ದೀಪಕ್ ಜಿ. ಅವರಿಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ – ಪತ್ರಕರ್ತರು ಸಮಾಜದ ಸ್ವಾಸ್ಥ್ಯ ರಕ್ಷಕರು ಎಂದ MLC ಐವನ್ ಡಿಸೋಜ
ಸಮಾಜದಲ್ಲಿ ಶಾಂತಿ ಮತ್ತು ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಹಿರಿದಾಗಿದೆ. ಅತ್ಯಂತ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ತಿಳಿಸಿದ್ದಾರೆ.



ನಗರದ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದ ‘ಪ್ರೇರಣಾ ಸಭಾಂಗಣ’ದಲ್ಲಿ ಆಯೋಜಿಸಲಾಗಿದ್ದ “ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಯಾವುದೇ ಘಟನೆ ನಡೆದರೂ ಪೊಲೀಸರಷ್ಟೇ ವೇಗವಾಗಿ ಸ್ಥಳಕ್ಕೆ ಧಾವಿಸುವ ಪತ್ರಕರ್ತರು, ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗದಂತೆ ವಿವೇಚನೆಯಿಂದ ವರದಿ ಮಾಡುವ ಮೂಲಕ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.


ಪ್ರಶಸ್ತಿ ಹಾಗೂ ಗೌರವ ಸಮರ್ಪಣೆ:
ಇದೇ ಸಂದರ್ಭದಲ್ಲಿ ರಾಜಕೇಸರಿ ಟ್ರಸ್ಟ್ನ ಸಂಸ್ಥಾಪಕರು ಹಾಗೂ ಖ್ಯಾತ ಸಮಾಜ ಸೇವಕರೂ ಆದ ದೀಪಕ್.ಜಿ. ಬೆಳ್ತಂಗಡಿ ಅವರಿಗೆ ‘2026ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ‘ಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ವಿತರಿಸಿದ ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತ (DCP) ಎಚ್.ಎನ್. ಮಿಥುನ್ ಮಾತನಾಡಿ, “ಮಂಗಳೂರಿನ ಮಾಧ್ಯಮ ರಂಗವು ಅಪಾರ ಸಂಯಮ ಮತ್ತು ಸಾಮಾಜಿಕ ಕಳಕಳಿಗೆ ಹೆಸರಾಗಿದೆ. ಇಂತಹ ವೇದಿಕೆಯಲ್ಲಿ ನಿಸ್ವಾರ್ಥ ಸಮಾಜ ಸೇವಕರನ್ನು ಗುರುತಿಸುತ್ತಿರುವುದು ಇಡೀ ಸಮಾಜಕ್ಕೆ ಮಾದರಿಯಾದ ಉತ್ತಮ ಸಂದೇಶವಾಗಿದೆ” ಎಂದರು.


ಗಣ್ಯರ ಉಪಸ್ಥಿತಿ ಮತ್ತು ಸನ್ಮಾನ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ವಹಿಸಿದ್ದರು. ಇದೇ ವೇಳೆ ರೆಡ್ಕ್ರಾಸ್ ಸೊಸೈಟಿಯ ಜಿಲ್ಲಾ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅವರು ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ ಅವರು ಪ್ರೆಸ್ ಗೌರವಕ್ಕೆ ಪಾತ್ರರಾದವರನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಪತ್ರಕರ್ತರಾದ ಮಹಮ್ಮದ್ ಆರಿಫ್ ಪಡುಬಿದ್ರಿ, ಆತ್ಮಭೂಷಣ್ ಭಟ್, ವಿಲ್ಫ್ರೆಡ್ ಡಿಸೋಜ, ದಯಾ ಕುಕ್ಕಾಜೆ ಮತ್ತು ವಿಜಯ ಕೋಟ್ಯಾನ್ ಪಡು ಅವರು ಸನ್ಮಾನಿತರನ್ನು ಪರಿಚಯಿಸಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿ, ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.


ಪ್ರೆಸ್ ಗೌರವ ಪಡೆದ ಸಾಧಕರು:
ಕಾರ್ಯಕ್ರಮದಲ್ಲಿ ಬಾಲಸುಬ್ರಹ್ಮಣ್ಯ ಕಾಯಾರ, ರಾಮಣ್ಣ ವೈ., ಹರ್ಷ, ರೇಮಂಡ್ ಡಿಕೂನಾ ಮತ್ತು ಆರ್.ಎಂ. ರಾಜೇಂದ್ರನ್ ಅವರಿಗೆ ‘ಪ್ರೆಸ್ ಗೌರವ’ ಸಲ್ಲಿಸಲಾಯಿತು. ಇದರೊಂದಿಗೆ ಮಾಧ್ಯಮ ಅಕಾಡೆಮಿ ವಿಶೇಷ ಪ್ರಶಸ್ತಿ ಪುರಸ್ಕೃತ ಆನಂದ ಶೆಟ್ಟಿ, ಕೆಯುಡಬ್ಲ್ಯುಜೆ ಪ್ರಶಸ್ತಿ ವಿಜೇತರಾದ ರಾಮಕೃಷ್ಣ ಆರ್., ರಾಜೇಶ್ ಶೆಟ್ಟಿ ದೋಟ, ಅಬ್ದುಲ್ ರಹಿಮಾನ್ ಟಿ., ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ ಇರಾ, ರಾಜೇಶ್ ಶೆಟ್ಟಿ ದಡ್ಡಂಗಡಿ, ಎ.ಕೆ. ಕುಕ್ಕಿಲ ಹಾಗೂ ಸುಳ್ಯ ತಾಲೂಕು ಕಸಾಪ ಪ್ರಶಸ್ತಿ ಪುರಸ್ಕೃತ ಹರೀಶ್ ಮೋಟುಕಾನ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.



