ಮೊಂಟೆಪದವಿನಲ್ಲಿ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ವಿಶೇಷ ಶಿಬಿರಕ್ಕೆ ಅದ್ಧೂರಿ ಚಾಲನೆ
ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ನಡುಪದವಿನ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಸಂಯುಕ್ತ ಆಶ್ರಯದಲ್ಲಿ, ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಮೊಂಟೆಪದವಿನಲ್ಲಿ 2025-26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ಏಪ್ರಿಲ್ 4ರಂದು ಚಾಲನೆ ನೀಡಲಾಯಿತು.

ಡಿಜಿಟಲ್ ಸಾಕ್ಷರತೆಗೆ ಒತ್ತು:
“ನನ್ನ ಭಾರತಕ್ಕಾಗಿ ಯುವ ಜನತೆ, ಡಿಜಿಟಲ್ ಸಾಕ್ಷರತೆಗಾಗಿ ಯುವ ಜನತೆ” ಎಂಬ ಅರ್ಥಪೂರ್ಣ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಶಿಬಿರವನ್ನು ಆಯೋಜಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ. ಅಮೀನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾಜ ಸೇವೆಯಲ್ಲಿ ಯುವಜನತೆಯ ಪಾತ್ರ ಮತ್ತು ಡಿಜಿಟಲ್ ಯುಗದಲ್ಲಿ ಸಾಕ್ಷರತೆಯ ಅಗತ್ಯತೆಯ ಬಗ್ಗೆ ಶಿಬಿರಾರ್ಥಿಗಳಿಗೆ ಹಿತವಚನ ನೀಡಿ ಶುಭಹಾರೈಸಿದರು.


ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಜ್ ಜೆ. ಹಾಸಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಇಕ್ಬಾಲ್, ಪ್ರಗತಿಪರ ಕೃಷಿಕ ಸತ್ಯನಾರಾಯಣ ಭಟ್ ಎಡಂಬಳೆ, ಕೆ.ಪಿ.ಎಸ್. ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಕೆ. ಬಿ. ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಹನೀಫ್ ಚಂದಹಿತ್ಲು ಉಪಸ್ಥಿತರಿದ್ದರು.

ನರಿಂಗಾನ ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷೆ ಶೈಲಜಾ ಶೆಟ್ಟಿ, ಕಾರ್ಯದರ್ಶಿ ನಳಿನಿ, ನಿಕಟಪೂರ್ವ ಸದಸ್ಯ ಅಬ್ದುಲ್ ರಹಿಮಾನ್, ಯುವಕ ಮಂಡಲದ ಅಧ್ಯಕ್ಷ ಮುರಳೀಧರ ಶೆಟ್ಟಿ ಮೋರ್ಲ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರಕ್ಕೆ ಬೆಂಬಲ ಸೂಚಿಸಿದರು. ಶಿಬಿರದ ಕಾರ್ಯಕ್ರಮಾಧಿಕಾರಿ ಕುಮಾರಿ ಚೈತ್ರ ಎನ್.ವಿ. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿಬಿರದ ಉದ್ದೇಶಗಳನ್ನು ವಿವರಿಸಿದರು. ಮುಹಮ್ಮದ್ ಆಶಿಕ್ ಮತ್ತು ತಂಡದವರು ಎನ್.ಎಸ್.ಎಸ್. ಗೀತೆ ಹಾಡಿದರು. ಗುರುರಾಜ್ ಪಿ. ಸ್ವಾಗತಿಸಿ, ಕುಮಾರಿ ಖೈರುನ್ನೀಸ ವಂದನಾರ್ಪಣೆ ಮಾಡಿದರು. ಮುನೀರ ಎ. ಕಾರ್ಯಕ್ರಮ ನಿರೂಪಿಸಿದರು.

ಈ ವಿಶೇಷ ಶಿಬಿರವು ಮುಂದಿನ ಏಳು ದಿನಗಳ ಕಾಲ ನಡೆಯಲಿದ್ದು, ಗ್ರಾಮದ ಸ್ವಚ್ಛತೆ, ಡಿಜಿಟಲ್ ಜಾಗೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.




