ಕಟಪಾಡಿಯಲ್ಲಿ ‘ಆಶಾವಾದಿ’ ಸಾಹಿತ್ಯ ಸಂಭ್ರಮ – ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಹಿರಿಯ ಸಾಹಿತಿಗಳಿಗೆ ಸನ್ಮಾನ
ಆಶಾವಾದಿ ಪ್ರಕಾಶನದ ವತಿಯಿಂದ ಕಟಪಾಡಿಯ ಕ್ಯಾಥರಿನ್ ರೊಡ್ರಿಗಸ್ ಅವರ ಮನೆಯಂಗಳದಲ್ಲಿ ಪುಸ್ತಕ ಬಿಡುಗಡೆ, ಹಿರಿಯ ಸಾಹಿತಿಗಳ ಸನ್ಮಾನ, ಕೊಂಕಣಿ ಕವಿಗೋಷ್ಠಿ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯಿತು.







ಸಿಂತಿಯಾ, ಫ್ರೀಡಾ ಹಾಗೂ ತಂಡದವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸ್ವೀನಿ ರೊಡ್ರಿಗಸ್ ಸ್ವಾಗತಿಸಿದರು. ಕೊಂಕಣಿ ಪ್ರಶಸ್ತಿ ವಿಜೇತ ಕವಿ, ಲೇಖಕ ಹಾಗೂ ವಿಮರ್ಶಕ ಆಂಡ್ರ್ಯೂ ಎಲ್. ಡಿಕೂನ್ಹಾ, ಬಹುಭಾಷಾ ಲೇಖಕ ಮುದ್ದು ಮೂಡುಬೆಳ್ಳೆ, ಆಗ್ನೆಲ್ ರೊಡ್ರಿಗಸ್ ದುಬೈ, ಕ್ಯಾಥರಿನ್ ರೊಡ್ರಿಗಸ್ ಹಾಗೂ ಆಶಾವಾದಿ ಪ್ರಕಾಶಕ ವಲ್ಲಿ ಕ್ವಾಡ್ರಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಸ್ತಕ ಬಿಡುಗಡೆ ನೆರವೇರಿಸಿ ಮಾತನಾಡಿದ ಮುದ್ದು ಮೂಡುಬೆಳ್ಳೆ ಅವರು, ತಮ್ಮ ಮಾತೃಭಾಷೆ ತುಳುವಾಗಿದ್ದರೂ ಕೊಂಕಣಿಯಲ್ಲಿ ಸಂದೇಶ ನೀಡಿ, ತುಳು ಕವಿತೆಯನ್ನೂ ವಾಚಿಸಿದರು.










ಮುಖ್ಯ ಅತಿಥಿ ಆಂಡ್ರ್ಯೂ ಎಲ್. ಡಿಕೂನ್ಹಾ ಅವರು ‘ಆಶಾವಾದಿ KBS – Konkani Beyond Script’ ಕುರಿತು ಮಾತನಾಡಿ, “ಭಾಷೆ ಮಾನವೀಯ ಭಾವನೆಗಳನ್ನು ಅಭಿವ್ಯಕ್ತಿಸುವ ಸಾಧನ. ಮಾತೃಭಾಷೆ ನಮ್ಮ ಪೂರ್ವಜರಿಂದ ನಮಗೆ ದೊರೆತ ಅಮೂಲ್ಯ ವರ. ಕೊಂಕಣಿಯನ್ನು ವಿವಿಧ ಲಿಪಿಗಳಲ್ಲಿ ಬರೆಯಲಾಗುತ್ತಿರುವ ಸಂದರ್ಭದಲ್ಲಿ ಲಿಪಿಯ ಭಿನ್ನತೆಗಳನ್ನು ಮೀರಿ ಬರಹಗಾರರನ್ನು ಬೆಸೆಯುವ ಸೇತುವೆಯಾಗಿ ಆಶಾವಾದಿ ಪ್ರಕಾಶನ ಕಾರ್ಯನಿರ್ವಹಿಸುತ್ತಿದೆ” ಎಂದು ಹೇಳಿದರು.



















