ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ‘ನರ್ಚರ್ 2026’ – ಮಕ್ಕಳ ರಾಷ್ಟ್ರೀಯ ವೈದ್ಯಕೀಯ ವಿಚಾರ ಸಂಕಿರಣ
ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ವತಿಯಿಂದ ನರ್ಚರ್ 2026 – ಮಕ್ಕಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು ಆಗಸ್ಟ್ 8ರಂದು ಶನಿವಾರ ಫಾದರ್ ಮುಲ್ಲರ್ ಸೆಮಿನಾರ್ ಹಾಲ್ನಲ್ಲಿ ಆಯೋಜಿಸಲಾಯಿತು.




ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಗಳಾದ ವಂದನೀಯ ಡೊನಾಲ್ಡ್ ನಿಲೇಶ್ ಕ್ರಾಸ್ತಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಇ.ಎಸ್.ಜೆ. ಪ್ರಭು ಕಿರಣ್ – ಪ್ರಾಂಶುಪಾಲರು; ಡಾ. ವಿಲ್ಮಾ ಮೀರಾ ಡಿಸೋಜ – ಉಪಪ್ರಾಂಶುಪಾಲರು; ಡಾ. ಗಿರೀಶ್ ನವಾಡ – ವೈದ್ಯಕೀಯ ಅಧೀಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಪ್ರೀತಮ್ ಫಿಲಿಪ್ ತೌರೋ ಮತ್ತು ಡಾ. ಸಾಗರ್ ಎಸ್. ಜಂಬಗಿ ಉಪಸ್ಥಿತರಿದ್ದರು. ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರು ಸಭಿಕರನ್ನು ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳನ್ನು ವಂದನೀಯ ಡೊನಾಲ್ಡ್ ನಿಲೇಶ್ ಕ್ರಾಸ್ತಾ ಸ್ವಾಗತಿಸಿ ಸನ್ಮಾನಿಸಿದರು. ಕಾರ್ಯಕ್ರಮವು ಸಾಂಕೇತಿಕವಾಗಿ ದೀಪ ಬೆಳಗಿಸುವ ಮೂಲಕ ಆರಂಭವಾಯಿತು. ಉದ್ಘಾಟನಾ ಭಾಷಣದಲ್ಲಿ ವಂದನೀಯ ಡೊನಾಲ್ಡ್ ನಿಲೇಶ್ ಕ್ರಾಸ್ಟಾ ಅವರು ಸ್ಪಷ್ಟ ಉದ್ದೇಶಗಳನ್ನು ಹೊಂದಿರುವ ಕೇಂದ್ರೀಕೃತ, ಸಣ್ಣ ಗುಂಪಿನ ಕಾರ್ಯಾಗಾರಗಳ ಮಹತ್ವವನ್ನು ವಿವರಿಸಿದರು. ಜೊತೆಗೆ, ಮಕ್ಕಳ ಆರೋಗ್ಯ ಸಂರಕ್ಷಣೆಯಲ್ಲಿ “ನರ್ಚರ್” ಎಂಬ ಪದದ ಮಹತ್ವವನ್ನು ಹೇಳಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ರೆಶೆಲ್ ನೊರೊನ್ಹಾ, ಸಂಘಟನಾ ಕಾರ್ಯದರ್ಶಿ ಹಾಗೂ ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥರು, ನೆರವೇರಿಸಿದರು.







