27 ವರ್ಷಗಳ ಸೇವೆಯ ಬಳಿಕ ಜೀವನ್ ಸಂತೋಷ್ ಮಾರ್ಟಿಸ್ ಅವರು KSRTC ಟ್ರಾಫಿಕ್ ಕಂಟ್ರೋಲರ್ ಹುದ್ದೆಗೆ ಬಡ್ತಿ
KSRTC ಪುತ್ತೂರು ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಮಾರ್ಟಿಸ್ ಕುಟುಂಬದ ಜೀವನ್ ಸಂತೋಷ್ ಮಾರ್ಟಿಸ್ ಅವರು ಟ್ರಾಫಿಕ್ ಕಂಟ್ರೋಲರ್ (ಸಂಚಾರ ನಿಯಂತ್ರಕ) ಹುದ್ದೆಗೆ ಪದೋನ್ನತಿ ಪಡೆದಿದ್ದಾರೆ.

1999ರ ಜನವರಿಯಲ್ಲಿ KSRTC ಯಲ್ಲಿ ನಿರ್ವಾಹಕರಾಗಿ ಸೇವೆಗೆ ಸೇರ್ಪಡೆಗೊಂಡ ಜೀವನ್ ಸಂತೋಷ್ ಮಾರ್ಟಿಸ್ ಅವರು ಸುಮಾರು 15 ವರ್ಷಗಳ ಕಾಲ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಕರ್ತವ್ಯದಲ್ಲಿದ್ದ ವೇಳೆ ಸಂಭವಿಸಿದ ಅಪಘಾತದ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣಗಳಿಂದ ಸುಮಾರು 12 ವರ್ಷಗಳ ಕಾಲ ಪರ್ಯಾಯ ಹುದ್ದೆಯಲ್ಲಿ ನಿಯೋಜನೆಗೊಂಡು ಪುತ್ತೂರು ಘಟಕದ ಉಗ್ರಾಣ ಶಾಖೆಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು.

ಸೇವಾ ಜೇಷ್ಠತೆಯ ಆಧಾರದ ಮೇಲೆ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಅವರನ್ನು ಟ್ರಾಫಿಕ್ ಕಂಟ್ರೋಲರ್ ಹುದ್ದೆಗೆ ಪದೋನ್ನತಿಗೊಳಿಸಿದ್ದಾರೆ. ಅವರ ಸತ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಕರ್ತವ್ಯ ಬದ್ಧತೆಯನ್ನು ಪರಿಗಣಿಸಿ ಪುತ್ತೂರು ವಿಭಾಗದ ತನಿಖಾ ದಳ (DLS)ದಲ್ಲಿ ತನಿಖಾಧಿಕಾರಿಯಾಗಿಯೂ ನಿಯೋಜಿಸಲಾಗಿದೆ.

ಸಾಮಾಜಿಕ ಹಾಗೂ ನೌಕರರ ಸಂಘಟನಾ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಜೀವನ್ ಸಂತೋಷ್ ಮಾರ್ಟಿಸ್ ಅವರು KSRTC ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಪುತ್ತೂರು ವಿಭಾಗದ ನೌಕರರ ಕೂಟ ಸಂಘಟನೆಯ ಅಧ್ಯಕ್ಷರು ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಸರಳತೆ, ಪ್ರಾಮಾಣಿಕತೆ ಮತ್ತು ಸಹೋದ್ಯೋಗಿಗಳೊಂದಿಗೆ ಹೊಂದಿರುವ ಆತ್ಮೀಯ ಬಾಂಧವ್ಯದ ಮೂಲಕ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಪದೋನ್ನತಿಗೆ ಪತ್ನಿ ರೆನಿಟಾ ಸುಷ್ಮಾ ಮಾರ್ಟಿಸ್, ಪುತ್ರರಾದ ಜೆನಿಷ್ ಶೃಜನ್ ಮಾರ್ಟಿಸ್ ಹಾಗೂ ಜೀತನ್ ಶ್ರೇಯಸ್ ಮಾರ್ಟಿಸ್ ಸೇರಿದಂತೆ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಅಪಾರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಜೀವನ್ ಸಂತೋಷ್ ಮಾರ್ಟಿಸ್ ಅವರ ಮುಂದಿನ ವೃತ್ತಿ ಜೀವನ ಮತ್ತಷ್ಟು ಯಶಸ್ವಿಯಾಗಲಿ ಎಂದು ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.



