ಸಂತ ಫ್ರಾನ್ಸಿಸ್ ಕ್ಷೇವಿಯರ್ ವಿರುದ್ಧ ಅವಹೇಳನ – AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ತೀವ್ರ ಖಂಡನೆ
ಶಾಂತಿ ದೂತನಿಗೆ ‘ಉಗ್ರಗಾಮಿ‘ ಪಟ್ಟ? ಸಂತರ ವಿರುದ್ಧದ ಹೇಳಿಕೆಯಿಂದ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ

ಗೋವಾದ ಆರಾಧ್ಯ ದೈವ, ‘ಗೋವಾಚೊ ಸಾಯ್ಭ್’ ಎಂದೇ ಖ್ಯಾತರಾದ ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರ ವಿರುದ್ಧ ಗೌತಮ್ ಕಟ್ಟರ್ ಎಂಬುವವರು ನೀಡಿರುವ ಅವಹೇಳನಕಾರಿ ಹೇಳಿಕೆಯು ದೇಶಾದ್ಯಂತ ಕ್ರೈಸ್ತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಅಖಿಲ ಭಾರತ ಕ್ರೈಸ್ತ ಒಕ್ಕೂಟದ (AICU) ಕರ್ನಾಟಕ ರಾಜಾಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್ ಅವರು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣದ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ವಿವಾದದ ಹಿನ್ನೆಲೆ :
ಇದೇ ಏಪ್ರಿಲ್ ತಿಂಗಳಲ್ಲಿ ಗೋವಾದ ವಾಸ್ಕೋದಲ್ಲಿ ನಡೆದ ಭಗವಾನ್ ಪರಶುರಾಮ ಜನ್ಮೋತ್ಸವದ ಸಂದರ್ಭದಲ್ಲಿ ಮಾತನಾಡಿದ್ದ ಗೌತಮ್ ಕಟ್ಟರ್, ಜಗತ್ತಿನಾದ್ಯಂತ ಶಾಂತಿ ಪ್ರಸಾರ ಮಾಡಿದ ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರನ್ನು ‘ಉಗ್ರಗಾಮಿ’ ಎಂದು ಸಂಬೋಧಿಸಿದ್ದರು ಎನ್ನಲಾಗಿದೆ. ಈ ಹೇಳಿಕೆಯು ಗೋವಾ ಮಾತ್ರವಲ್ಲದೆ ಭಾರತದಾದ್ಯಂತ ಸೌಹಾರ್ದತೆಗೆ ಧಕ್ಕೆ ತಂದಿದೆ ಎಂದು ದೂರಿರುವ ಆಲ್ವಿನ್ ಡಿಸೋಜ ಅವರು, “ಇದು ಕೇವಲ ವ್ಯಕ್ತಿಯೊಬ್ಬನ ಹೇಳಿಕೆಯಲ್ಲ, ಬದಲಾಗಿ ಶಾಂತಿಪ್ರಿಯ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿದ ಸಂಚು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂತರ ಪವಾಡದ ಇತಿಹಾಸ:
ಕ್ರೈಸ್ತ ಸಮುದಾಯದ ಇತಿಹಾಸದಲ್ಲಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಅವರ ಸೇವೆ ಅಪ್ರತಿಮವಾದುದು. 1542ರಲ್ಲಿ ಭಾರತಕ್ಕೆ ಆಗಮಿಸಿದ ಇವರು ದೀನ-ದಲಿತರ ಮತ್ತು ರೋಗಿಗಳ ಸೇವೆಯಲ್ಲಿ ಜೀವನ ಸವೆಸಿದವರು. 1552ರಲ್ಲಿ ನಿಧನರಾದ ಅವರ ಪಾರ್ಥಿವ ಶರೀರವು ಇಂದಿಗೂ (ಅಂದಾಜು 474 ವರ್ಷಗಳ ನಂತರವೂ) ಕೊಳೆಯದೆ ಗೋವಾದ ಬೊಮ್ ಜೀಸಸ್ ಬಾಸಲಿಕಾದಲ್ಲಿ ಇರುವುದು ಒಂದು ಮಹಾನ್ ಪವಾಡವಾಗಿದೆ. ಅಂತಹ ಪವಿತ್ರ ವ್ಯಕ್ತಿಯನ್ನು ನಿಂದಿಸಿರುವುದು ಅಕ್ಷಮ್ಯ ಅಪರಾಧ ಎಂದು ಅಖಿಲ ಭಾರತ ಕ್ರೈಸ್ತ ಒಕ್ಕೂಟದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿದ ಕಾನೂನು ಹೋರಾಟ:
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದಲ್ಲಿ ಕಾಂಗ್ರೆಸ್ ನಾಯಕ ಯೂರಿ ಅಲೆಮಾವೊ ಹಾಗೂ ಎಎಪಿ ಅಧ್ಯಕ್ಷ ವಾಲ್ಮೀಕಿ ನಾಯಕ್ ಸೇರಿದಂತೆ ಹಲವು ಗಣ್ಯರು ಪೊಲೀಸ್ ದೂರನ್ನು ನೀಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಗೋವಾ ಸರ್ಕಾರವು ತನಿಖೆಯನ್ನು ಕ್ರೈಂ ಬ್ರಾಂಚ್ಗೆ ವರ್ಗಾಯಿಸಿದೆ.

AICU ಬೇಡಿಕೆ:
“ಗೌತಮ್ ಕಟ್ಟರ್ ಕೂಡಲೇ ಕ್ರೈಸ್ತ ಸಮುದಾಯದ ಬಹಿರಂಗ ಕ್ಷಮೆಯಾಚಿಸಬೇಕು ಮತ್ತು ಗೋವಾ ಸರ್ಕಾರವು ಇಂತಹ ವಿಭಜಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಅಲ್ವಿನ್ ಡಿಸೋಜ ಪಾನೀರ್ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.