ಮೊದಲ ಶೈಕ್ಷಣಿಕ ಅಧಿವೇಶನವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಕಂಕನಾಡಿಯ ಸಲಹಾ ಮಕ್ಕಳ ತಜ್ಞರಾದ ಡಾ. ಪ್ರೀತಮ್ ಫಿಲಿಪ್ ತೌರೋ, ಎಂ.ಬಿ.ಬಿ.ಎಸ್, ಎಂ.ಡಿ. (ಪೀಡಿಯಾಟ್ರಿಕ್ಸ್), ಡಿ.ಎನ್.ಬಿ., ಅವರು ನಡೆಸಿಕೊಟ್ಟರು. ಅವರು “ನವಜಾತ ಶಿಶುಗಳಲ್ಲಿನ ಅಪಾಯದ ಎಚ್ಚರಿಕೆ ಸೂಚನೆಗಳು” (ರೆಡ್ ಫ್ಲ್ಯಾಗ್ ಸೈನ್ಸ್ ಇನ್ ನಿಯೋನೇಟ್ಸ್) ಎಂಬ ವಿಷಯದ ಕುರಿತು ಮಾತನಾಡಿ, ನವಜಾತ ಶಿಶುಗಳಲ್ಲಿ ಕಂಡುಬರುವ ಹಾಗೂ ಆರಂಭಿಕ ಹಸ್ತಕ್ಷೇಪದ ಅಗತ್ಯವಿರುವ ಪ್ರಮುಖ ಲಕ್ಷಣಗಳನ್ನು ಗುರುತಿಸಿ, ಸೂಕ್ತವಾಗಿ ಮೇಲ್ವಿಚಾರಣೆ ಮಾಡುವುದರ ಮಹತ್ವವನ್ನು ಹೇಳಿದರು.





ಎರಡನೇ ಶೈಕ್ಷಣಿಕ ಅಧಿವೇಶನವನ್ನು ಗುಲ್ಬರ್ಗಾದ ಎಚ್.ಕೆ.ಇ.ಎಸ್. ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥರು ಹಾಗೂ ಡಿ. ಎಮ್.ಎಸ್. ಆಗಿರುವ ಡಾ. ಸಾಗರ್ ಎಸ್. ಜಂಬಗಿ, ಬಿ.ಎಚ್.ಎಂ.ಎಸ್., ಎಂ.ಡಿ. (ಹೋಮ್ ಪೀಡ್) ಅವರು ನಡೆಸಿಕೊಟ್ಟರು. ಅವರು “ಹೋಮಿಯೋಪಥಿಯ ಮೂಲಕ ಮಕ್ಕಳ ಚಿಕಿತ್ಸೆಯಲ್ಲಿ ಕ್ಲಿನಿಕಲ್ ಟಿಪ್ಸ್” (ಕ್ಲಿನಿಕಲ್ ಟಿಪ್ಸ್ ಇನ್ ಟ್ರೀಟಿಂಗ್ ಚಿಲ್ಡ್ರನ್ ವಿತ್ ಹೋಮಿಯೋಪತಿ) ಎಂಬ ವಿಷಯವನ್ನು ಪ್ರಸ್ತುತಪಡಿಸಿ, ಮಕ್ಕಳ ಚಿಕಿತ್ಸೆಯಲ್ಲಿ ಸೂಕ್ಷ್ಮವಾದ ಮತ್ತು ಗಮನಪೂರ್ವಕವಾದ ಅವಲೋಕನದ ಮಹತ್ವವನ್ನು ಹೇಳಿದರು. ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದ ವಿವಿಧ ಮೆಟೀರಿಯಾ ಮೆಡಿಕಾಗಳ ಬಗ್ಗೆಯೂ ಅವರು ಚರ್ಚಿಸಿದರು. ಎರಡೂ ಶೈಕ್ಷಣಿಕ ಅಧಿವೇಶನಗಳು ಪ್ರತಿನಿಧಿಗಳಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಮೆಚ್ಚುಗೆಯನ್ನು ಪಡೆದುಕೊಂಡವು.

