ಪೆಂತೆಕೋಸ್ತ್ ಕ್ರೈಸ್ತ ಸಮುದಾಯದ ಸಮಸ್ಯೆಗಳ ಅಧ್ಯಯನಕ್ಕೆ 3 ಸದಸ್ಯರ ಸಮಿತಿ – ಸಚಿವ ಯು.ಟಿ. ಖಾದರ್ ಭರವಸೆ
ಬೆಂಗಳೂರು: ರಾಜ್ಯದ ಕ್ರೈಸ್ತ ಸಮುದಾಯ, ಅದರಲ್ಲೂ ವಿಶೇಷವಾಗಿ ಪೆಂತೆಕೋಸ್ತ್ ಕ್ರೈಸ್ತ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಕಾಳಜಿಗಳಿಗೆ ಸ್ಪಂದಿಸಿರುವ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಸನ್ಮಾನ್ಯ ಯು. ಟಿ. ಖಾದರ್ ಫರೀದ್, ಅವರು ಈ ಕುರಿತು ಸವಿಸ್ತಾರವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಭರವಸೆ ನೀಡಿದ್ದಾರೆ.


ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನಿಯೋಗವು ಇಂದು ಆಗಸ್ಟ್ 19ರಂದು ಬುಧವಾರ ಬೆಂಗಳೂರಿನಲ್ಲಿರುವ ಸಚಿವರ ಕಚೇರಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಸನ್ಮಾನ್ಯ ಯು.ಟಿ. ಖಾದರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿತು. ಈ ಸಂದರ್ಭದಲ್ಲಿ ಸಮುದಾಯದ ವಿವಿಧ ಬೇಡಿಕೆಗಳು, ಕಾಳಜಿಗಳು ಹಾಗೂ ಕಲ್ಯಾಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಸಚಿವರ ಗಮನಕ್ಕೆ ತರಲಾಯಿತು.


ನಿಯೋಗದ ಕುಂದುಕೊರತೆಗಳನ್ನು ಆಲಿಸಿದ ಸಚಿವರು, ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಅಧಿವೇಶನ ಮುಗಿದ ತಕ್ಷಣ DAPC ಆರ್ಚ್ಬಿಷಪ್ ಡಾ. ವಿನೋದ್ ಚಾಕೋ ಅವರೊಂದಿಗೆ ವಿಶೇಷ ಸಭೆ ನಡೆಸಿ ವಿಸ್ತೃತವಾಗಿ ಚರ್ಚಿಸುವುದಾಗಿ ತಿಳಿಸಿದರು. ಜೊತೆಗೆ ಸಮುದಾಯದ ಸಮಸ್ಯೆಗಳ ಅಧ್ಯಯನಕ್ಕೆ ಮೂವರು ಸದಸ್ಯರ ಸಮಿತಿ ರಚಿಸುವ ಭರವಸೆ ನೀಡಿದರು.
ಈ ನಿಯೋಗದ ನೇತೃತ್ವವನ್ನು ಆರ್ಚ್ಬಿಷಪ್ ರೆವರೆಂಡ್ ಡಾ. ವಿನೋದ್ ಎಂ. ಚಾಕೋ ಹಾಗೂ ಅಸಿಸ್ಟೆಂಟ್ ಆರ್ಚ್ಬಿಷಪ್ ರೆವರೆಂಡ್ ಸುನಿಲ್ ವಿ. ಜೇಕಬ್ ವಹಿಸಿದ್ದರು. DAPC ನಿರ್ದೇಶಕರು ಹಾಗೂ ಸಲಹೆಗಾರರಾದ ಪಾಸ್ಟರ್ ಕದಂ ಉಪಸ್ಥಿತರಿದ್ದರು.


ಸಚಿವರ ಈ ಧನಾತ್ಮಕ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿರುವ DAPC, ಸರ್ಕಾರದ ಈ ಕ್ರಮದಿಂದ ಪೆಂತೆಕೋಸ್ತ್ ಕ್ರೈಸ್ತ ಸಮುದಾಯದ ನೈಜ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಲಿದ್ದು, ಸರ್ಕಾರ ಹಾಗೂ ಸಮುದಾಯದ ನಡುವಿನ ಬಾಂಧವ್ಯ ಮತ್ತಷ್ಟು ಬಲಗೊಳ್ಳಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದೆ.



