July 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ – ಶಾಸಕ ಯಶ್‌ಪಾಲ್ ಸುವರ್ಣ ಬಂಧನ ಹಾಗೂ ವಜಾಕ್ಕೆ ರಮಾನಾಥ ರೈ ಆಗ್ರಹ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಗಾಂಧಿ ಕುಟುಂಬದ ವಿರುದ್ಧ ಉಡುಪಿಯ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ನೀಡಿರುವ ಪ್ರಚೋದನಕಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಚಿವ ಬಿ. ರಮಾನಾಥ ರೈ, ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಿ ಶಾಸಕ ಸ್ಥಾನವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಾಬರಿ ಮಸೀದಿಯಂತೆ ರಾಹುಲ್ ಗಾಂಧಿ ಕುಟುಂಬವನ್ನೂ ಧ್ವಂಸಗೊಳಿಸುತ್ತೇವೆ ಎಂಬ ಶಾಸಕರ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಯಶ್‌ಪಾಲ್ ಸುವರ್ಣ ಅವರ ತಲೆಯಲ್ಲಿ ಡ್ರಗ್‌ಗಿಂತಲೂ ಅಪಾಯಕಾರಿ ಅಮಲು ತಲೆಗೇರಿದೆ. ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತನ ತಂಟೆಗೆ ಬಂದರೆ ಜಿಲ್ಲೆಯಲ್ಲಿ ಏನಾಗುತ್ತದೆ ಎಂಬುದನ್ನು ಬಿಜೆಪಿ ನಾಯಕರು ಗ್ರಹಿಸಬೇಕಿದೆ” ಎಂದು ವಾಗ್ದಾಳಿ ನಡೆಸಿದರು.

‘ಪುರಾವೆ ಇಲ್ಲದೆ ತೇಜೋವಧೆ ಖಂಡನೀಯ’:

“ರಾಹುಲ್ ಗಾಂಧಿ ಅವರಿಗೆ ಡ್ರಗ್ ಅಡಿಕ್ಟ್ ಎಂದು ಆರೋಪಿಸುವ ನಾಯಕರಲ್ಲಿ ಅದಕ್ಕೆ ತಕ್ಕ ಪುರಾವೆಗಳಿವೆಯೇ? ರಾಜಕೀಯ ಭಿನ್ನಾಪ್ರಾಯಗಳನ್ನು ಸೈದ್ಧಾಂತಿಕವಾಗಿ ಎದುರಿಸಬೇಕೇ ಹೊರತು ವ್ಯಕ್ತಿತ್ವ ಹರಣ ಮಾಡುವುದು ಹಾಗೂ ವಂಶನಾಶದ ಬೆದರಿಕೆ ಹಾಕುವುದು ಸರಿಯಲ್ಲ. ರಕ್ಷಣೆಗಾಗಿ ಮನೆಯಲ್ಲಿ ಕತ್ತಿ, ತಲ್ವಾರ್ ಇಟ್ಟುಕೊಳ್ಳಿ ಎಂದು ಪ್ರಚೋದನೆ ನೀಡುವುದು ಸಂವಿಧಾನ ಮತ್ತು ಕಾನೂನಿನ ಮೇಲಿನ ಅಪನಂಬಿಕೆಯನ್ನು ತೋರಿಸುತ್ತದೆ” ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಿಷ್ಠಾವಂತರಿಗೆ ಆದ್ಯತೆ:

ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಕುರಿತು ಪ್ರತಿಕ್ರಿಯಿಸಿದ ರಮಾನಾಥ ರೈ, “ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದೀರ್ಘಕಾಲದಿಂದ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು. ಇತ್ತೀಚೆಗಷ್ಟೇ ಪಕ್ಷಕ್ಕೆ ಬಂದವರ ಬದಲು ನಿಷ್ಠೆಯಿಂದ ಶ್ರಮಿಸಿರುವ ಮಹಿಳೆ ಅಥವಾ ಪುರುಷ ಯಾರೇ ಆದರೂ ಪಕ್ಷ ಸೂಕ್ತ ಜವಾಬ್ದಾರಿ ನೀಡಲಿ ಎಂಬುದು ನನ್ನ ಬಯಕೆ” ಎಂದು ಸ್ಪಷ್ಟಪಡಿಸಿದರು.

You may also like

News

ಬೊಂದೆಲ್ ಸಂತ ಲಾರೆನ್ಸ್ ಶಾಲೆಯಲ್ಲಿ ನವೀಕೃತ ಸಭಾಂಗಣ ಲೋಕಾರ್ಪಣೆ – ‘ರೆಸೊನನ್ಸ್–2026’ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

ಇಲ್ಲಿನ ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ನವೀಕೃತ ಸಭಾಂಗಣವನ್ನು ಕರ್ನಾಟಕದ ನಿವೃತ್ತ ಶಿಕ್ಷಣ ನಿರ್ದೇಶಕ  ಡಾ. ಸಿಪ್ರಿಯನ್ ಮೊಂತೇರೊ ಅವರು ಭವ್ಯವಾಗಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ
News

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಜಿಟಲ್ ಕ್ರಾಂತಿ – ಯು.ಟಿ. ಖಾದರ್

ಪೇಪರ್‌ಲೆಸ್ ಆಸ್ಪತ್ರೆ, ಟೆಲಿ-ಐಸಿಯು, ಕುದಿಸಿದ ನೀರು ಕಡ್ಡಾಯ ರಾಹುಲ್ ಗಾಂಧಿ ವಿರುದ್ಧದ ಹೇಳಿಕೆಗೆ ತೀವ್ರ ವಾಗ್ದಾಳಿ ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ತಂತ್ರಜ್ಞಾನ ಆಧಾರಿತ, ವೇಗದ ಹಾಗೂ

You cannot copy content of this page