ಮಧ್ಯಾಹ್ನದ ಅಧಿವೇಶನದಲ್ಲಿ ಮಕ್ಕಳ ವೈದ್ಯಕೀಯ ಪ್ರಾಯೋಗಿಕ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಕ್ಕಳ ಪುನಶ್ಚೇತನ (ಪೀಡಿಯಾಟ್ರಿಕ್ ರಿಸಸಿಟೇಷನ್), ಮಕ್ಕಳ ಉಸಿರಾಟದ ಮಾರ್ಗ ಅಳವಡಿಸುವಿಕೆ (ಪೀಡಿಯಾಟ್ರಿಕ್ ಏರ್ವೇ ಇನ್ಸರ್ಷನ್), ಮಕ್ಕಳ ನಾಸೋಗ್ಯಾಸ್ಟ್ರಿಕ್ ಟ್ಯೂಬ್ ಅಳವಡಿಕೆ (ಪೀಡಿಯಾಟ್ರಿಕ್ ನ್ಯಾಸೋ ಗ್ಯಾಸ್ಟ್ರಿಕ್ ಟ್ಯೂಬ್ ಇನ್ಸರ್ಷನ್.), ಮಕ್ಕಳ ಐ ವಿ ಕ್ಯಾನ್ಯುಲೇಷನ್ ಮತ್ತು ದ್ರವದ ಪ್ರಮಾಣದ ಲೆಕ್ಕಾಚಾರ (ಪೀಡಿಯಾಟ್ರಿಕ್ ಐ.ವಿ. ಕ್ಯಾನುಲೇಷನ್ ಅಂಡ್ ಫ್ಲೂಯಿಡ್ ಕ್ಯಾಲ್ಕುಲೇಷನ್) ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಈ ಕಾರ್ಯಾಗಾರವನ್ನು ಫಾದರ್ ಮುಲ್ಲರ್ ಮಕ್ಕಳ ನರ್ಸಿಂಗ್ ವಿಭಾಗದ ಪ್ರೀಮಾ ರೇಷ್ಮಾ ಪಿಂಟೋ, ಪ್ರೊ. ವಿಲ್ಮಾ ಶಾಲಿನಿ ನೊರೊನ್ಹಾ, ಅನಿತಾ ನ್ಯಾನ್ಸಿ ಡಿಸೋಜ ಹಾಗೂ ಮನೋಜ್ ಪಿ.ಎಸ್. ಅವರು ನಡೆಸಿಕೊಟ್ಟರು. ಪ್ರತಿನಿಧಿಗಳನ್ನು ತಂಡಗಳಾಗಿ ವಿಂಗಡಿಸಿ, ವಿವಿಧ ಕಾರ್ಯಸ್ಥಳಗಳಲ್ಲಿ (ವರ್ಕ್ಸ್ಟೇಷನ್ಸ್) ಕ್ರಮವಾಗಿ ತರಬೇತಿ ಪಡೆಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಂದು ಕಾರ್ಯಸ್ಥಳದಲ್ಲಿ 30 ನಿಮಿಷಗಳ ಕಾಲ ಪ್ರಾಯೋಗಿಕ ತರಬೇತಿ ನೀಡಲಾಯಿತು. ಈ ಕಾರ್ಯಾಗಾರವು ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರಾಯೋಗಿಕ ಕೌಶಲ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುವುದರ ಜೊತೆಗೆ, ಮಕ್ಕಳ ಚಿಕಿತ್ಸೆಯಲ್ಲಿ ಅಗತ್ಯವಿರುವ ಪ್ರಮುಖ ವೈದ್ಯಕೀಯ ವಿಧಾನಗಳ ಕುರಿತು ಉತ್ತಮ ಅರಿವನ್ನು ಮೂಡಿಸಿತು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸಂಶೋಧನಾ ಪ್ರಬಂಧ ಹಾಗೂ ಪೋಸ್ಟರ್ ಪ್ರಸ್ತುತಿಗಳನ್ನೂ ಆಯೋಜಿಸಲಾಗಿತ್ತು. ಪ್ರಬಂಧ ಪ್ರಸ್ತುತಿಗಳನ್ನು ಮಕ್ಕಳ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ. ಜ್ಯೋಶ್ನಾ ಶಿವಪ್ರಸಾದ್ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೇಯಾಂಕ್ ಎಸ್. ಕೋಟಿಯನ್ ಅವರು ನಿರ್ವಹಿಸಿದರು. ಪೋಸ್ಟರ್ ಪ್ರಸ್ತುತಿಗಳನ್ನು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಮೀನು ಮರಿಯಾ ಮ್ಯಾಥ್ಯೂ ಅವರು ನಿರ್ವಹಿಸಿದರು. ಉತ್ತರ ಕರ್ನಾಟಕ ಮತ್ತು ಕನ್ಯಾಕುಮಾರಿಯ ವಿವಿಧ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳು ನರ್ಚರ್ 2026ರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಎಲ್ಲಾ ಮಕ್ಕಳ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಮೃದ್ಧವಾದ ಶೈಕ್ಷಣಿಕ ಹಾಗೂ ಕೌಶಲ್ಯಾಧಾರಿತ ಅನುಭವವನ್ನು ಒದಗಿಸಿತು.



