ಕೋರ್ಟ್ ಆವರಣದಲ್ಲೇ ಕುಸಿದು ಬಿದ್ದ ಯುವ ವಕೀಲ ಹೃದಯಾಘಾತದಿಂದ ಸಾವು
ಗಂಗಾವತಿ ನ್ಯಾಯಾಲಯ ಆವರಣದಲ್ಲಿ ಯುವ ವಕೀಲರೊಬ್ಬರು ದಿಢೀರ್ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ನಡೆದಿದೆ. ಕನಕಗಿರಿ ತಾಲೂಕಿನ ಚಿಕ್ಕಮಾದಿಹಾಳ ಗ್ರಾಮದ ನಿವಾಸಿಯಾಗಿದ್ದ 26 ವರ್ಷದ ಯುವ ವಕೀಲ ಕನಕೇಶ್ ಮುರುಡಿ ಮೃತಪಟ್ಟವರು.

ಎಂದಿನಂತೆ ನ್ಯಾಯಾಲಯದ ಕಲಾಪಗಳಿಗೆ ಆಗಮಿಸಿದ್ದ ಕನಕೇಶ್ ಅವರು ಕೋರ್ಟ್ ಆವರಣದಲ್ಲಿ ಇದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದ ಸಹೋದ್ಯೋಗಿ ವಕೀಲರು ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಕನಕೇಶ್ ಅವರು ಹಿರಿಯ ವಕೀಲ ಹೆಚ್.ಎಮ್. ಮಂಜುನಾಥ್ ಅವರ ಬಳಿ ವೃತ್ತಿ ಅಭ್ಯಾಸ ಮಾಡುತ್ತಿದ್ದರು. ಅವರ ಅಕಾಲಿಕ ನಿಧನಕ್ಕೆ ಆಪ್ತ ಸ್ನೇಹಿತ ಆನಂದ ದೇವರಮನಿ ಸೇರಿದಂತೆ ಗಂಗಾವತಿ ವಕೀಲರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ವೃತ್ತಿ ಜೀವನದ ಒತ್ತಡದ ನಡುವೆಯೂ ಆರೋಗ್ಯದ ಕಡೆ ವಿಶೇಷ ಗಮನ ಹರಿಸುವ ಅಗತ್ಯವಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಿಯಮಿತ ಆರೋಗ್ಯ ತಪಾಸಣೆ, ಸಮತೋಲನ ಆಹಾರ, ಸರಿಯಾದ ಜೀವನಶೈಲಿ ಹಾಗೂ ದೈಹಿಕ ವ್ಯಾಯಾಮವನ್ನು ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.



