ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಹೊಸ ದಿಕ್ಸೂಚಿ – ಧರ್ಮಸ್ಥಳದಲ್ಲಿ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ!
ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ನೂತನ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಅನ್ನು ದೇಶದ ಗೌರವಾನ್ವಿತ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ವರ್ಚುವಲ್ ಮೂಲಕ ಬಟನ್ ಒತ್ತುವುದರೊಂದಿಗೆ ಅಧಿಕೃತವಾಗಿ ಉದ್ಘಾಟಿಸಿದರು. ಬೆಳ್ತಂಗಡಿ ಹೊರವಲಯದ ರೆಂಕೆದಗುತ್ತು ಎಂಬಲ್ಲಿ 7 ಎಕರೆ ಜಾಗದಲ್ಲಿ, 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ತಲೆ ಎತ್ತಿರುವ ಈ ಬೃಹತ್ ಕೈಗಾರಿಕಾ ಪಾರ್ಕ್, ಗ್ರಾಮೀಣ ಭಾಗದ ಯುವ ಉದ್ಯಮಿಗಳಿಗೆ ಹಾಗೂ ಮಹಿಳಾ ಸಬಲೀಕರಣಕ್ಕೆ ಹೊಸ ಶಕ್ತಿ ನೀಡಲಿದೆ.




ಉಪ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಶ್ಲಾಘನೆ:
ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿ ಗೌರವಾನ್ವಿತ ಸಿ.ಪಿ. ರಾಧಾಕೃಷ್ಣನ್ ಅವರು, “ಕಳೆದ ಆರು ದಶಕಗಳಿಂದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸಾಮಾಜಿಕ ಪರಿವರ್ತನೆಯ ಕಾರ್ಯಗಳು ಮೇರು ಸದೃಶವಾದವು. ಅನ್ನ, ಜ್ಞಾನ, ಆರೋಗ್ಯ ಮತ್ತು ಅಭಯ ದಾನಗಳ ಮೂಲಕ ಬೆಳಗುತ್ತಿರುವ ಧರ್ಮಸ್ಥಳದ ಕಾರ್ಯಗಳು ಪ್ರಧಾನಿ ಮೋದಿಯವರ ‘ವಿಕಸಿತ ಭಾರತ 2047’ರ ಕನಸಿಗೆ ಪೂರಕವಾಗಿವೆ” ಎಂದು ಕೊಂಡಾಡಿದರು.
ಇದೇ ವೇಳೆ ಮಾತನಾಡಿದ ಘನತವೆತ್ತ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು, “ಭವಿಷ್ಯದ ಭಾರತವು ಕೈಗಾರಿಕಾ ಭಾರತವಾಗಲಿದ್ದು, ‘ಸಿರಿ’ ಸಂಸ್ಥೆಯ ಕೊಡುಗೆ ಇದರಲ್ಲಿ ಮಹತ್ವದ್ದಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ಹಾದಿಯಲ್ಲಿ ಈ ಪಾರ್ಕ್ ಹೊಸ ಮೈಲುಗಲ್ಲು” ಎಂದು ಆಶಿಸಿದರು.



‘ಮಾತೃಶ್ರೀ’ ಹೆಸರಿನ ಹಿಂದಿನ ಶಕ್ತಿ – ಡಾ. ವೀರೇಂದ್ರ ಹೆಗ್ಗಡೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, “ಮಾತೃಶ್ರೀ ಎನ್ನುವುದು ತಾಯ್ತನದ ಸಂಕೇತ. ಮಹಿಳೆ ಕೇವಲ ಕುಟುಂಬದ ಸದಸ್ಯೆಯಲ್ಲ, ಸಮಾಜಕ್ಕೆ ಶಕ್ತಿ ತುಂಬುವ ಚೈತನ್ಯ. ‘ಸಿರಿ’ ಸಂಸ್ಥೆಯಲ್ಲಿ ಈಗಾಗಲೇ 3 ಸಾವಿರಕ್ಕೂ ಹೆಚ್ಚು ಮಹಿಳೆಯರು ನೇರ ಉದ್ಯೋಗದಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲು ಈ ಪಾರ್ಕ್ಗೆ ‘ಮಾತೃಶ್ರೀ’ ಎಂದು ಹೆಸರಿಡಲಾಗಿದೆ” ಎಂದರು. ದಶಕಗಳ ಹಿಂದೆ ಹಳ್ಳಿಗಳ ಕಷ್ಟದ ಬದುಕನ್ನು ಕಂಡು, ಸ್ವಾವಲಂಬನೆಗಾಗಿ 2004ರಲ್ಲಿ ಆರಂಭಿಸಿದ ‘ಸಿರಿ’ ಸಂಸ್ಥೆ ಇಂದು ಬೃಹತ್ ಆಗಿ ಬೆಳೆದಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.






‘ಸಿರಿ’ ಸಂಸ್ಥೆಯ ಸಾಧನೆಯ ನೋಟ:
* ವಿಸ್ತೀರ್ಣ: 7 ಎಕರೆ ಜಾಗ, 1.50 ಲಕ್ಷ ಚದರ ಅಡಿ ವಿಸ್ತೀರ್ಣ.
* ಉದ್ಯೋಗಾವಕಾಶ: 3,000 ನೇರ ಉದ್ಯೋಗ ಹಾಗೂ 10,000ಕ್ಕೂ ಹೆಚ್ಚು ಪರೋಕ್ಷ ಉದ್ಯೋಗ ಸೃಷ್ಟಿ (ಹೆಚ್ಚಿನವರು ಗ್ರಾಮೀಣ ಮಹಿಳೆಯರು).

ಗಣ್ಯರ ಉಪಸ್ಥಿತಿ ಮತ್ತು ಗೌರವಾರ್ಪಣೆ:
ಕಾರ್ಯಕ್ರಮದಲ್ಲಿ ‘ಸಿರಿ’ ಸಂಸ್ಥೆಯ ನೂತನ ಕ್ಯಾಟಲಾಗ್ ಮತ್ತು ಮಾಹಿತಿ ವೀಡಿಯೋವನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಎಸ್ಡಿಎಂ ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಹಾಗೂ ಸಿರಿ ಸಂಸ್ಥೆಯ ಬ್ರ್ಯಾಂಡ್ ರಾಯಭಾರಿ, ನಟ ರಮೇಶ್ ಅರವಿಂದ್ ಉಪಸ್ಥಿತರಿದ್ದರು. ‘ಸಿರಿ’ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರೊಫೆಸರ್ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬಂದಿದ್ದ ಎಲ್ಲಾ ಗಣ್ಯರಿಗೆ ಆತ್ಮೀಯವಾಗಿ ಗೌರವ ಸಲ್ಲಿಸಲಾಯಿತು.



