ಹನೂರು ಶೂಟೌಟ್ ಪ್ರಕರಣ – ಆರ್ಚ್ಬಿಷಪ್ ಪೀಟರ್ ಮಚಾದೊ ಬೆಂಬಲಕ್ಕೆ ನಿಂತ DAPC; ನ್ಯಾಯಾಂಗ ತನಿಖೆಗೆ ಆಗ್ರಹ
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದ ಗುಂಡಿನ ಚಕಮಕಿ ಮತ್ತು ಮೂವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಮಹಾ ಧರ್ಮಕ್ಷೇತ್ರದ ಆರ್ಚ್ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಮಚಾದೊ ಅವರ ಆಗ್ರಹಕ್ಕೆ ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಪ್ರಕರಣದ ಕುರಿತು ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ನ್ಯಾಯಾಂಗ ತನಿಖೆ ನಡೆಸಬೇಕೆಂದು DAPC ಒಗ್ಗಟ್ಟಿನಿಂದ ಒತ್ತಾಯಿಸಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ DAPC ಯ ಆರ್ಚ್ಬಿಷಪ್ ರೆವರೆಂಡ್ ಡಾ. ವಿನೋದ್ ಎಂ. ಚಾಕೋ ಅವರು “ಕ್ರೈಸ್ತರೆಲ್ಲರೂ ಕ್ರಿಸ್ತನಲ್ಲಿ ಒಂದೇ ದೇಹದ ಸದಸ್ಯರು. ನಮ್ಮ ಸಹೋದರ–ಸಹೋದರಿಯರು ನೋವು ಅಥವಾ ಅನ್ಯಾಯ ಅನುಭವಿಸುತ್ತಿರುವಾಗ ನಾವು ಮೌನವಾಗಿರಲು ಸಾಧ್ಯವಿಲ್ಲ. ಹೀಗಾಗಿ ಸತ್ಯ ಮತ್ತು ನ್ಯಾಯಕ್ಕಾಗಿ ಆರ್ಚ್ಬಿಷಪ್ ಪೀಟರ್ ಮಚಾದೊ ಅವರು ಮಾಡುತ್ತಿರುವ ಹೋರಾಟದೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ“ ಎಂದು ಹೇಳಿದ್ದಾರೆ.


ಪ್ರಮುಖ ಆಗ್ರಹಗಳು ಹಾಗೂ ಸಾರಾಂಶ:
* ನ್ಯಾಯಾಂಗ ತನಿಖೆಗೆ ಒತ್ತಾಯ: ಘಟನೆಯ ಹಿಂದಿನ ನೈಜ ಸತ್ಯಾಂಶ ಹೊರಬರಲು ಸ್ವತಂತ್ರ ನ್ಯಾಯಾಂಗ ತನಿಖೆ ತಕ್ಷಣವೇ ನಡೆಯಬೇಕು.
* ಕಾನೂನು ಕ್ರಮ: ತನಿಖೆಯಲ್ಲಿ ಯಾರೇ ತಪ್ಪಿತಸ್ಥರೆಂದು ಸಾಬೀತಾದರೂ, ಅವರ ಅಧಿಕಾರ ಅಥವಾ ಪ್ರಭಾವವನ್ನು ಲೆಕ್ಕಿಸದೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು.
* ಸಂತ್ರಸ್ತ ಕುಟುಂಬಗಳಿಗೆ ನ್ಯಾಯ: ಮೃತರ ಕುಟುಂಬಗಳ ಹಕ್ಕು ಹಾಗೂ ಗೌರವವನ್ನು ರಕ್ಷಿಸಿ, ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕು.
* ಬಲಿಷ್ಠ ಕ್ರೈಸ್ತ ನಾಯಕತ್ವ: ಸಮಾಜ ಹಾಗೂ ರಾಜಕೀಯ ರಂಗದಲ್ಲಿ ಕ್ರೈಸ್ತ ಸಮುದಾಯದ ನೈಜ ಹಕ್ಕುಗಳನ್ನು ಪ್ರಜಾಸತ್ತಾತ್ಮಕವಾಗಿ ಪ್ರತಿನಿಧಿಸುವ, ತತ್ವನಿಷ್ಠ ಮತ್ತು ಧೈರ್ಯವಂತ ನಾಯಕರ ಅಗತ್ಯವಿದೆ ಎಂದು DAPC ಅಸಿಸ್ಟೆಂಟ್ ಆರ್ಚ್ಬಿಷಪ್ ರೆವರೆಂಡ್ ಸುನಿಲ್ ವಿ. ಜೇಕಬ್ ಅಭಿಪ್ರಾಯಪಟ್ಟಿದ್ದಾರೆ.


ಕ್ರಿಸ್ತನ ವಾಕ್ಯವಾದ “ಒಂದು ಅಂಗಕ್ಕೆ ನೋವಾದರೆ, ಎಲ್ಲಾ ಅಂಗಗಳೂ ಅದರೊಂದಿಗೆ ನೋವನ್ನು ಅನುಭವಿಸುತ್ತವೆ.” (1 ಕೊರಿಂಥದವರಿಗೆ 12:26) ಎಂಬುದನ್ನು ಉಲ್ಲೇಖಿಸಿರುವ DAPC, ಸಂಕಷ್ಟದಲ್ಲಿರುವ ಕುಟುಂಬಗಳಿಗಾಗಿ ಪ್ರಾರ್ಥಿಸುವುದರ ಜೊತೆಗೆ, ಸಮುದಾಯವು ಶಾಂತಿ, ಒಗ್ಗಟ್ಟು ಮತ್ತು ಸತ್ಯದ ಹಾದಿಯಲ್ಲಿ ಸಾಗುವಂತೆ ಪತ್ರಿಕಾ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.





