ಸ್ನೇಹ ಸದನದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಅಗತ್ಯ ವಸ್ತುಗಳ ವಿತರಣೆ
80 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 15ರಂದು ಕಾರವಾರದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಉರ್ವಾ ಹಾಗೂ ವಾಲೆನ್ಸಿಯಾ ಶಾಖೆಗಳ ಜಂಟಿ ಆಶ್ರಯದಲ್ಲಿ ಗುರುಪುರ ಕೈಕಂಬದ ‘ಸ್ನೇಹ ಸದನ’ (ಎಚ್ಐವಿ ಪೀಡಿತ ವಿದ್ಯಾರ್ಥಿಗಳ ಆಶ್ರಮ)ದಲ್ಲಿ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.




ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ನೇಹ ಸದನ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಸುನಿಲ್ ಜೋಸೆಫ್ ಅವರು, “ಸೈಂಟ್ ಮಿಲಾಗ್ರಿಸ್ ಸಂಸ್ಥೆಯು ಹಣಕಾಸು ವ್ಯವಹಾರಗಳ ಜೊತೆಗೆ ಹಲವಾರು ಸಮಾಜಮುಖಿ ಹಾಗೂ ಮಾನವೀಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಆಶ್ರಮದ ಎಲ್ಲಾ ವಿದ್ಯಾರ್ಥಿಗಳಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.










ಕಾರ್ಯಕ್ರಮದ ವೇದಿಕೆಯಲ್ಲಿ ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಮಂಗಳೂರು-ಪುತ್ತೂರು ವಿಭಾಗದ ಅಭಿವೃದ್ಧಿ ಅಧಿಕಾರಿ ನಾಗರಾಜ್ ಮಡಿವಾಳ್, ವಾಲೆನ್ಸಿಯಾ ಶಾಖೆಯ ವ್ಯವಸ್ಥಾಪಕರಾದ ಐವನ್ ವಿವಿಯನ್ ವೇಗಸ್, ಉರ್ವಾ ಶಾಖೆಯ ವ್ಯವಸ್ಥಾಪಕರಾದ ಮೆಲ್ ರೋಯ್ ಪ್ರೇಮ್ ಡಿಸೋಜ ಹಾಗೂ ಸಂಸ್ಥೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.


ಸಂಸ್ಥೆಯ ಸಿಬ್ಬಂದಿ ಚೈತ್ರಾ ಪ್ರಾರ್ಥಿಸಿ, ಎಲ್ಲರನ್ನೂ ಸ್ವಾಗತಿಸಿದರು. ರೀಮಾ ಲೂಯಿಸ್ ವಂದನಾರ್ಪಣೆ ಸಲ್ಲಿಸಿದರು. ವಾಲೆನ್ಸಿಯಾ ಶಾಖೆಯ ಸಹಾಯಕ ವ್ಯವಸ್ಥಾಪಕಿ ನೇಹಾ ಫೆರ್ನಾಂಡಿಸ್ ಸಮಾರಂಭವನ್ನು ಅತ್ಯುತ್ತಮವಾಗಿ ನಿರೂಪಿಸಿದರು.





