ಆರಂಭಿಸುವುದರ ಜೊತೆಗೆ, ತನ್ನ ಸಮುದಾಯ ಆರೋಗ್ಯ ಕಾರ್ಯಕ್ರಮವಾದ ‘ಆರೋಗ್ಯ ಬೈ ಆರ್‌ವಿಆರ್’ (Arogya by RVR) ಅನ್ನು ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸುವುದಾಗಿ ಸಂಸ್ಥೆ ಘೋಷಿಸಿದೆ.

ಮಂಗಳೂರಿನ ದಿ ಓಶನ್ ಪರ್ಲ್ ಹೋಟೆಲ್ನಲ್ಲಿ ಇಂದು ಜುಲಾಯಿ 24ರಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ವಿಜಯ್ ಎಂ. ಎನ್. ಶೆಟ್ಟಿ ಹಾಗೂ ವೈದ್ಯಕೀಯ ತಜ್ಞರ ತಂಡ ಈ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಸಮಾಜಮುಖಿ ಆರೋಗ್ಯ ಸೇವೆಗೆ ಆದ್ಯತೆ:

2026ರ ಏಪ್ರಿಲ್ 24ರಂದು ಮಂಗಳೂರಿನಲ್ಲಿ ಆರಂಭವಾದ ಆರ್‌ವಿಆರ್ ಹೆಲ್ತ್‌ಕೇರ್, ಅತ್ಯಾಧುನಿಕ ತಂತ್ರಜ್ಞಾನ, ಅನುಭವಿ ತಜ್ಞ ವೈದ್ಯರು ಹಾಗೂ ರೋಗಿಕೇಂದ್ರಿತ ಚಿಕಿತ್ಸಾ ವ್ಯವಸ್ಥೆಯ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುತ್ತಿದೆ. ರೋಗಿಯ ಆರ್ಥಿಕ ಸಾಮರ್ಥ್ಯವನ್ನು ಲೆಕ್ಕಿಸದೆ, ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಕೈಗೆಟುಕುವ ದರದಲ್ಲಿ ದೊರೆಯಬೇಕು ಎಂಬ ದೃಷ್ಟಿಕೋನದೊಂದಿಗೆ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.

ಸಂಸ್ಥೆಯ ವೈದ್ಯಕೀಯ ತಂಡವು 30 ವರ್ಷಗಳಿಗಿಂತ ಹೆಚ್ಚಿನ ಸಂಯೋಜಿತ ಅನುಭವ ಹೊಂದಿದ್ದು, 17 ಸಾವಿರಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಪರಿಣತ ವೈದ್ಯರನ್ನು ಒಳಗೊಂಡಿದೆ.

ಕಾಸರಗೋಡಿನಲ್ಲಿ ನ್ಯೂರೋ-ಆಂಕೊಲಜಿ ಕೇಂದ್ರ:

ವಿಶೇಷ ವೈದ್ಯಕೀಯ ಸೇವೆಗಳನ್ನು ಗಡಿ ಭಾಗದ ಜನರಿಗೂ ತಲುಪಿಸುವ ಉದ್ದೇಶದಿಂದ ಜುಲೈ 27ರಂದು ಕಾಸರಗೋಡಿನಲ್ಲಿ ಆರ್‌ವಿಆರ್ ನ್ಯೂರೋ-ಆಂಕೊಲಜಿ ಕೇಂದ್ರವನ್ನು ಉದ್ಘಾಟಿಸಲಾಗುತ್ತಿದೆ. ಈ ಕೇಂದ್ರದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ಸುಸಜ್ಜಿತ ಚಿಕಿತ್ಸಾ ಸೌಲಭ್ಯಗಳು ಹಾಗೂ ನರವಿಜ್ಞಾನ ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ ವೈದ್ಯರ ತಂಡ ಕಾರ್ಯನಿರ್ವಹಿಸಲಿದ್ದು, ಮೆದುಳು ಹಾಗೂ ನರವ್ಯವಸ್ಥೆಗೆ ಸಂಬಂಧಿಸಿದ ಕ್ಯಾನ್ಸರ್ ಸೇರಿದಂತೆ ಸಂಕೀರ್ಣ ಕಾಯಿಲೆಗಳ ಸಮಗ್ರ ಚಿಕಿತ್ಸೆ ಒಂದೇ ಸೂರಿನಡಿ ಲಭ್ಯವಾಗಲಿದೆ.

‘ಆರೋಗ್ಯ ಬೈ ಆರ್‌ವಿಆರ್’ ದೇಶಾದ್ಯಂತ ವಿಸ್ತರಣೆ:

ಸಮುದಾಯ ಆರೋಗ್ಯ ಸೇವೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಆರಂಭಿಸಲಾದ ‘ಆರೋಗ್ಯ ಬೈ ಆರ್‌ವಿಆರ್’ ಕಾರ್ಯಕ್ರಮದಡಿ ಉಚಿತ ಆರೋಗ್ಯ ತಪಾಸಣೆ, ತಜ್ಞ ವೈದ್ಯರ ಸಮಾಲೋಚನೆ ಹಾಗೂ ಆರೋಗ್ಯ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಯೋಜನೆಯ ಮೊದಲ ಉಚಿತ ಆರೋಗ್ಯ ಶಿಬಿರ ಚಿಕ್ಕಮಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಕಾರ್ಯಕ್ರಮವನ್ನು ವಿಸ್ತರಿಸಲು ಸಂಸ್ಥೆ ಮುಂದಾಗಿದೆ.

