September 8, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಂಗೀತದಿಂದ ದೈವಿಕ ಆನಂದದ ರಸದೌತಣ – ಮಂಗಳೂರು ರಾಮಕೃಷ್ಣ ಮಠದಲ್ಲಿ ‘ರಾಗ ಸುಧಾ’ ಸಂಗೀತ ಸಂಭ್ರಮ

ಮಂಗಳೂರು: “ಸಂಗೀತ ಎನ್ನುವುದು ಕೇವಲ ಮನರಂಜನೆಯಲ್ಲ, ಅದು ಆಧ್ಯಾತ್ಮಿಕ ಸಾಧನೆ. ಸೃಷ್ಟಿಯ ಆದಿಯಿಂದಲೂ ನಮ್ಮೊಂದಿಗಿರುವ ಸಂಗೀತದ ಮೂಲಕ ದೈಹಿಕ ಹಾಗೂ ಮಾನಸಿಕ ಶಾಂತಿಯ ಜೊತೆಗೆ ದೈವಿಕ ಆನಂದವನ್ನು ಹೊಂದಲು ಸಾಧ್ಯ” ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಿತಕಾಮನಂದಜಿ ಅವರು ಅಭಿಪ್ರಾಯಪಟ್ಟರು.

ಸೆಪ್ಟೆಂಬರ್ 6ರಂದು ಭಾನುವಾರ ಮಂಗಳೂರಿನ ರಾಮಕೃಷ್ಣ ಮಠದ ಪ್ರಶಾಂತ ವಾತಾವರಣದಲ್ಲಿ ‘ಕಲಾಸಾಧನ’ ಸಂಸ್ಥೆ ಹಾಗೂ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ಆಯೋಜಿಸಿದ್ದ ‘ರಾಗ ಸುಧಾ’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಸಂಗೀತದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದು, ಸಂಗೀತದಲ್ಲಿ ಪ್ರವೀಣರಾಗಿದ್ದರು ಎಂಬುದನ್ನು ಸ್ಮರಿಸಿದ ಸ್ವಾಮೀಜಿ ಅವರು, ರಾಮಕೃಷ್ಣ ಮಠದ ಪವಿತ್ರ ಪರಿಸರದಲ್ಲಿ ಇಂತಹ ಅರ್ಥಪೂರ್ಣ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿರುವ ‘ಕಲಾಸಾಧನ’ ತಂಡವನ್ನು ಶ್ಲಾಘಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಅದಾನಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಉಪ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಖ್ಯಾತ ಹೃದ್ರೋಗ ತಜ್ಞ ಡಾ. ಮೋಹನ್ ಪೈ, MRPLನ ನಿವೃತ್ತ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪೈ, ಶಕ್ತಿ ಕಾಲೇಜಿನ ಆಡಳಿತಾಧಿಕಾರಿ ರಮೇಶ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಹಾಗೂ ಮಂಗಳೂರು ರೋಟರಿ ಸೆಂಟ್ರಲ್‌ನ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಸಂಗೀತ ರಸಸಂಜೆಯಲ್ಲಿ ಪುಣೆಯ ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್ ಅವರ ಗಾಯನ ಸಭಿಕರನ್ನು ಮಂತ್ರಮುಗ್ಧಗೊಳಿಸಿತು. ಅವರಿಗೆ ಬೆಂಗಳೂರಿನ ಅಕ್ಷಯ್ ಜೋಷಿ ತಬಲಾದಲ್ಲಿ, ಯಲ್ಲಾಪುರದ ಸತೀಶ್ ಭಟ್ ಹೆಗ್ಗಾರ್ ಹಾರ್ಮೋನಿಯಂನಲ್ಲಿ ಹಾಗೂ ಮಂಗಳೂರಿನ ಕಾರ್ತಿಕ್ ಮತ್ತು ಪ್ರದಯ್ ತಾನ್ಪುರದಲ್ಲಿ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಕಲಾವಿದರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ‘ಕಲಾಸಾಧನ’ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಅವರು ಆತ್ಮೀಯ ಸ್ವಾಗತದ ಮೂಲಕ ಅತಿಥಿಗಳು ಹಾಗೂ ಸಂಗೀತಾಸಕ್ತರನ್ನು ಬರಮಾಡಿಕೊಂಡರು. ಸ್ಮಿತಾ ಅವರ ಸುಂದರ ಹಾಗೂ ಅರ್ಥಪೂರ್ಣ ಮಾತುಗಳ ಮೂಲಕ ಕಲಾವಿದರ ಪರಿಚಯವನ್ನು ಮಾಡಿಕೊಟ್ಟು, ಕಾರ್ಯಕ್ರಮದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದರು. ಶ್ರೀನಿವಾಸ್ ನಾಯಕ್ ಇಂದಾಜೆ ಅವರ ಸೊಗಸಾದ, ಸ್ಪಷ್ಟ ಹಾಗೂ ಮನಮುಟ್ಟುವ ನಿರೂಪಣೆ ಇಡೀ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದು, ಅವರ ಮಾತಿನ ಲವಲವಿಕೆ ಮತ್ತು ನಿರೂಪಣಾ ಶೈಲಿ ಸಭಿಕರನ್ನು ಕ್ಷಣಕ್ಷಣವೂ ಸೆಳೆಯುವಂತಿತ್ತು. ಪಾಂಡುರಂಗ ಆಚಾರ್ಯ ಅವರ ವಂದನಾರ್ಪಣೆಯೊಂದಿಗೆ ಸಂಗೀತಮಯ ಸಂಜೆ ಅರ್ಥಪೂರ್ಣವಾಗಿ ಮುಕ್ತಾಯಗೊಂಡಿತು.

You may also like

News

ಜೆಪ್ಪುವಿನ ಸಂತ ಆಂತೋನಿ ಆಶ್ರಮದಲ್ಲಿ ಮೊಂತಿ ಹಬ್ಬ ಸಂಭ್ರಮ – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ವಿಶೇಷ ಬಲಿಪೂಜೆ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಪವಿತ್ರ ಕನ್ಯಾಮರಿಯಮ್ಮನ ಜನ್ಮದಿನದ ಅಂಗವಾಗಿ ಆಚರಿಸಲಾಗುವ ‘ಮೊಂತಿ ಹಬ್ಬ’ವನ್ನು ಇಂದು ಸೆಪ್ಟೆಂಬರ್ 8ರಂದು ಮಂಗಳವಾರ ಧಾರ್ಮಿಕ ಭಕ್ತಿ
News

ಉದ್ಯಮ ಕ್ಷೇತ್ರದ ಸಾಧನೆಗೆ ಪ್ರತಿಷ್ಠಿತ ಗೌರವ – ಪಾದೆ ಅಜಿತ್ ರೈ ಅವರಿಗೆ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ’ ಪ್ರಶಸ್ತಿ

ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನದ 30ನೇ ವಾರ್ಷಿಕ ಮಹಾಸಭೆ ಪ್ರತಿಷ್ಠಾನದ ಅಧ್ಯಕ್ಷ ಕುಶಲ್ ಎಸ್. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 12ರಂದು ಮಧ್ಯಾಹ್ನ 12 ಗಂಟೆಗೆ ನಗರದ

You cannot copy content of this page