ಆಶಾವಾದಿ ಪ್ರಕಾಶಕ ವಲ್ಲಿ ಕ್ವಾಡ್ರಸ್ ಮಾತನಾಡಿ, “ಇದುವರೆಗೆ ನೂರಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಲಾಗಿದ್ದು, ಅವುಗಳಲ್ಲಿ ಬಹುಪಾಲು ಕನ್ನಡ ಲಿಪಿಯಲ್ಲಿವೆ ಎಂದು ತಿಳಿಸಿದರು. ಕೊಂಕಣಿ ಭಾಷೆಯ ಬೆಳವಣಿಗೆಯಲ್ಲಿ ಲಿಪಿಗಿಂತ ಭಾಷೆಯ ಮೇಲಿನ ಪ್ರೀತಿ ಮತ್ತು ಸೇವೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಅವರು ಅಭಿಪ್ರಾಯಪಟ್ಟರು. ಕ್ಯಾಥರಿನ್ ಹಾಗೂ ದಿ. ಕೆವಿನ್ ಡಿಮೆಲ್ಲೊ ಅವರ ಕೃತಿಗಳಲ್ಲಿ ಗ್ರಾಮೀಣ ಬದುಕಿನ ಸೊಗಡನ್ನು ಕಾಣಬಹುದು” ಎಂದು ಅವರು ಸ್ಮರಿಸಿದರು.
















ಈ ಸಂದರ್ಭದಲ್ಲಿ ಜೊಯೆಲ್ ಕ್ವಾಡ್ರಸ್, ವಿಲ್ಫ್ರೆಡ್ ಆರ್. ಪಾಂಗ್ಳಾ ಹಾಗೂ ಕ್ಯಾಥರಿನ್ ರೊಡ್ರಿಗಸ್ ಅವರನ್ನು ಆಶಾವಾದಿ ಪ್ರಕಾಶನದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಕೊಂಕಣಿ ವಿಮರ್ಶಕ ನಾನು ಮರೋಲ್ ತೊಟ್ಟಾಮ್ ನಿರ್ವಹಿಸಿದರು. ಸ್ಟೀವನ್ ಆಳ್ವ ಅವರು ಸನ್ಮಾನ ನೆರವೇರಿಸಿದರು.


ಡಾ. ವಿಜಯ್ ಕುಮಾರ್ ಪೈ (ಕೇರಳ), ಡಾ. ಫ್ಲಾವಿಯಾ ಕ್ಯಾಸ್ಟೆಲಿನೊ, ಎಲಿಜಾ ಫೆರ್ನಾಂಡಿಸ್, ಮೀನಾ ಮೊಂತೇರೊ, ವಾಯ್ಲೆಟ್ ಫ್ಲೇವಿ, ಕ್ಯಾಥರಿನ್ ರೊಡ್ರಿಗಸ್, ಮುದ್ದು ಮೂಡುಬೆಳ್ಳೆ, ವಿಲ್ಫ್ರೆಡ್ ಆರ್. ಪಾಂಗ್ಳಾ, ಮೆಲ್ವಿನ್ ಜೆ. ವಾಸ್ ಕೆಲರಾಯ್, ವಲ್ಲಿ ಕ್ವಾಡ್ರಸ್ ಹಾಗೂ ಆಂಡ್ರ್ಯೂ ಎಲ್. ಡಿಕೂನ್ಹಾ ಅವರು ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು.


ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಲೋಮಿ ಡಿಸೋಜ ಮೊಗರ್ನಾಡ್ ಅವರು ಕೊಂಕಣಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿಜೇತರಿಗೆ ವಲ್ಲಿ ಕ್ವಾಡ್ರಸ್ ಬಹುಮಾನ ವಿತರಿಸಿದರು. ಲೊರೆಟ್ಟಾ ಮೊಂತೆರೊ ಹಾಗೂ ರೇಯ್ಝಲ್ ಫುಡ್ತಾದೊ ಕಾರ್ಯಕ್ರಮ ನಿರೂಪಿಸಿದರು. ವಂದನೀಯ ಫಾದರ್ ರಾಜೇಶ್ ಪಸನ್ನ, ಹೋಲಿಕ್ರಾಸ್ ಕೌನ್ಸಿಲಿಂಗ್ ನಿರ್ದೇಶಕ ವಂದನೀಯ ಫಾದರ್ ಪ್ರೀತಮ್ ಜೋಯ್ ಮಿನೇಜಸ್, ಪಾಲನಾ ಮಂಡಳಿಯ ಉಪಾಧ್ಯಕ್ಷ ಹೆಕ್ಟರ್ ಫೆರ್ನಾಂಡಿಸ್, ಕಾರ್ಯದರ್ಶಿ ತೆರೆಜಾ ಲೋಬೊ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕ್ಯಾಥರಿನ್ ರೊಡ್ರಿಗಸ್ ಅವರು ಧನ್ಯವಾದ ಸಲ್ಲಿಸಿ, ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಹೂಗಿಡಗಳನ್ನು ನೀಡಿ ಗೌರವಿಸಿದರು. ಕೊಂಕಣಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನು ಸಂಭ್ರಮಿಸಿದ ಈ ಕಾರ್ಯಕ್ರಮ ಸಾಹಿತ್ಯಾಸಕ್ತರಿಗೆ ಆತ್ಮೀಯ ಅನುಭವ ನೀಡಿತು. ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.




