ಮಂಗಳೂರಿನಲ್ಲಿ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನ; ಇಬ್ಬರು ಹಿರಿಯ ಕವಯತ್ರಿಯರಿಗೆ ಗೌರವ – ರೇಮಂಡ್ ಡಿಕುನಾ ತಾಕೊಡೆ
ಮಂಗಳೂರಿನಲ್ಲಿ ಜುಲೈ 19ರಂದು ಭಾನುವಾರ ನಡೆಯಲಿರುವ 5ನೇ ರಾಷ್ಟ್ರೀಯ ಕೊಂಕಣಿ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳೂರಿನ ಹಿರಿಯ ಕವಯತ್ರಿ ಅರುಂಧತಿ ವಿ. ರಾವ್ ಹಾಗೂ ಗೋವಾದ ಹಿರಿಯ ಕವಯತ್ರಿ ಆನ್ನಿ ದೆ. ಕೊಲ್ವಾಲೆ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಚಾರೊಳಿ ಸನ್ಮಾನ ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನದ ಅಧ್ಯಕ್ಷ ರೇಮಂಡ್ ಡಿಕುನಾ ತಾಕೊಡೆ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕಾರವಾರ, ಕೇರಳ ಹಾಗೂ ದುಬೈ ಸೇರಿದಂತೆ ವಿವಿಧ ಭಾಗಗಳಿಂದ ಕವಿಗಳು ಸಮ್ಮೇಳನದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಒಂದು ದಿನ ಮೊದಲೇ ಆಗಮಿಸಲಿರುವುದರಿಂದ ಜುಲೈ 19ರಂದು ಬೆಳಗ್ಗೆ 8 ಗಂಟೆಗೆ ಕವಿಗೋಷ್ಠಿಗೆ ಚಾಲನೆ ನೀಡಲಾಗುವುದು. ಗೋವಾದ ಕಾಣಕೋಣದ ಖ್ಯಾತ ರಂಗಭೂಮಿ ತರಬೇತುದಾರ, ಕವಿ ಹಾಗೂ ಕೊಂಕಣಿ ಶಿಕ್ಷಕ ಗೌರೀಶ ವರ್ಣೇಕರ್ ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ.


ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಮಂಗಳೂರಿನ ಜಿಲ್ಲಾ ಪ್ರಧಾನ ಸರ್ಕಾರಿ ಅಭಿಯೋಜಕ ಎಂ.ಪಿ. ನೊರೊನ್ಹಾ ಅವರು ಉದ್ಘಾಟಿಸಲಿದ್ದು, ಉದ್ಯಮಿ ವಿನ್ಸೆಂಟ್ ಕುಟಿನೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಕವಿಗೋಷ್ಠಿ ಮುಂದುವರಿಯಲಿದ್ದು, ಮಧ್ಯಾಹ್ನ ವಿದ್ಯಾರ್ಥಿಗಳು ಹಾಗೂ ಕವಿಗಳಿಗಾಗಿ ಸಾಹಿತ್ಯ ಮತ್ತು ಕಾವ್ಯದ ಕುರಿತು ಮುಕ್ತ ಸಂವಾದ (ಓಪನ್ ಹೌಸ್) ನಡೆಯಲಿದೆ.

ಸಮಾರೋಪ ಸಮಾರಂಭದಲ್ಲಿ ಗೋವಾದ ಪ್ರಕಾಶಕಿ ಹಾಗೂ ಕೊಂಕಣಿ ಮಾತೃಭಾಷಾ ಶಿಕ್ಷಕಿ ಯೋಗಿತಾ ವರ್ಣೇಕರ್ ಸಮಾರೋಪ ಭಾಷಣ ಮಾಡಲಿದ್ದು, ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಎಲಿಯಾಸ್ ಫೆರ್ನಾಂಡಿಸ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಎರಡನೇ ಹಾಗೂ ನಾಲ್ಕನೇ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನಗಳು ಗೋವಾದ ಪಣಜಿಯಲ್ಲಿ ನಡೆದಿದ್ದರೆ, ಮೊದಲ ಹಾಗೂ ಮೂರನೇ ಸಮ್ಮೇಳನಗಳು ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದ್ದವು.

ಸಮ್ಮೇಳನದ ಆಯೋಜಕರಾಗಿ ಗೌರೀಶ ವರ್ಣೇಕರ್ (ಮಡ್ಗಾಂವ್, ಗೋವಾ) ಕಾರ್ಯನಿರ್ವಹಿಸುತ್ತಿದ್ದು, ಆಯೋಜನಾ ಸಮಿತಿಯಲ್ಲಿ ಕೇರಳದ ವಿಜಯ್ ಪೈ, ಕಾರವಾರದ ಸಂದೇಶ್ ಬಾಂದೇಕರ್, ಗೋವಾದ ಆನ್ನಿ ಫೆರ್ನಾಂಡಿಸ್, ಅನಘಾ ಕಾಮತ್, ದೆಹಲಿಯ ಗೋಪಾಲಕೃಷ್ಣ ಪ್ರಭು ಹಾಗೂ ಬೆಂಗಳೂರಿನ ಜಾನೆಟ್ ವಾಸ್ ಸದಸ್ಯರಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಅಧ್ಯಕ್ಷ ರೇಮಂಡ್ ಡಿಕುನಾ ತಾಕೊಡೆ, ಆಯೋಜನಾ ಸಮಿತಿಯ ಕಾರ್ಯದರ್ಶಿ ರಿಯಾನ ಡಿಕುನಾ, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಹಾಗೂ ಕಾರ್ಯಕಾರಿ ಸದಸ್ಯ ಸ್ಟ್ಯಾನಿ ತಾವ್ರೊ ಉಪಸ್ಥಿತರಿದ್ದರು.



