ICYM BORIMAR ಸಂಘಟನೆಯಲ್ಲಿ ‘ಕುಟುಂಬ ರಾಜಕಾರಣ’?: ಯಾರಿಗೂ ತಿಳಿಸದೇ ಒಳಗಿಂದೊಳಗೆ ಚುನಾವಣೆ ನಡೆಸಿದ ಸಚೇತಕ! ಭುಗಿಲೆದ್ದ ಆಕ್ರೋಶ
ಮಂಗಳೂರು ಧರ್ಮಾಧ್ಯಕ್ಷರಿಗೆ ಲಿಖಿತ ದೂರು ನೀಡಿದ ಚರ್ಚ್ ಹಿಂದಿನ ಪಾಲನಾ ಸಮಿತಿ

ಕ್ರೈಸ್ತ ಯುವಜನರ ಪ್ರತಿಷ್ಠಿತ ಸಂಘಟನೆಯಾದ ICYM ಬೊರಿಮಾರ್ (BORIMAR) ಘಟಕದಲ್ಲಿ ಸಚೇತಕನು (ANIMATOR) ಧರ್ಮಕ್ಷೇತ್ರದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಏಕಪಕ್ಷೀಯವಾಗಿ ರಹಸ್ಯ ಚುನಾವಣೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಒಂದೇ ಕುಟುಂಬದ ಸದಸ್ಯರಿಗೆ ಸಂಘಟನೆಯ ಪ್ರಮುಖ ಹುದ್ದೆಗಳನ್ನು ತನಗೆ ಬೇಕಾದವರಿಗೆ ಕೊಡುವ ಸಲುವಾಗಿ, ಪ್ರಾಮಾಣಿಕವಾಗಿ ನಿಷ್ಟಾವಂತ ಸೇವೆ ನೀಡುವ ಇತರ ಯಾವುದೇ ಸದಸ್ಯರಿಗೆ ಚುನಾವಣೆ ನಡೆಸುವ ಮಾಹಿತಿ ನೀಡದೆ ಒಳಗಿಂದೊಳಗೆ ತಮಗೆ ಬೇಕಾದವರನ್ನು ಮಾತ್ರ ಕರೆಸಿ ಈ ಹಠಾತ್ ಚುನಾವಣೆ ಪ್ರಕ್ರಿಯೆ ಇದೇ ಮೇ 10ರಂದು ಭಾನುವಾರ ಮುಗಿಸಲಾಗಿದೆ ಎಂದು ಯುವಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಹಸ್ಯ ಕಾರ್ಯಾಚರಣೆಯಂತೆ ನಡೆದ ಚುನಾವಣೆ!
ಸಾಮಾನ್ಯವಾಗಿ ICYM ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯುವಾಗ ಕನಿಷ್ಠ 15 ದಿನಗಳ ಮುಂಚಿತವಾಗಿ ಎಲ್ಲಾ ಅಧಿಕೃತ ಸದಸ್ಯರಿಗೆ ಲಿಖಿತವಾಗಿ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತ ನೋಟಿಸ್ ನೀಡಬೇಕಾಗುತ್ತದೆ. ಆದರೆ ಈ ಬಾರಿ ಸಚೇತಕನು ಸಂಘಟನೆಯ ಪ್ರಜಾಪ್ರಭುತ್ವದ ಆಶಯಕ್ಕೆ ಕೊಳ್ಳಿ ಇಟ್ಟಿದ್ದಾನೆ. ತಮಗೆ ಬೇಕಾದ ನಿರ್ದಿಷ್ಟ ಕುಟುಂಬದ ಸದಸ್ಯರನ್ನು ಅಧಿಕಾರದ ಗದ್ದುಗೆಗೆ ಏರಿಸುವ ಏಕೈಕ ಅಜೆಂಡಾದೊಂದಿಗೆ, ಸಾರ್ವಜನಿಕ ಪ್ರಕಟಣೆ ನೀಡದೆ, ಕತ್ತಲಲ್ಲಿ ಇಟ್ಟು ಈ ‘ರಹಸ್ಯ ಡ್ರಾಮಾ’ ಆಡಿದ್ದಾನೆ ಎನ್ನಲಾಗಿದೆ.


