April 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜಮೀನು ಒತ್ತುವರಿ ಪ್ರಕರಣದಲ್ಲಿ ವಾದಿಗೆ ಜಯ – ತಡೆಗೋಡೆ ಪುನರ್ನಿರ್ಮಿಸಲು ಪ್ರತಿವಾದಿಗೆ ಕೋರ್ಟ್ ಆದೇಶ

ಪುತ್ತೂರಿನ ಖ್ಯಾತ ಯುವ ನ್ಯಾಯವಾದಿ ರಾಜನಾರಾಯಣ ಮಳಿ ಅವರು ಮಂಡಿಸಿದ ವಾದ

ನೆರೆಹೊರೆಯವರ ಜಮೀನು ಒತ್ತುವರಿ ಹಾಗೂ ತಡೆಗೋಡೆ ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ವಾದಿಯ ಆಸ್ತಿ ಹಾನಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ಪ್ರತಿವಾದಿಯು ತನ್ನ ಸ್ವಂತ ಖರ್ಚಿನಲ್ಲಿ ತಡೆಗೋಡೆಯನ್ನು ಪುನಃಸ್ಥಾಪಿಸಬೇಕೆಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಪುತ್ತೂರು ತಾಲೂಕು ಪಡೀಲ್ ನಿವಾಸಿ ಹಾಗೂ ಕೊಟೇಚ ಹಾಲ್‌ನ ಮಾಲೀಕರಾದ ಶಶಾಂಕ್ ಕೊಟೇಚ ಅವರ ಜಮೀನಿನ ಪಕ್ಕದ ನಿವಾಸಿ ಕುಂಞ ಅಹಮದ್ ಬಿನ್ ಅಬ್ದುಲ್ ಕುಂಞ ಎಂಬುವವರು ಕೊಟೇಚರವರ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಲ್ಲದೆ, ಅದರ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ತಡೆಗೋಡೆಯನ್ನು ನಾಶಪಡಿಸಿ ನಷ್ಟ ಉಂಟುಮಾಡಿದ್ದರು. ಈ ಬಗ್ಗೆ ಪುತ್ತೂರು ಪುರಸಭೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಶಶಾಂಕ್ ಕೊಟೇಚ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿಚಾರಣೆ ಮತ್ತು ಕೋರ್ಟ್ ಕಮಿಷನರ್ ವರದಿ:

ಪ್ರಕರಣವನ್ನು ಕೈಗೆತ್ತಿಕೊಂಡ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯವು, ವಾಸ್ತವಾಂಶದ ಪರಿಶೀಲನೆಗಾಗಿ ಕೋರ್ಟ್ ಕಮಿಷನರ್ ಹಾಗೂ ಗಡಿ ಗುರುತಿನ ಅಳತೆಗಾಗಿ ಸರ್ವೆಯರ್ ಅವರನ್ನು ನೇಮಿಸಿತ್ತು. ಸ್ಥಳ ಪರಿಶೀಲನೆ ನಡೆಸಿದ ಕಮಿಷನರ್, ಜಮೀನು ಒತ್ತುವರಿಯಾಗಿರುವುದು ಮತ್ತು ತಡೆಗೋಡೆ ಹಾನಿಯಾಗಿ ಮುಂದಕ್ಕೆ ಅಪಾಯಕಾರಿ ಪರಿಸ್ಥಿತಿ ಇರುವುದನ್ನು ದೃಢಪಡಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ನ್ಯಾಯಾಲಯದ ಅಂತಿಮ ತೀರ್ಪು:

ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಣ್ಣ ಅವರು ಅಂತಿಮ ಆದೇಶ ಹೊರಡಿಸಿದ್ದಾರೆ.

* ಖಾಯಂ ಪ್ರತಿಬಂಧಕಕಾಜ್ಞೆ: ಪ್ರತಿವಾದಿ ಕುಂಞ ಅಹಮದ್ ಅವರು ಇನ್ನು ಮುಂದೆ ವಾದಿಯ ಜಮೀನಿಗೆ ಅಕ್ರಮವಾಗಿ ಪ್ರವೇಶಿಸದಂತೆ ನ್ಯಾಯಾಲಯವು ‘ಖಾಯಂ ಪ್ರತಿಬಂಧಕಕಾಜ್ಞೆ’ (Permanent Injunction) ವಿಧಿಸಿದೆ.

* ತಡೆಗೋಡೆ ನಿರ್ಮಾಣಕ್ಕೆ ಆದೇಶ: ಪ್ರತಿವಾದಿಯು ತನ್ನ ಜಮೀನಿನ ಮಣ್ಣು ತೆಗೆದು ವಾದಿಯ ತಡೆಗೋಡೆ ಕುಸಿಯುವಂತೆ ಮಾಡಿರುವುದು ಸಾಬೀತಾದ ಕಾರಣ, ಮುಂದಿನ ಎರಡು ತಿಂಗಳೊಳಗೆ ತನ್ನ ಸ್ವಂತ ಖರ್ಚಿನಲ್ಲಿ ತಡೆಗೋಡೆಯನ್ನು ಮೊದಲಿನಂತೆಯೇ ಪುನಃಸ್ಥಾಪಿಸಬೇಕು ಎಂದು ನ್ಯಾಯಾಧೀಶರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಈ ಮಹತ್ವದ ಕಾನೂನು ಹೋರಾಟದಲ್ಲಿ ವಾದಿ ಶಶಾಂಕ್ ಕೊಟೇಚ ಅವರ ಪರವಾಗಿ ಪುತ್ತೂರಿನ ಖ್ಯಾತ ಯುವ ನ್ಯಾಯವಾದಿ ರಾಜನಾರಾಯಣ ಮಳಿ ಅವರು ವಾದ ಮಂಡಿಸಿದ್ದರು.

You may also like

News

ಬಂಟ್ವಾಳದ ತೌಹೀದ್ ಶಾಲೆಗೆ ಕೀರ್ತಿ ತಂದ ಆಭಿದುನ್ನೀಸ – SSLC ಪರೀಕ್ಷೆಯಲ್ಲಿ ಭರ್ಜರಿ ಸಾಧನೆ

ಇತ್ತೀಚೆಗೆ ಪ್ರಕಟಗೊಂಡ ರಾಜ್ಯ ಮಟ್ಟದ SSLC ಪರೀಕ್ಷಾ ಫಲಿತಾಂಶದಲ್ಲಿ ಬಂಟ್ವಾಳದ ತೌಹೀದ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಆಭಿದುನ್ನೀಸ ಎಂ. ಅವರು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ
News

ಪಾಲ್ದನೆ ಚರ್ಚ್‌ನಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ – ವೃತ್ತಿ ಮಾರ್ಗದರ್ಶನ ಶಿಬಿರ ಯಶಸ್ವಿ

ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ಸರಿಯಾದ ವೃತ್ತಿಜೀವನವನ್ನು ಆರಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ, ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆಯ ಸಂತ ತೆರೆಸಾ ಚರ್ಚ್‌ನ ಶೈಕ್ಷಣಿಕ ಆಯೋಗದ ವತಿಯಿಂದ ಇತ್ತೀಚೆಗೆ

You cannot copy content of this page