ಬ್ಯಾರಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ದಫ್ ಉಸ್ತಾದ್ ಇಸ್ಮಾಯಿಲ್ ಮುಸ್ಲಿಯಾರ್ ಇನ್ನಿಲ್ಲ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ವಿಜೇತ, ಸಾಂಪ್ರದಾಯಿಕ ದಫ್ ಕಲೆಯ ಹಿರಿಯ ಉಸ್ತಾದ್ ಸುರಿಬೈಲು ನಿವಾಸಿ 87 ವರ್ಷ ಪ್ರಾಯದ ಇಸ್ಮಾಯಿಲ್ ಮುಸ್ಲಿಯಾರ್ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಮೇ 26ರಂದು ಮಂಗಳವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.

ದಫ್ ಕಲೆ ಮತ್ತು ಧಾರ್ಮಿಕ ಸೇವೆ:
ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಸಾಂಪ್ರದಾಯಿಕ ‘ದಫ್ ರಾತಿಬ್’ ಕಲೆಯ ಮುಂಚೂಣಿ ನೇತೃತ್ವ ವಹಿಸುತ್ತಿದ್ದ ಇಸ್ಮಾಯಿಲ್ ಮುಸ್ಲಿಯಾರ್ ಅವರು, ತಮ್ಮ ಜೀವಿತಾವಧಿಯನ್ನು ದಫ್ ಕಲೆಯ ಬೆಳವಣಿಗೆಗಾಗಿ ಮುಡುಪಾಗಿಟ್ಟಿದ್ದರು. ಇವರ ಅಪಾರ ಕಲಾ ಸೇವೆಯನ್ನು ಪರಿಗಣಿಸಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

ಬಂಟ್ವಾಳ ತಾಲೂಕಿನ ಸುರಿಬೈಲು ಕೇಂದ್ರ ಜುಮಾ ಮಸೀದಿಯಲ್ಲಿ ದೀರ್ಘಕಾಲ ಮುಹಝ್ಝಿನ್ (ಮುಕ್ರಿ) ಆಗಿ ಸೇವೆ ಸಲ್ಲಿಸಿದ್ದ ಇವರು, ಸಮಾಜಮುಖಿ ಕಾರ್ಯಗಳಲ್ಲೂ ಸಕ್ರಿಯರಾಗಿದ್ದರು. ಸುತ್ತಮುತ್ತಲಿನ ಪರಿಸರದಲ್ಲಿ ಯಾರೇ ಮರಣ ಹೊಂದಿದರೂ ಮುಂಚೂಣಿಯಲ್ಲಿ ನಿಂತು ಮಯ್ಯತ್ (ಶವ ಸಂಸ್ಕಾರ) ಪರಿಪಾಲನೆಯ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿಕೊಡುವ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.

ಗಣ್ಯರ ಸಂತಾಪ:
ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಶಿಷ್ಯಂದಿರನ್ನು ಅಗಲಿದ್ದಾರೆ. ಹಿರಿಯ ದಫ್ ಉಸ್ತಾದರ ನಿಧನಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ದಫ್ ಅಸೋಸಿಯೇಷನ್ ಅಧ್ಯಕ್ಷರಾದ ಲತೀಫ್ ನೇರಳಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