ಯುವ ಸಮುದಾಯದ ಪ್ರಮುಖ ಆರೋಪಗಳು:
- ಮಾಹಿತಿ ಗೌಪ್ಯತೆ: ಚುನಾವಣೆಯ ದಿನಾಂಕ ಮತ್ತು ಸಮಯವನ್ನು ಬಹುಪಾಲು ಸಕ್ರಿಯ ಸದಸ್ಯರಿಂದ ಮುಚ್ಚಿಡಲಾಗಿತ್ತು.
- ಸ್ವಜನಪಕ್ಷಪಾತ (Nepotism): ಅರ್ಹ ಮತ್ತು ಉತ್ಸಾಹಿ ಯುವಕ-ಯುವತಿಯರಿಗೆ ಮುಕ್ತವಾಗಿ ಸ್ಪರ್ಧಿಸಲು ಅವಕಾಶ ನಿರಾಕರಿಸಿ, ಕೇವಲ ಒಂದೇ ಕುಟುಂಬದ ಹಿತಾಸಕ್ತಿಗೆ ಮಣೆ ಹಾಕಲಾಗಿದೆ.
- ಸಚೇತಕನ ದುರ್ವರ್ತನೆ: ಸಂಘಟನೆಯನ್ನು ಸನ್ಮಾರ್ಗದಲ್ಲಿ ಮುನ್ನಡೆಸಬೇಕಾದ ಸಚೇತಕನೇ ಈ ರೀತಿಯ ಅಡ್ಡದಾರಿ ಹಿಡಿದಿರುವುದು ಯುವ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ.


ಉನ್ನತ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಆಗ್ರಹ:
“ಸಂಘಟನೆಯನ್ನು ಕೆಲವು ವ್ಯಕ್ತಿಗಳು ತಮ್ಮ ಸ್ವಂತ ಆಸ್ತಿಯಂತೆ ಬಳಸಿಕೊಳ್ಳಲು ಹೊರಟಿದ್ದಾರೆ. ಯುವಶಕ್ತಿಯನ್ನು ಪ್ರೋತ್ಸಾಹಿಸಬೇಕಾದ ವೇದಿಕೆಯಲ್ಲಿ ಇಂತಹ ಒಳಸಂಚು ನಡೆಸಿರುವುದು ಖಂಡನೀಯ” ಎಂದು ಘಟಕದ ಹಿರಿಯ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ.
ಪ್ರಸ್ತುತ ನಡೆದಿರುವ ಈ ಅಕ್ರಮ ಚುನಾವಣೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಧರ್ಮಕ್ಷೇತ್ರದ (Diocese) ಉನ್ನತ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಈ ವಿಷಯದಲ್ಲಿ ತಕ್ಷಣ ಹಸ್ತಕ್ಷೇಪ ಮಾಡಿ, ಎಲ್ಲಾ ಯುವಜನರ ಸಮ್ಮುಖದಲ್ಲಿ ಪಾರದರ್ಶಕವಾಗಿ ಮರು-ಚುನಾವಣೆ ನಡೆಸಬೇಕು. ಹಾಗೂ ಸಂಘಟನೆಯಲ್ಲಿ ಒಂದು ಕುಟುಂಬದ ಎಷ್ಟೇ ಸದಸ್ಯರಿದ್ದರು ಒಂದು ಸದಸ್ಯನಿಗೆ ಮಾತ್ರ ಹುದ್ದೆಯನ್ನು ನೀಡುವಂತೆ ಯುವ ಸಮುದಾಯ ಪಟ್ಟು ಹಿಡಿದಿದೆ. ಈ ಬಗ್ಗೆ *ಸೂರಿಕುಮೇರು ಬೊರಿಮಾರ್* ಚರ್ಚ್ ಇದರ ಹಿಂದಿನ ಪಾಲನಾ ಸಮಿತಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಮರು ಚುನಾವಣೆ ನಡೆಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.



