ಹಸಿರು ಕನಸಿನ ಪ್ರಕೃತಿಗಾಗಿ ದೇಲಂತಬೆಟ್ಟು ಯುವ ಹೃದಯಗಳ ಹಾದಿ
ಯುವಜನರ ಹಸಿರು ಚಳವಳಿ — “ಗ್ರೀನ್ ಹಾರ್ಟ್ 2025” ಕಾರ್ಯಕ್ರಮದೊಂದಿಗೆ ಪರಿಸರ ಸಂರಕ್ಷಣೆಗೆ ಬದ್ಧತೆ

ಗಿಡ ನೆಟ್ಟ ಕೈಗಳು – ಭೂಮಿಗೆ ಜೀವ ತುಂಬಿದ ಹೃದಯಗಳು

ಭಾರತೀಯ ಯುವ ಸಂಚಲನ (ICYM) ಸಂತ ಪೌಲರ ದೇವಾಲಯ, ದೇಲಂತಬೆಟ್ಟು ಘಟಕದ ವತಿಯಿಂದ “ಗ್ರೀನ್ ಹಾರ್ಟ್ 2025 – Heartbeat of Nature” ಎಂಬ ವಿಶೇಷ ಪರಿಸರ ಸಂರಕ್ಷಣಾ ಚಳವಳಿ ಅಕ್ಟೋಬರ್ 5ರಂದು ಭಾನುವಾರ ಬೆಳಿಗ್ಗೆ 11ರಿಂದ ಸಂಜೆ 3.30ರವರೆಗೆ ಉತ್ಸಾಹಭರಿತವಾಗಿ ನಡೆಯಿತು.






ಗಿಡ ನೆಟ್ಟ ಕೈಗಳು – ಭೂಮಿಗೆ ಜೀವ ತುಂಬಿದ ಹೃದಯಗಳು
ದೇಲಂತಬೆಟ್ಟು ಗುಡ್ಡದಿಂದ ಪ್ರಾರಂಭವಾದ ಈ ಹಸಿರು ಪಯಣ ಕಳಂಜಿಮಲೆ ಅರಣ್ಯ ಪ್ರದೇಶದವರೆಗೆ ನಡೆದಿತು. ಅರಣ್ಯ ಪ್ರದೇಶದಲ್ಲಿ ಭಾಗವಹಿಸಿದವರು ಪ್ಲಾಸ್ಟಿಕ್ ತೆರವು, ಬಿದಿರಿನ ಬೀಜ ಚೆಲ್ಲಿ, ಸುಮಾರು 75 ಗಿಡಗಳನ್ನು ನೆಡುವ ಮೂಲಕ ಪ್ರಕೃತಿಯ ಮಡಿಲಿನಲ್ಲಿ ನಾಲ್ಕು ಗಂಟೆಗಳ ಕಾಲ ಅರ್ಥಪೂರ್ಣ ಸೇವೆಯನ್ನು ಸಲ್ಲಿಸಿದರು. ಈ ಶ್ರೇಷ್ಠ ಕಾರ್ಯದಲ್ಲಿ ಸುಮಾರು 25 ಮಂದಿ ಯುವಕರು, ಯುವತಿಯರು ಹಾಗೂ ಚರ್ಚ್ ಸದಸ್ಯರು ಭಾಗವಹಿಸಿದರು.





ಕಾರ್ಯಕ್ರಮವನ್ನು ಸಂತ ಪೌಲರ ದೇವಾಲಯದ ಧರ್ಮಗುರು ವಂದನೀಯ ಫಾದರ್ ರಿಚ್ಚರ್ಡ್ ಡಿಸೋಜರವರು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು “ಪ್ರಕೃತಿಯನ್ನು ಕಾಪಾಡುವುದು ದೇವರ ಸೃಷ್ಟಿಯತ್ತ ಕೃತಜ್ಞತೆ ತೋರಿಸುವ ಅತ್ಯಂತ ಶ್ರೇಷ್ಠ ಮಾರ್ಗ. ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮ ಭವಿಷ್ಯ ಪೀಳಿಗೆಯ ಉಸಿರು. ಪ್ರತಿಯೊಬ್ಬ ಯುವಕನ ಹೃದಯವೂ ಪ್ರಕೃತಿಗಾಗಿ ಮಿಡಿಯಬೇಕು. ಮರಗಳನ್ನು ನೆಡುವುದರಿಂದ ನಾವು ಭೂಮಿಗೆ ಜೀವ ನೀಡುತ್ತಿದ್ದೇವೆ. ಸಣ್ಣ ಪ್ರಯತ್ನಗಳೇ ದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತವೆ.” ಎಂದರು.



ಫಾದರ್ ರಿಚ್ಚರ್ಡ್ ಡಿಸೋಜರವರು ಪರಿಸರ ಜಾಗೃತಿ, ಪ್ಲಾಸ್ಟಿಕ್ ನಿರ್ಮೂಲನ, ಅರಣ್ಯ ನಾಶದ ತಡೆ ಹಾಗೂ ಪ್ರಕೃತಿಯ ಪ್ರೇಮ ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ರಾಬರ್ಟ್ ಡಿಸೋಜ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ದೇಲತಂಬೆಟ್ಟು ಘಟಕ ಇದರ ಅಧ್ಯಕ್ಷ ರಾಜೇಶ್ ಡಿಸೋಜ, ಯುವಕ-ಯುವತಿಯರು ಹಾಗೂ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ಹಸಿರು ಚಳವಳಿಗೆ ಬೆಂಬಲ ಸೂಚಿಸಿದರು.






