ನ್ಯಾಯಾಂಗ ನೌಕರರಿಗೆ ಸಿವಿಲ್ ಜಡ್ಜ್ ಪರೀಕ್ಷೆಗೆ ದಾರಿ – ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಕರ್ನಾಟಕದಲ್ಲಿ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾನೂನು ಪದವಿಧರ ನೌಕರರಿಗೆ ಸಿವಿಲ್ ಜಡ್ಜ್ ಹುದ್ದೆಗೆ ಸ್ಪರ್ಧಿಸಲು ಅವಕಾಶ ನೀಡುವ ಮಹತ್ವದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ನೀಡಿದೆ. ಈ ತೀರ್ಪು ನ್ಯಾಯಾಂಗ ಸೇವೆಯಲ್ಲಿರುವ ಹಲವಾರು ನೌಕರರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವಂತಾಗಿದೆ.

90 ಸಿವಿಲ್ ಜಡ್ಜ್ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ್ದ ಅಧಿಸೂಚನೆಯಲ್ಲಿ, ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ (In-service) ಕಾನೂನು ಪದವಿಧರ ನೌಕರರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಹಲವರು ಹೈಕೋರ್ಟ್ ಮೊರೆ ಹೋಗಿದ್ದರು.

ಈ ಸಂಬಂಧ ನ್ಯಾಯಾಂಗ ಇಲಾಖೆಯ 15 ನೌಕರರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಹೀಗಿದ್ದಾರೆ:
ಯೋಗೇಶ ಬಿ., ಮೋನಿತಾ ಸ., ಮಹಾದೇವಿ ಬೊಮ್ಮನಗಿ, ಶ್ಯಾಮ್ ರಾವ್, ಗಂಗಾಧರ್, ಕಿರಣ್, ನಾಗಾರ್ಜುನ, ಶಂಕರಲಿಂಗಯ್ಯ, ಪರಪ್ಪ ಹೂಗಾರ್, ಸುದರ್ಶನ್, ಅವಿನಾಶ್, ಬಸವರಾಜು ಜೆಲ್ಲಿ, ಮಂಜುನಾಥ್ ಕೆ., ವಿಜಯಲಕ್ಷ್ಮಿ, ಪ್ರೀತಿ.


ಈ ಅರ್ಜಿದಾರರ ಪರವಾಗಿ ವಕೀಲ ವೈಭವ್ ಮಳಿಮಠ್ ಅವರು ವಾದ ಮಂಡಿಸಿದರು. ಅವರ ವಾದವನ್ನು ಪರಿಗಣಿಸಿದ ಗೌರವಾನ್ವಿತ ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠವು IA 1/2026 ಪ್ರಕರಣದಲ್ಲಿ ಮಹತ್ವದ ಆದೇಶ ನೀಡಿದೆ.
ತೀರ್ಪಿನ ಪ್ರಕಾರ, ಅರ್ಜಿದಾರರಿಗೆ ಸಿವಿಲ್ ಜಡ್ಜ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದರಿಂದ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾನೂನು ಪದವಿಧರ ನೌಕರರಿಗೆ ಸಮಾನ ಅವಕಾಶ ಸಿಗುವಂತಾಗಿದೆ.
ಈ ತೀರ್ಪು ನ್ಯಾಯಾಂಗ ಕ್ಷೇತ್ರದಲ್ಲಿ ಸಮಾನತೆ ಮತ್ತು ನ್ಯಾಯತತ್ವವನ್ನು ಬಲಪಡಿಸುವುದರ ಜೊತೆಗೆ, ಸೇವೆಯಲ್ಲಿರುವ ನೌಕರರ ಉನ್ನತಿಗೆ ಸಹಕಾರಿಯಾಗಲಿದೆ ಎಂದು ಕಾನೂನು ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.