“ಆರೋಗ್ಯ ಎಲ್ಲರ ಹಕ್ಕು” ಎಂಬ ದೃಷ್ಟಿಕೋನ :

ಸಂಸ್ಥಾಪಕ ಹಾಗೂ ಅಧ್ಯಕ್ಷ ವಿಜಯ್ ಎಂ. ಎನ್. ಶೆಟ್ಟಿ ಮಾತನಾಡಿ, ಉತ್ತಮ ಆರೋಗ್ಯ ಸೇವೆ ರೋಗಿಯ ಆರ್ಥಿಕ ಸ್ಥಿತಿಯನ್ನು ಅವಲಂಬಿಸಬಾರದು ಎಂಬ ನಂಬಿಕೆಯೊಂದಿಗೆ ಆರ್‌ವಿಆರ್ ಹೆಲ್ತ್‌ಕೇರ್ ಆರಂಭಿಸಲಾಗಿದೆ ಎಂದರು. ಪ್ರತಿಯೊಬ್ಬರಿಗೂ ಗೌರವಯುತ, ಗುಣಮಟ್ಟದ ಹಾಗೂ ಕೈಗೆಟುಕುವ ವೆಚ್ಚದಲ್ಲಿ ವಿಶ್ವದರ್ಜೆಯ ಚಿಕಿತ್ಸೆ ಒದಗಿಸುವ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ಅನುಭವಿ ವೈದ್ಯರ ತಂಡ :

ಸಂಸ್ಥೆಯ ನಿರ್ದೇಶಕರಾದ ಡಾ. (ಪ್ರೊ.) ರಾಘವೇಂದ್ರ ಬಿ. ಎಸ್., ಹಿರಿಯ ಹೃದ್ರೋಗ ತಜ್ಞ ಡಾ. ಮನೀಶ್ ರೈ, ಡಾ. ಅಬು, ಡಾ. ವಿಗೇಶ್ ಸಂಪತ್ ಅಯ್ಯರ್, ಡಾ. ಅಂಜನ್ ಕುಮಾರ್ ಸೇರಿದಂತೆ ವಿವಿಧ ಸೂಪರ್ ಸ್ಪೆಷಾಲಿಟಿ ವಿಭಾಗಗಳ ಪರಿಣತ ವೈದ್ಯರ ತಂಡ ಸಂಸ್ಥೆಯ ವೈದ್ಯಕೀಯ ಸೇವೆಗೆ ಬಲ ತುಂಬಿದೆ.

ಭವಿಷ್ಯದ ವಿಸ್ತರಣೆಗೆ ಸಿದ್ಧತೆ:

ಕಾಸರಗೋಡು ನ್ಯೂರೋ-ಆಂಕೊಲಜಿ ಕೇಂದ್ರದ ಆರಂಭ ಹಾಗೂ ‘ಆರೋಗ್ಯ ಬೈ ಆರ್‌ವಿಆರ್’ ಕಾರ್ಯಕ್ರಮದ ರಾಷ್ಟ್ರವ್ಯಾಪಿ ವಿಸ್ತರಣೆಯೊಂದಿಗೆ ಆರ್‌ವಿಆರ್ ಹೆಲ್ತ್‌ಕೇರ್ ತನ್ನ ಆರೋಗ್ಯ ಸೇವೆಯ ಹೊಸ ಅಧ್ಯಾಯವನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಕೇಂದ್ರಗಳು, ಸಮುದಾಯ ಆರೋಗ್ಯ ಯೋಜನೆಗಳು ಹಾಗೂ ತಂತ್ರಜ್ಞಾನ ಆಧಾರಿತ ವೈದ್ಯಕೀಯ ಸೇವೆಗಳನ್ನು ವಿಸ್ತರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಎಂ. ಎನ್. ಶೆಟ್ಟಿ, ಡಾ. (ಪ್ರೊ.) ರಾಘವೇಂದ್ರ ಬಿ. ಎಸ್., ಡಾ. ಅಬು, ಡಾ. ವಿಗೇಶ್ ಸಂಪತ್ ಅಯ್ಯರ್, ಡಾ. ಅಂಜನ್ ಕುಮಾರ್ ಹಾಗೂ ಅನಂತ್ ಎಸ್. ಎನ್. ಉಪಸ್ಥಿತರಿದ್ದರು.

You may also like

News

ಬೋಂದೆಲ್ ಸಂತ ಲಾರೆನ್ಸ್ ಪುಣ್ಯಕ್ಷೇತ್ರದಲ್ಲಿ ಆಗಸ್ಟ್ 10ರಂದು ವಿಜೃಂಭಣೆಯಿಂದ ನಡೆಯಲಿರುವ ವಾರ್ಷಿಕ ಮಹೋತ್ಸವ

ವೈದ್ಯಕೀಯ ಸಹಾಯ ನಿಧಿಗೆ ಸಹಾಯ ಹಸ್ತ ನೀಡಲು ರೆಕ್ಟರ್ ಫಾದರ್ ಬೇಸಿಲ್ ವಾಸ್  ಕರೆ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪ್ರಸಿದ್ಧ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು
News

Father Muller Commissions State-of-the-Art FUJIFILM Advanced 4K Multi-LED Endoscope System

Reinforcing its commitment to delivering world-class healthcare through advanced technology, Father Muller Medical College Hospital (FMMCH), a unit of Father

You cannot copy content of this page