August 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಾರ್ವಜನಿಕರ ಧ್ವನಿಗೆ ಸಿಕ್ಕ ಜಯ – ಕರಾವಳಿ ಸುದ್ದಿ ವರದಿ ಬಳಿಕ ಜೋಗಿಬೆಟ್ಟು ರಸ್ತೆಯಲ್ಲಿ ಕಾಮಗಾರಿ ಆರಂಭ

ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಮಳೆ ಬಂದಾಗಲೆಲ್ಲ ಉಂಟಾಗುತ್ತಿದ್ದ ಕೃತಕ ನೆರೆ ಸಮಸ್ಯೆಗೆ ಕೊನೆಗೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿ ಎಚ್ಚೆತ್ತುಕೊಂಡಿದೆ. ಕರಾವಳಿ ಸುದ್ದಿ ವೆಬ್‌ಸೈಟ್‌ನಲ್ಲಿ ಆಗಸ್ಟ್ 3ರಂದು “ಜೋಗಿಬೆಟ್ಟು ರಸ್ತೆಯಲ್ಲಿ ಕೃತಕ ನೆರೆ – ಜನರ ಆಕ್ರೋಶ” ಎಂಬ ಶೀರ್ಷಿಕೆಯಡಿ ಸಮಸ್ಯೆಯನ್ನು ಪ್ರಮುಖವಾಗಿ ಪ್ರಕಟಿಸಿದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಳಿಕ ಮಳೆ ನೀರು ಸರಾಗವಾಗಿ ಹರಿದು ಹೋಗದ ಕಾರಣ ಜೋಗಿಬೆಟ್ಟು ರಸ್ತೆಯಲ್ಲಿ ನೀರು ನಿಂತು ಕೃತಕ ನೆರೆ ಉಂಟಾಗುತ್ತಿತ್ತು. ಪರಿಣಾಮ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ಪ್ರತೀ ಮಳೆಯಲ್ಲೂ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಸಮಸ್ಯೆಯನ್ನು ಕರಾವಳಿ ಸುದ್ದಿ ವೆಬ್‌ಸೈಟ್‌ನಲ್ಲಿ ವಸ್ತುನಿಷ್ಠವಾಗಿ ಬೆಳಕಿಗೆ ತಂದ ಬೆನ್ನಲ್ಲೇ ಗುತ್ತಿಗೆ ಕಂಪೆನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಚರಂಡಿಯಲ್ಲಿ ಜಮೆಯಾಗಿದ್ದ ಹೂಳು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಜೊತೆಗೆ ಮಳೆ ನೀರು ಅಡೆತಡೆಯಿಲ್ಲದೆ ಹರಿದು ಹೋಗುವಂತೆ ಹೆಚ್ಚುವರಿ ಮೋರಿ ಅಳವಡಿಸುವ ಕಾಮಗಾರಿಯನ್ನೂ ಕೈಗೆತ್ತಿಕೊಂಡಿದ್ದಾರೆ.

ಕಾಮಗಾರಿ ಆರಂಭಗೊಂಡಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದು, ಹಲವು ದಿನಗಳಿಂದ ಸಾರ್ವಜನಿಕರನ್ನು ಕಾಡುತ್ತಿದ್ದ ಸಮಸ್ಯೆಗೆ ತಾತ್ಕಾಲಿಕ ನೆಮ್ಮದಿ ದೊರೆತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮುಂಗಾರು ಮಳೆ ಇನ್ನೂ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಕ್ರಮಕ್ಕೆ ಸೀಮಿತವಾಗದೆ, ಭವಿಷ್ಯದಲ್ಲಿಯೂ ನೀರು ನಿಲ್ಲದಂತೆ ಶಾಶ್ವತ ಹಾಗೂ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಸಮಸ್ಯೆಗಳನ್ನು ಜವಾಬ್ದಾರಿಯಿಂದ ಬೆಳಕಿಗೆ ತಂದು ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆದು ಪರಿಹಾರಕ್ಕೆ ದಾರಿ ಮಾಡಿಕೊಡುವಲ್ಲಿ ಮಾಧ್ಯಮಗಳ ಪಾತ್ರ ಮತ್ತೊಮ್ಮೆ ಸಾಬೀತಾಗಿದ್ದು, ಜೋಗಿಬೆಟ್ಟು ರಸ್ತೆ ಪ್ರಕರಣ ಅದಕ್ಕೆ ಉತ್ತಮ ಉದಾಹರಣೆಯಾಗಿದೆ.

You may also like

News

ಯುನಿಕೋಡ್ ಪರಿವರ್ತನೆ – ಬಂಟ್ವಾಳ ಭೂಮಿ ಶಾಖೆಯ ಸೇವೆ ತಾತ್ಕಾಲಿಕ ಸ್ಥಗಿತ

ಭೂಮಿ ತಂತ್ರಾಂಶದಲ್ಲಿ ಯುನಿಕೋಡ್ ಪರಿವರ್ತನೆ (Unicode Conversion) ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಭೂಮಿ ಶಾಖೆಯ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ
News

ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್‌, ಸಂಘಗಳು, ಆಡ್-ಆನ್ ಕೋರ್ಸ್‌ಗಳಿಗೆ ಚಾಲನೆ

ಮಂಗಳೂರು ನಗರದ ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್‌, ವಿವಿಧ ವಿದ್ಯಾರ್ಥಿ ಸಂಘಗಳು ಹಾಗೂ ಆಡ್-ಆನ್ ಕೋರ್ಸ್‌ಗಳ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ನಗರ ಸಂಚಾರ ವಿಭಾಗದ

You cannot copy content of this page