ವಿಟ್ಲ ವಲಯದ ಶ್ರೇಷ್ಠಗುರು ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರಿಗೆ ಮಿಲಾಗ್ರಿಸ್ ಚರ್ಚ್ ನಲ್ಲಿ ಭವ್ಯ ಸ್ವಾಗತ – ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ಸ್ವೀಕಾರ
ಜನಮನ ಗೆದ್ದ ಧರ್ಮಗುರು ಮಿಲಾಗ್ರಿಸ್ ಚರ್ಚ್ನ ನಾಯಕತ್ವಕ್ಕೆ

ಸರಳತೆ, ಮೃದು ಸ್ವಭಾವ ಮತ್ತು ಜನಸ್ನೇಹಿ ಧೋರಣೆಯಿಂದ ಭಕ್ತರ ಮನಸ್ಸು ಗೆಲ್ಲುವಲ್ಲಿ ಪ್ರಮುಖ ಪಾತ್ರ

ವಿಟ್ಲ ವಲಯದಲ್ಲಿ ಶ್ರೇಷ್ಠ ಧರ್ಮಗುರು, ಸಮಾಜಮುಖಿ ಚಿಂತಕ ಹಾಗೂ ಕಥೊಲಿಕ್ ಸಭಾದ ಆದ್ಯಾತ್ಮಿಕ ನಿರ್ದೇಶಕರಾಗಿ ಜನಮನ ಗೆದ್ದಿದ್ದ ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರು ಇದೀಗ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಐತಿಹಾಸಿಕ ಮಿಲಾಗ್ರಿಸ್ ಚರ್ಚ್ನ ನೂತನ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿದರು.






ಮೇ 19ರಂದು ಸೋಮವಾರ ನಡೆದ ಭವ್ಯ ಸಮಾರಂಭದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು, ವಿವಿಧ ಚರ್ಚ್ಗಳ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಗಣ್ಯರು ಆತ್ಮೀಯ ಸ್ವಾಗತದೊಂದಿಗೆ ಅವರನ್ನು ಬರಮಾಡಿಕೊಂಡರು. ಬಿಷಪ್ ಪ್ರತಿನಿಧಿಯಾಗಿ ಆಗಮಿಸಿದ್ದ ಅತೀ ವಂದನೀಯ ಫಾದರ್ ವಲೇರಿಯನ್ ಡಿಸೋಜ ಅವರು ಅಧಿಕೃತವಾಗಿ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
ಕಾರ್ಯಕ್ರಮವು ಮಿಲಾಗ್ರಿಸ್ ಚರ್ಚ್ನ ಹಿಂದಿನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಬೊನವೆಂಚರ್ ನಜ್ರೆತ್ ಅವರ ಸಮರ್ಪಿತ ಸೇವೆಯನ್ನು ಸ್ಮರಿಸಿ ಕೃತಜ್ಞತಾ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬಳಿಕ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಡಿಕ್ಸನ್ ಡಿಸೋಜ ಅವರು ಮಿಲಾಗ್ರಿಸ್ ಚರ್ಚ್ ಹಾಗೂ ಅದರ ವಿವಿಧ ಸಂಸ್ಥೆಗಳ ಪರಿಚಯ ನೀಡಿದರು.







ವಿಟ್ಲ ಚರ್ಚ್ನ ನೂತನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಮೈಕಲ್ ಲೋಬೋ ಅವರು, ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರನ್ನು ಭಕ್ತ ಸಮುದಾಯಕ್ಕೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅತೀ ವಂದನೀಯ ಫಾದರ್ ವಲೇರಿಯನ್ ಡಿಸೋಜ ಅವರು, ಫಾದರ್ ಬೊನವೆಂಚರ್ ನಜ್ರೆತ್ ಅವರ ಸೇವೆಯನ್ನು ಶ್ಲಾಘಿಸಿ, ನೂತನ ಧರ್ಮಗುರು ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರ ಸೇವಾ ಪಯಣ ಮಿಲಾಗ್ರಿಸ್ ಚರ್ಚ್ಗೆ ಹೊಸ ಚೈತನ್ಯ ತರಲಿ ಎಂದು ಶುಭ ಹಾರೈಸಿದರು.














ಫಾದರ್ ಬೊನವೆಂಚರ್ ನಜ್ರೆತ್ ಅವರು ನೂತನ ಧರ್ಮಗುರುಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಮಿಲಾಗ್ರಿಸ್ ಚರ್ಚ್ ಸದಸ್ಯರಿಂದ ಸಂಪೂರ್ಣ ಸಹಕಾರ ಮತ್ತು ಬೆಂಬಲ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಮಾತಿನಲ್ಲಿ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರು, ವಿಟ್ಲ ಚರ್ಚ್ನಲ್ಲಿ ಕಳೆದ ಆರು ವರ್ಷಗಳ ಸೇವಾ ಅವಧಿಯಲ್ಲಿ ಭಕ್ತರು ತೋರಿದ ಪ್ರೀತಿ, ವಿಶ್ವಾಸ ಹಾಗೂ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. “ಸಮಾಜದ ಒಗ್ಗಟ್ಟು, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಯುವಜನರ ಸಬಲೀಕರಣವೇ ನನ್ನ ಸೇವೆಯ ಧ್ಯೇಯ” ಎಂದು ಹೇಳಿದ ಅವರು, ಮಿಲಾಗ್ರಿಸ್ ಚರ್ಚ್ ಭಕ್ತರಿಂದಲೂ ಇದೇ ರೀತಿಯ ಪ್ರೀತಿ ಮತ್ತು ಪ್ರಾರ್ಥನೆ ದೊರೆಯಲಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು.







ವಿಟ್ಲ ವಲಯದಲ್ಲಿ ಅವರು ಕಥೊಲಿಕ್ ಸಭಾದ ಆದ್ಯಾತ್ಮಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಧಾರ್ಮಿಕ ಜಾಗೃತಿ, ಯುವಜನ ಪ್ರೋತ್ಸಾಹ, ಕುಟುಂಬ ಮೌಲ್ಯಗಳ ಬಲವರ್ಧನೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಶೇಷ ಗುರುತನ್ನು ಮೂಡಿಸಿದ್ದರು. ಅವರ ಸರಳತೆ, ಮೃದು ಸ್ವಭಾವ ಮತ್ತು ಜನಸ್ನೇಹಿ ಧೋರಣೆ ಅನೇಕ ಭಕ್ತರ ಮನಸ್ಸು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿತ್ತು.

ಅವಿತ್ ಪಾಯ್ಸ್ ಕಾರ್ಯಕ್ರಮ ನಿರೂಪಿಸಿದರು. ನೂತನ ಧರ್ಮಗುರುಗಳ ಸೇವಾ ಕಾರ್ಯ ಯಶಸ್ವಿಯಾಗಲೆಂದು ದೇವರ ಆಶೀರ್ವಾದ ಕೋರುವ ವಿಶೇಷ ಪ್ರಾರ್ಥನೆಯೊಂದಿಗೆ ಸಮಾರಂಭವು ಸಮಾಪ್ತಿಯಾಯಿತು.



